ಕೊಟ್ಟಿಗೆಹಾರ: 2019ರಲ್ಲಿ ಸುರಿದ ಮಹಾಮಳೆಯಿಂದ ನೆಲೆ ಕಳೆದುಕೊಂಡ ಮಧುಗುಂಡಿ, ಹಲಗಡಕ, ದುರ್ಗದಹಳ್ಳಿ, ಬಿದಿರುತಳದ 40 ನಿರಾಶ್ರಿತ ಕುಟುಂಬಗಳಿಗೆ ಬಿ.ಹೊಸಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಕಲ್ ಸುಣ್ಣದಗೂಡಿನ ಸಮೀಪ ಪರ್ಯಾಯ ಜಾಗ ನೀಡಿದ ಪ್ರದೇಶದಲ್ಲಿ ಮಳೆ ನೀರು ಮನೆ ಬಾಗಿಲಿಗೆ ನುಗ್ಗುತ್ತಿದೆ.
ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದರಿಂದ ಮಳೆ ನೀರು ಎಲ್ಲೆಂದರಲ್ಲಿ ಮನೆ ಒಳಗೂ ನುಗ್ಗುತ್ತಿದ್ದು, ಇದರಿಂದಾಗಿ ಮಣ್ಣಿನ ಸವಕಳಿ ಉಂಟಾಗಿ ಕೆಲ ಮನೆಗಳ ತಳಪಾಯ ಕುಸಿಯುವ ಭೀತಿ ಎದುರಾಗಿದೆ. ಮಣ್ಣು ಕುಸಿದ ಕೆಲ ಕಡೆಗಳಲ್ಲಿ ಮನೆಯವರೇ ಮರದ ಹಲಗೆಗಳನ್ನು ಆಧಾರವಾಗಿ ಇಟ್ಟಿದ್ದಾರೆ.
ಈ ಬಗ್ಗೆ ಪತ್ರಿಕೆ ಜತೆ ಮಾತನಾಡಿದ ಮಧುಗುಂಡಿಯ ನೆರೆ ಸಂತ್ರಸ್ತ ವಿಜೇಂದ್ರ, ‘ನೀರು, ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೂಡ ಪ್ರಯೋಜನವಾಗಿಲ್ಲ. ಚರಂಡಿ ವ್ಯವಸ್ಥೆ ಇಲ್ಲದೇ ಎಲ್ಲೆಂದರಲ್ಲಿ ಮಳೆ ನೀರು ನುಗ್ಗಿ ಮನೆಯ ತಳಪಾಯಕ್ಕೆ ಹಾನಿಯಾಗುವ ಸಾಧ್ಯತೆ ಇದ್ದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚರಂಡಿ ನಿರ್ಮಿಸಲು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.
‘ನೆರೆ ಸಂತ್ರಸ್ತರ ಮನೆಗಳಿಗೆ ಮೂಲ ಸೌಕರ್ಯ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಚರಂಡಿ ವ್ಯವಸ್ಥೆ ಕಲ್ಪಿಸಲು ಕಾಮಗಾರಿಗೆ ಅನುಮೋದನೆ ದೊರೆತ್ತಿದ್ದು ಸದ್ಯದಲ್ಲೆ ಚರಂಡಿ ಕಾಮಗಾರಿ ಪ್ರಾರಂಭವಾಗಲಿದೆ. ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಬಿ.ಹೊಸಹಳ್ಳಿ ಪಿಡಿಒ ಸಿಂಚನಾ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.