ಬೀರೂರು: ತರೀಕೆರೆ- ಬೀರೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಶಿವಪುರ ಭಾರತ್ ಡಾಬಾ ಬಳಿ ಗುರುವಾರ ತಡರಾತ್ರಿ ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಸಾವನ್ನಪ್ಪಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ ನಿವಾಸಿಗಳಾದ ಮುನಿರಾಜು (65), ಸುಬ್ಬಲಕ್ಷ್ಮಿ (60) ಮತ್ತು ಜ್ಯೋತಿ (14) ಮೃತರು. ಇಕೋ ಕಾರಿನಲ್ಲಿ ಗುರುವಾರ ಸಿಗಂದೂರು ದೇವಾಲಯಕ್ಕೆ ತೆರಳಿ ಶಿಡ್ಲಘಟ್ಟಕ್ಕೆ ಮರಳುವಾಗ ಶಿವಪುರ ಗೇಟ್ ಸಮೀಪದಲ್ಲಿ ಬೀರೂರು ಕಡೆಯಿಂದ ಮುರುಡೇಶ್ವರ ಕಡೆಗೆ ಸಾಗುತ್ತಿದ್ದ ಟವೇರಾ ಕಾರು ಡಿಕ್ಕಿಯಾಗಿದೆ.
ಇಕೋ ಕಾರಿನಲ್ಲಿದ್ದ 6 ಜನರ ಪೈಕಿ ಮೂವರನ್ನು ಚಿಕಿತ್ಸೆಗೆ ಆಂಬುಲೆನ್ಸ್ ಮೂಲಕ ತರೀಕೆರೆಗೆ ಕಳುಹಿಸಲಾಗಿತ್ತು. ಮುನಿರಾಜು ಮತ್ತು ಜ್ಯೋತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರೆ, ಸುಬ್ಬಲಕ್ಷ್ಮಿ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.
ಉಳಿದಂತೆ ಚಾಲಕ ಮಂಜುನಾಥ್, ರಮ್ಯಾ ಮತ್ತು ಹೇಮಾರಿಗೆ ಸಣ್ಣಪುಟ್ಟ ಗಾಯಗಳಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಟವೇರಾ ಕಾರಿನ ಚಾಲಕ ಗಿರೀಶ್ ಮತ್ತು ಸಹಪ್ರಯಾಣಿಕ ದರ್ಶನ್ ತಲೆಗೆ ಪೆಟ್ಟಾಗಿದ್ದು, ಬೀರೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಸಂಬಂಧ ಬೀರೂರು ಪಿಎಸ್ಐ ರಾಜಶೇಖರ್ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿ ಪ್ರಕರಣದಾಖಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.