
ಚಿಕ್ಕಮಗಳೂರು: ಬಸವತತ್ವ ಪೀಠದ ಸುವರ್ಣ ಮಹೋತ್ಸವ ಹಾಗೂ ಬಸವತತ್ವ ಸಮಾವೇಶ ಫೆ.24ರಿಂದ 28 ರವರೆಗೆ ದೊಡ್ಡಕುರುಬರಹಳ್ಳಿಯ ಬಸವ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಸವ ತತ್ವ ಪೀಠದ ಅಧ್ಯಕ್ಷ ಬಸವ ಮರುಳಸಿದ್ಧಸ್ವಾಮಿ ತಿಳಿಸಿದರು.
ಫೆ.27ರಂದು ಬೆಳಿಗ್ಗೆ 6.30ಕ್ಕೆ ಇಷ್ಟಲಿಂಗ ಪೂಜೆ ಹಾಗೂ ದೀಕ್ಷಾ ಕಾರ್ಯಕ್ರಮ ನಡೆಯಲಿದೆ. 7.30ಕ್ಕೆ ಷಡುಸ್ಥಲ ಧ್ವಜಾರೋಹಣ, 8ಕ್ಕೆ ಜಯಚಂದ್ರಶೇಖರ ಸ್ವಾಮೀಜಿ ಗದ್ದುಗೆಗೆ ವಚನಾಭಿಷೇಕ ಪೂಜೆ ನಡೆಯಲಿದೆ. ಬೆಳಿಗ್ಗೆ 8.30ಕ್ಕೆ ಬಸವಣ್ಣ, ಚಂದ್ರಶೇಖರ ಸ್ವಾಮೀಜಿ ಅವರ ಉತ್ಸವ ನಡೆಯಲಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂದು ಸಂಜೆ 6.30ಕ್ಕೆ ಸಮಾವೇಶದಲ್ಲಿ ಸಾಹಿತಿ ಬಿ.ತಿಪ್ಪೇರುದ್ರಪ್ಪ ಅವರಿಂದ ಉಪನ್ಯಾಸ ನಡೆಯಲಿದೆ. ಧಾರವಾಡ ಮುರುಘಾ ಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಕಡೂರಿನ ಯಳನಾಡು ಸಂಸ್ಥಾನದ ಜ್ಞಾನಪ್ರಭು ಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಸಿಂದಿಗೆರೆ ಕರಡಿ ಗವಿಮಠದ ಶಿವಶಂಕರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾವೇಶವನ್ನು ಸಚಿವ ವಿ.ಸೋಮಣ್ಣ ನೆರವೇರಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಟಿ.ಡಿ.ರಾಜೇಗೌಡ, ನಯನಾ ಮೋಟಮ್ಮ, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ, ಎಸ್.ಎಲ್. ಭೋಜೇಗೌಡ ಭಾಗವಹಿಸಲಿದ್ದಾರೆ ಎಂದರು.
ಫೆ.28ರಂದು ಬೆಳಿಗ್ಗೆ 7.30ಕ್ಕೆ ಇಷ್ಟಲಿಂಗ ಪೂಜಾ ಪ್ರಾತ್ಯಕ್ಷಿಕೆ ನಡೆಯಲಿದೆ. ಅಂದು ಸಂಜೆ ನಡೆಯುವ ಸಮಾವೇಶದಲ್ಲಿ ‘ವಚನಗಳಲ್ಲಿ ರಾಷ್ಟ್ರೀಯ ಮೌಲ್ಯಗಳು’ ವಿಷಯದ ಕುರಿತು ಸಾಹಿತಿ ಕುಮಾರ ಚಲ್ಯ ಉಪನ್ಯಾಸ ಮಾಡಲಿದ್ದಾರೆ. ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಭಾಗವಹಿಸಲಿದ್ದಾರೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಸಮಾವೇಶ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಫೆ.24, 26ರವರೆಗೆ ಮಠದ ಆವರಣದಲ್ಲಿ ಕರ್ನಾಟಕ ನಾಟಕ ಅಕಾಡೆಮಿಯ ಮೈಸೂರು ವಿಭಾಗ ಮಟ್ಟದ ನಾಟಕೋತ್ಸವ ನಡೆಯಲಿದೆ. ಫೆ.27, 28ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ ಶಿವಮೊಗ್ಗದ ಆದರ್ಶ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಿಂದ ನಡೆಸಲಾಗುವುದು. ಸಂಜೆ 5 ರಿಂದ 6 ರವರೆಗೆ ಮಲ್ಲಿಗೆ ಸುಧೀರ್ ಮತ್ತು ಎಂ.ಎಸ್. ಸುಧೀರ್ ಮಾರ್ಗದರ್ಶನದಲ್ಲಿ ವಚನ, ವಂದೇ ಮಾತರಂ, ನಾಡಗೀತೆಗಳ ಸಮೂಹ ಗಾಯನ ನೂರಕ್ಕೂ ಹೆಚ್ಚು ಮಾತೆಯರಿಂದ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಮುಖಂಡ ಸತೀಶ್ ಮಡಿಮನೆ, ಷಡಾಕ್ಷರಿ, ನಿರಂಜನ್, ರವಿಶ್ ಖ್ಯಾತನಬೀಡು, ಚಿದಾನಂದ, ಕಲ್ಮರುಡಪ್ಪ, ರುದ್ರಮೂರ್ತಿ, ವಿನಾಯಕ, ಸೋಮಶೇಖರ್, ಶಿವಾನಂದ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.