ಶಮಂತ್, ತಾಯಿ ರತ್ನಕಲಾ
ಕಳಸ(ಚಿಕ್ಕಮಗಳೂರು): ಭದ್ರಾ ನದಿಗೆ ಪಿಕ್ಅಪ್ ವಾಹನ ಬಿದ್ದು ಮಗ ಕಣ್ಮರೆಯಾದ ದುಃಖ ಸಹಿಸದೆ ತಾಯಿ ಕೂಡ ಗುರುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಣಪತಿಕಟ್ಟೆ ಶಮಂತ್(22) ಅವರು ಓಡಿಸುತ್ತಿದ್ದ ಪಿಕ್ಅಪ್ ವಾಹನ ಕಳಸ-ಕಳಕೋಡು ರಸ್ತೆಯ ಕೊಳಮಗೆ ಬಳಿ ರಸ್ತೆ ಪಕ್ಕದಲ್ಲಿ ಹರಿಯುವ ಭದ್ರಾ ನದಿಗೆ ಗುರುವಾರ ಮಧ್ಯಾಹ್ನ ಉರುಳಿತ್ತು. ಸಂಜೆಯಾದರೂ ಶಮಂತ್ ಪತ್ತೆಯಾಗಿಲ್ಲ.
ಅವರ ತಾಯಿ ರತ್ನಕಲಾ(45) ಅಪಘಾತ ನಡೆದ ಸ್ಥಳಕ್ಕೆ ತೆರಳಿ ಮಗನಿಗಾಗಿ ಹುಡುಕಾಡಿದ್ದರು. ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದುಕೊಂಡು ಹೋಗಿ ಕೆಲಸ ಮಾಡಿಸುವ ಮೇಸ್ತ್ರಿಯಾಗಿದ್ದ ರತ್ನಕಲಾ ಅವರು, ಇದೇ ಉದ್ದೇಶಕ್ಕೆ ಮಗನಿಗೆ ಪಿಕ್ ಅಪ್ ವಾಹನವನ್ನು 6 ತಿಂಗಳ ಹಿಂದೆ ಕೊಡಿಸಿದ್ದರು. ಮಗ ವಾಹನದ ಸಮೇತ ಭದ್ರಾ ನದಿಗೆ ಬಿದ್ದಿರುವುದರಿಂದ ರತ್ನಕಲಾ ಆಘಾತಗೊಂಡಿದ್ದರು.
ರಾತ್ರಿ 10.30ರ ವೇಳೆಗೆ ಮನೆಯ ಸಮೀಪದ ಕೆರೆಗೆ ರತ್ನಕಲಾ ಹಾರಿದ್ದಾರೆ. ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನ ಮಾಡಿದರೂ ಅಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ತಾಯಿ ಮತ್ತು ಮಗನ ಸಾವಿನಿಂದ ಗಣಪತಿಕಟ್ಟೆ ಪ್ರದೇಶದಲ್ಲಿ ದುಃಖ ಆವರಿಸಿದೆ.
ನೂರಾರು ಕಾರ್ಮಿಕರು ಶುಕ್ರವಾರ ಕೆಲಸಕ್ಕೆ ಹೋಗದೆ ರತ್ನಕಲಾ ಅವರ ಮನೆ ಬಳಿ ಜಮಾಯಿಸಿದ್ದಾರೆ. ಭದ್ರಾ ನದಿಯಲ್ಲಿ ಶಮಂತ್ ಶವ ಹುಡುಕಾಟ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.