
ಕೊಪ್ಪ ಮಾರ್ಕೆಟ್ ರಸ್ತೆ ಕಾಮಗಾರಿ ಕಳಪೆಯಾಗುತ್ತಿದೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಕೆ.ದಿನೇಶ್ ಅವರ ನೇತೃತ್ವದಲ್ಲಿ ಬಿಜೆಪಿಗರು ಪ್ರತಿರೋಧ ವ್ಯಕ್ತಪಡಿಸಿದರು
ಕೊಪ್ಪ: ಪಟ್ಟಣದ ಮಾರ್ಕೆಟ್ ರಸ್ತೆ ಕಾಮಗಾರಿಯು ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಮಂಡಲ ಬಿಜೆಪಿ ಅಧ್ಯಕ್ಷ ಎಚ್.ಕೆ.ದಿನೇಶ್ ಹೊಸೂರ್ ನೇತೃತ್ವದಲ್ಲಿ ಪಕ್ಷದ ಮುಖಂಡರು ಮಂಗಳವಾರ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದರು.
ಎಂಜಿನಿಯರ್ ಭವಾನಿ ರಾವ್ ಅವರಿಗೆ ಕರೆ ಮಾಡಿದ ದಿನೇಶ್ ಹೊಸೂರ್, ‘ಯೋಜನೆ ಪ್ರಕಾರ ಕಾಮಗಾರಿ ನಡೆದಿಲ್ಲ. ಈ ಬಗ್ಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ನೀವು ಸ್ಥಳ ಪರಿಶೀಲನೆ ನಡೆಸಿದ್ದೀರಾ ಎಂದು ಪ್ರಶ್ನಿಸಿದರು. ಆಗ ಎಂಜಿನಿಯರ್, 'ಸುಮ್ಮನೆ ಖಾಲಿ ಕುಳಿತ ಕೆಲವರು ಕರೆ ಮಾಡುತ್ತಾರೆ. ಅಂತವರದ್ದು ಯಾರದ್ದೋ ಫೋನ್ ಕರೆ ಇರಬೇಕು ಎಂದು ಭಾವಿಸಿ ಕರೆ ಸ್ವೀಕರಿಸಿಲ್ಲ. ಸ್ಥಳ ಪರಿಶೀಲನೆ ನಡೆಸಿಲ್ಲ, ಇನ್ನೆರಡು ದಿನಗಳಲ್ಲಿ ಬಂದು ನೋಡುವೆ’ ಎಂದರು.
ಖಾಲಿ ಕುಳಿತವರು ಫೋನ್ ಮಾಡುತ್ತಾರೆ ಎಂಬ ಎಂಜಿನಿಯರ್ ಮಾತಿಗೆ ಸ್ಥಳದಲ್ಲಿದ್ದ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಇದೇ ವೇಳೆ ಕಳಪೆ ಕಾಮಗಾರಿ ಮುಂದುವರಿಸದಂತೆ ಒತ್ತಾಯಿಸಿದರು.
ಈ ವೇಳೆ ಮಾತನಾಡಿದ ದಿನೇಶ್ ಹೊಸೂರ್, ‘ಪಟ್ಟಣಕ್ಕೆ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಿಂದ ಒಟ್ಟು ₹ 1.15 ಕೋಟಿ ಮಂಜೂರು ಆಗಿದೆ. ಎರಡು ಸಣ್ಣ ರಸ್ತೆಗಳಿಗೆ ₹ 80 ಲಕ್ಷ ಹಣವಿದೆ. ಬೆಂಗಳೂರು ಲ್ಯಾಂಡ್ ಆರ್ಮಿಗೆ ಕಾಮಗಾರಿ ವಹಿಸಿದ್ದಾರೆ. ಯೋಜನೆ ಪ್ರಕಾರ ಕಾಮಗಾರಿ ನಡೆಸುತ್ತಿಲ್ಲ. ಯೋಜನೆ ಪ್ರಕಾರ ರಸ್ತೆ 16 ಇಂಚು ಎತ್ತರ ಬರಬೇಕು. ಆದರೆ 5 ಇಂಚು ಎತ್ತರ ಮಾಡಿದ್ದಾರೆ. ಭ್ರಷ್ಟಾಚಾರದ ವ್ಯವಸ್ಥೆ ಇದು. ಇದರಿಂದ ₹1.15 ಕೋಟಿಯಲ್ಲಿ ₹ 40 ಲಕ್ಷದಷ್ಟು ಕೂಡ ಕೆಲಸ ಆಗಲ್ಲ’ ಎಂದು ದೂರಿದರು.
ಬಿಜೆಪಿ ಪದಾಧಿಕಾರಿಗಳಾದ ಅರುಣ್ ಶಿವಪುರ, ಭಿಷೇಜ್ ಭಟ್, ಉದಯ್ ಕುಮಾರ್ ಜೈನ್, ಪದ್ಮಾವತಿ ರಮೇಶ್, ಅನಸೂಯ ಕೃಷ್ಣಮೂರ್ತಿ, ದಿವಾಕರ್ ಭಟ್, ಇಸ್ಮಾಯಿಲ್, ಸುಜಾತಾ, ರಿತೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.