ಕಡೂರು: ಈ ಬಾರಿಯ ವಿಧಾನಸಭಾ ಅಧಿವೇಶನದಲ್ಲಿ ಕಡೂರು ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿದ್ದು, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.
ಸೋಮವಾರ ಮಚ್ಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲ್ಲೂಕಿನ ಕೆರೆಗಳನ್ನು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ಆಮೆ ಗತಿಯಲ್ಲಿ ಸಾಗುತ್ತಿರುವ ಕುರಿತು ಪ್ರಸ್ತಾಪಿಸಿ, ಈ ಯೋಜನೆಯನ್ನು ನಬಾರ್ಡ್ ಟ್ರಾಂಚಿ-29 ಲೆಕ್ಕ ಶೀರ್ಷಿಕೆಯಡಿ ಸೇರ್ಪಡೆಗೊಳಿಸಲು ಕೋರಿದ್ದೇನೆ. ಹಾಗಾದಲ್ಲಿ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ವೇಗ ದೊರೆಯುತ್ತದೆ. ನಬಾರ್ಡ್ ಟ್ರಾಂಚಿಗೆ ಸೇರ್ಪಡೆಯಾದರೆ ಅದು ಕಡೂರಿಗೆ ಲಾಭದಾಯಕವಾಗಲಿದೆ. ಭದ್ರಾ ಮೇಲ್ದಂಡೆ ಯೋಜನೆಗಾಗಿ ಭೂಮಿ ಕಳೆದುಕೊಂಡವರಿಗೆ ಶೀಘ್ರ ಪರಿಹಾರ ಧನ ನೀಡುವಂತೆಯೂ ಒತ್ತಾಯಿಸಿದ್ದೇನೆ ಎಂದರು.
ಕಡೂರಿನಲ್ಲಿ ಬಸ್ ನಿಲ್ದಾಣಕ್ಕೆ ಹೊಸ ಕಟ್ಟಡ ನಿರ್ಮಿಸಿ ಮೂಲಸೌಕರ್ಯ ಕಲ್ಪಿಸುವ ಕುರಿತು ಪ್ರಸ್ತಾಪಿಸಲಾಗಿದೆ. ಅದಕ್ಕೆ ಕಾಮಗಾರಿ ಅಂದಾಜು ಪಟ್ಟಿ ತಯಾರಿಸುವ ಕಾರ್ಯ ಪ್ರಗತಿಯಲ್ಲಿದೆ. ತಾಲ್ಲೂಕಿನ ರಸ್ತೆಗಳ ದುರಸ್ತಿ ಮತ್ತು ಮೇಲ್ದರ್ಜೆಗೇರಿಸುವುದು, ಗ್ರಾಮೀಣ ಪ್ರದೇಶದಲ್ಲಿ ಇ-ಸ್ವತ್ತು ಹಾಗೂ ಹಕ್ಕುಪತ್ರ ನೀಡಲು ಇರುವ ಅಡ್ಡಿಯನ್ನು ಬಗೆಹರಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಕ್ರಮ ಕೈಗೊಂಡಿರುವ ಕಂದಾಯ ಇಲಾಖೆ, ತಹಶೀಲ್ದಾರರಿಗೆ ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬಹುದಾದ ಗ್ರಾಮಗಳ ಬಗ್ಗೆ ವರದಿ ನೀಡಲು ಸೂಚಿಸಿದೆ ಎಂದರು.
ತಾಲ್ಲೂಕಿನ ಪಂಚನಹಳ್ಳಿ, ಯಗಟಿ ಮತ್ತು ಚೌಳಹಿರಿಯೂರುನಲ್ಲಿ ನಡೆಯುತ್ತಿರುವ ಮೊರಾರ್ಜಿ ವಸತಿ ಶಾಲೆಗಳಿಗೆ ಕಟ್ಟಡ ನಿರ್ಮಾಣಕ್ಕೆ, ವಿದ್ಯುತ್ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತಾಲ್ಲೂಕಿನ ಚೌಳಹಿರಿಯೂರು, ಕೆ.ಬಸವನಹಳ್ಳಿ, ಯಳಗೊಂಡನಹಳ್ಳಿ ಹಾಗೂ ಸರಸ್ವತಿಪುರದಲ್ಲಿ ಹೊಸದಾಗಿ ಸಬ್ಸ್ಟೇಷನ್ ಆರಂಭಿಸುವ ಮತ್ತು ಕೇಂದ್ರ ಸರ್ಕಾರದ ಮನವೊಲಿಸಿ ಬೆಂಬಲ ಬೆಲೆ ಕೊಬ್ಬರಿ ಖರೀದಿ ಕೇಂದ್ರವನ್ನು ಆರಂಭಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ. ಕಡೂರು ತಾಲ್ಲೂಕಿನಲ್ಲಿ ಎಲ್ಲ ಬೆಳೆಗಳಿಗೂ ನಷ್ಟ ಪರಿಹಾರ ನೀಡಲು ಸರ್ಕಾರಕ್ಕೆ ಒತ್ತಾಯಿಸಿದ್ದೇನೆ ಎಂದರು.
ಸರ್ಕಾರಿ ಜಾಗಗಳನ್ನು ಸರ್ವೆ ಮಾಡಿ ಗುರುತಿಸಲು ಕೋರಿದ್ದು, ಸರ್ಕಾರವೇ ಸರ್ವೆ ನಡೆಸಲು ಭೂಮಾಪಕರ ತಂಡ ಕಳುಹಿಸಿಕೊಡುವ ಭರವಸೆ ನೀಡಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.