ADVERTISEMENT

ಚಿಕ್ಕಮಗಳೂರು: ಅಯ್ಯನಕೆರೆಗೆ ಭದ್ರೆ ಹರಿಯಲು ಬೇಕು 2 ವರ್ಷ

ವಿಜಯಕುಮಾರ್ ಎಸ್.ಕೆ.
Published 25 ಜುಲೈ 2025, 2:53 IST
Last Updated 25 ಜುಲೈ 2025, 2:53 IST
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಬಳಿ ಇರುವ ಅಯ್ಯನಕೆರೆ
ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಬಳಿ ಇರುವ ಅಯ್ಯನಕೆರೆ   

ಚಿಕ್ಕಮಗಳೂರು: ಅಯ್ಯನಕೆರೆಗೆ ಭದ್ರಾ ನೀರು ತರುವ ಬಹು ನಿರೀಕ್ಷಿತ ಯೋಜನೆ ಇನ್ನೂ ಟೆಂಡರ್ ಹಂತದಲ್ಲಿದ್ದು, ನೀರು ಹರಿಯಲು ಇನ್ನೂ ಕನಿಷ್ಠ ಎರಡು ವರ್ಷ ಕಾಯಬೇಕಿದೆ.

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಸುರಿಯುವ ಮಳೆ ನೀರಿ ಅಯ್ಯನಕೆರೆಗೆ ಜಲಮೂಲ. 18.45 ಹೆಕ್ಟೇರ್ ವಿಸ್ತೀರ್ಣವಿದ್ದು, 420 ಎಂಸಿಎಫ್‌ಟಿ (ಮಿಲಿಯನ್ ಕ್ಯುಬಿಕ್ ಮೀಟರ್) ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1,574 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದ್ದು, ಅಷ್ಟೂ ಜಮೀನಿಗೆ ಈ ಕೆರೆಯ ನೀರು ಜೀವನಾಡಿ. ಸಖರಾಯಪಟ್ಟಣಕ್ಕೆ ಕುಡಿಯುವ ನೀರನ್ನೂ ಈ ಕೆರೆಯಿಂದ ಪೂರೈಸಲಾಗುತ್ತಿದೆ. 

ಕೆರೆ ತುಂಬಿ ಕೋಡಿಯಲ್ಲಿ ಹರಿಯುವ ಹೆಚ್ಚುವರಿ ನೀರು ವೇದಾವತಿ ನದಿಯ ಮೂಲಕ ವಾಣಿವಿಲಾಸ ಸಾಗರದ ತನಕ ಹರಿಯುತ್ತದೆ. ಈ ನೀರು ಕಡೂರು ತಾಲ್ಲೂಕಿನ ಹಲವು ಹಳ್ಳಿಗಳಿಗೆ ಜೀವಜಲವಾಗಿದೆ. ಮಳೆಗಾಲ ಕಡಿಮೆಯಾದರೂ ಕೆರೆ ಭರ್ತಿಯಾಗುವುದಿಲ್ಲ. ಈ ಕೆರೆ ಭರ್ತಿಯಾಗದಿದ್ದರೆ ಅಚ್ಚುಕಟ್ಟು ಪ್ರದೇಶ ಮತ್ತು ಕೋಡಿ ಮೂಲಕ ಹರಿಯುವ ನೀರು ನಂಬಿರುವ ಗ್ರಾಮಗಳ ರೈತರಿಗೂ ತೊಂದರೆಯಾಗಲಿದೆ.

ADVERTISEMENT

ಈ ವರ್ಷ ಗಿರಿ ಶ್ರೇಣಿಯಲ್ಲಿ ಉತ್ತಮವಾಗಿ ಮಳೆಯಾಗಿದ್ದರೂ ಇನ್ನೂ ಭರ್ತಿಯಾಗಿಲ್ಲ. ಮಳೆಗಾಲ ಆರಂಭದಲ್ಲಿ ಹೆಚ್ಚು ನೀರು ಬಂದಿದ್ದು, ಬಳಿಕ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಸದ್ಯ ಶೇ 82ರಷ್ಟು ಪ್ರಮಾಣದ ನೀರು ಬಂದಿದೆ. 344.81 ಎಂಸಿಎಫ್‌ಸಿಯಷ್ಟು ನೀರು ಸಂಗ್ರಹವಾಗಿದೆ. ಮಳೆ ಜೋರಾದರೆ ವಾರದಲ್ಲೇ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಈ ಕೆರೆಗೆ ಭದ್ರಾ ನದಿ ನೀರನ್ನು ಹರಿಸಲು ಯೋಜನೆ ರೂಪಿಸಲಾಗಿದೆ. ಭದ್ರಾ ನದಿಯಿಂದ ತರೀಕೆರೆ, ಕಡೂರು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಕೆಲ ಕೆರೆಗಳನ್ನು ತುಂಬಿಸಲು ₹1281.8 ಕೋಟಿ ಮೊತ್ತದ ಯೋಜನೆಯನ್ನು ಜಲ ಸಂಪನ್ಮೂಲ ಇಲಾಖೆ ಯೋಜನೆ ರೂಪಿಸಿದೆ. ನಾಲ್ಕು ಹಂತದಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ.

ಮೊದಲನೇ ಹಂತದಲ್ಲಿ ತರೀಕೆರೆ, 51 ಮತ್ತು ಕಡೂರು ತಾಲ್ಲೂಕಿನ 3 ಕೆರೆಗಳು ಸೇರಿ 54 ಕೆರೆಗಳನ್ನು ತುಂಬಿಸಲು ಯೋಜನೆ ರೂಪಿಸಲಾಗಿದೆ. ಮೊದಲ ಹಂತದ ಕಾಮಗಾರಿ ಶೇ 85ರಷ್ಟು ಪೂರ್ಣಗೊಂಡಿದ್ದು, ಅಕ್ಟೋಬರ್‌ನಲ್ಲಿ ಪ್ರಾಯೋಗಿಕವಾಗಿ ನೀರು ಹರಿಸಲು ಸಿದ್ಧತೆ ನಡೆಯುತ್ತಿದೆ.

ಎರಡನೇ ಹಂತದಲ್ಲಿ 78 ಕೆರೆಗಳನ್ನು ತುಂಬಿಸಲು ಯೋಜಿಸಲಾಗಿದ್ದು, ಈ ಕಾಮಗಾರಿ ಶೇ 40ರಷ್ಟು ಪೂರ್ಣಗೊಂಡಿದೆ. ಮೂರನೇ ಹಂತದ ಕಾಮಗಾರಿ ಇನ್ನಷ್ಟೇ ಆರಂಭವಾಗಬೇಕಿದೆ. ಲಭ್ಯ ಇರುವ ಅನುದಾನದಲ್ಲಿ ಕಾಮಗಾರಿ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ತಾಂತ್ರಿಕ ಬಿಡ್ ತೆರೆಯಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಮೂರನೇ ಹಂತದ ಯೋಜನೆಯಲ್ಲಿ ಅಯ್ಯನಕೆರೆ ಮತ್ತು ಬೆಳವಾಡಿ ಕೆರೆಗಳು ಸೇರಿವೆ. ಕಡೂರು ತಾಲ್ಲೂಕಿನ ತಂಗಲಿ ಕೆರೆಯಿಂದ ಅಯ್ಯನಕೆರೆಗೆ ನೀರನ್ನು ಲಿಫ್ಟ್ ಮಾಡಬೇಕಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಕಾಮಗಾರಿ ಆರಂಭಿಸಲು ಇನ್ನೂ ಸಮಯ ಬೇಕಾಗಲಿದೆ. ಕಾಮಗಾರಿ ಆರಂಭಗೊಂಡರೆ ಪೂರ್ಣಗೊಳಿಸಲು 24 ತಿಂಗಳು ಕಾಲಾವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.

ಕಾಮಗಾರಿ ಪೂರ್ಣಗೊಂಡರೆ ಕೆರೆಗೆ ಶೇ 30ರಷ್ಟು ಭದ್ರಾ ನದಿಯ ನೀರು ಪೂರೈಕೆಯಾಗಲಿದೆ. ಆದರೆ, ಈ ನೀರು ಹರಿಯಲು ಕನಿಷ್ಠ ಎರಡು ವರ್ಷ ಕಾಯಬೇಕಿದೆ.

ಭದ್ರಾ ನೀರಿನಿಂದ ಗೊಂದಲಗಳೂ ಇತ್ಯರ್ಥ

ಅಯ್ಯನಕೆರೆ ಕೋಡಿಯಿಂದ ಹರಿಯುವ ನೀರನ್ನು ಅಗ್ರಹಾರದ ಬಳಿಯ ಚೆಕ್‌ಡ್ಯಾಂನಿಂದ ನಾಗೇನಹಳ್ಳಿ ಹುಲಿಕೆರೆಯ ಬೆರಟಿಕೆರೆಗೆ ಹರಿಸುವ ₹9.99 ಕೋಟಿ ಮೊತ್ತದ ಯೋಜನೆ ಆರಂಭವಾಗಿದೆ.  ಅಯ್ಯನಕೆರೆ ಕೋಡಿಯಿಂದ ನೀರು ಹರಿಯುವಾಗ ಮಾತ್ರ ಬರಪೀಡಿತ ನಾಗೇನಹಳ್ಳಿ ಹುಲಿಕೆರೆಯ ಕೆರೆಗಳಿಗೆ ನೀರು ಪೂರೈಸಲು ಯೋಜಿಸಲಾಗಿದೆ. ಆದರೂ ಕಡೂರು ತಾಲ್ಲೂಕಿನ ಹಲವು ಹಳ್ಳಿಗಳ ರೈತರಿಂದ ವಿರೋಧ ವ್ಯಕ್ತವಾಗಿದೆ. ವೇದಾವತಿ ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಲಿದೆ ಎಂಬ ಆತಂಕ ಅಲ್ಲಿಯ ರೈತರದ್ದು. ಅಯ್ಯನಕೆರೆಗೆ ಭದ್ರಾ ನೀರು ಹರಿದರೆ ರೈತರ ಈ ಗೊಂದಲಗಳೂ ಪರಿಹಾರವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.