
ಚಿಕ್ಕಮಗಳೂರು: ವಿಜಯಪುರ ಬಡಾವಣೆಯಲ್ಲಿ ಮನೆಯೊಂದರ ಮೇಲೆ ಕಲ್ಲು ತೂರಲಾಗಿದೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಮನೆಗೆ ಭೇಟಿ ನೀಡಿ ಮಾಹಿತಿ ಪಡೆದರು.
ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ಜಸಂತಾ ಅನಿಲಕುಮಾರ್, ‘ದಾಳಿಗೆ ಒಳಗಾದ ಸುಧಾ ಅವರ ಮನೆ ಮೇಲೆ ಮುಸ್ಲಿಂ ಬಾಲಕರು ಕಲ್ಲು ತೂರಾಟ ನಡೆಸಿದ್ದು, ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲವಾಗಿದೆ. ಕೂಡಲೇ ಪೊಲೀಸರು ಶಿಸ್ತು ಕ್ರಮ ಕೈಗೊಳ್ಳಬೇಕು’ ಎಂದರು.
‘ಕಾನೂನು ಸುವ್ಯವಸ್ಥೆ ಹದಗೆಟ್ಟು, ಹೆಣ್ಣು ಮಕ್ಕಳು ರಸ್ತೆಗಳಲ್ಲಿ ಸಂಚರಿಸದ ಸ್ಥಿತಿ ನಿರ್ಮಾಣವಾಗಿದೆ. ಸುಧಾ ಅವರ ಮಗಳು ಪೊಲೀಸ್ ಕಂಟ್ರೋಲ್ ರೂಮ್ಗೆ ಕರೆ ಮಾಡಿದರೂ ತಕ್ಷಣವೇ ಪೊಲೀಸರು ಬಾರದೆ ನಿರ್ಲಕ್ಷ್ಯ ವಹಿಸಿದ್ದಾರೆ. ಬಳಿಕ ಪುಂಡಾರು ಓಡಲಾರಂಭಿಸಿದಾಗ ಸ್ಥಳೀಯ ಯುವಕರು ಹಿಡಿದಿದ್ದಾರೆ. ಆದರೆ, ಮಹಿಳೆಯ ರಕ್ಷಣೆಗೆ ಮುಂದಾದ ಯುವಕರ ಮೇಲೆಯೇ ಪ್ರಕರಣ ದಾಖಲಿಸಿರುವುದು ಸರಿಯಲ್ಲ’ ಎಂದು ಹೇಳಿದರು.
ವಿಜಯಪುರ ಕಸ್ತೂರಿ ಬಾ ಸದನ ರಸ್ತೆಯಲ್ಲಿ ರಾತ್ರಿ ವೇಳೆ ಪುಂಡಾರ ಹಾವಳಿ ಹೆಚ್ಚಾಗಿದೆ. ಹಗಲಿನಲ್ಲೂ ವಿದ್ಯಾರ್ಥಿನಿಯರು ಸಂಚರಿಸದ ಸ್ಥಿತಿಯಿದೆ. ಕೆಲವರು ಬೈಕ್ ವೀಲ್ಹಿಂಗ್ ಮಾಡುವ ಮೂಲಕ ವಿದ್ಯಾರ್ಥಿನಿಯರನ್ನು ರೇಗಿಸುವುದು ಹೆಚ್ಚಾಗಿದೆ ಎಂದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಪ್ರೀತಿ ಯೋಗೀಶ್, ಉಪಾಧ್ಯಕ್ಷೆ ವೀಣಾಶೆಟ್ಟಿ, ಕಾರ್ಯದರ್ಶಿ ಕವಿತಾ ಶೇಖರ್, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನಾ, ಮಧು, ಉಪಾಧ್ಯಕ್ಷೆ ಸುಜಾತಾ, ಅಂಕಿತಾ, ಸಂಗೀತಾ, ಗೀತಾ, ಕೋಮಲಾ, ಹೇಮಾ ಸಿಂಗ್, ಯಶೋಧ ಇದ್ದರು.
ಸಮಗ್ರ ತನಿಖೆಯಾಗಬೇಕು: ಸಿ.ಟಿ.ರವಿ
‘ಹಿಂದೂಗಳನ್ನೇ ಕೇಂದ್ರವಾಗಿ ಇರಿಸಿಕೊಂಡು ಗಲಭೆ ಎಬ್ಬಿಸುವ ಒಳಸಂಚು ಮಾಡಲಾಗಿದೆ. ಬಾಲಕರಿಗೆ ಕಲ್ಲು ಎಸೆಯುವ ವಿಕೃತ ಮನಸ್ಥಿತಿ ಬಂದಿರುವುದು ಎಲ್ಲಿಂದ ಎಂಬುದು ಗೊತ್ತಾಗಬೇಕು’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ. ಘಟನೆ ಬಗ್ಗೆ ಟ್ವೀಟ್ ಮಾಡಿರುವ ಅವರು ‘ಕಲ್ಲು ಎಸೆದಿರುವ ಘಟನೆ ಸಮರ್ಥನೆ ಮಾಡಿಕೊಂಡವರನ್ನೂ ವಿಚಾರಣೆಗೆ ಒಳಪಡಿಸಬೇಕು. ಮತೀಯ ಗೂಂಡಾಗಿರಿ ಹೆಸರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಿರುವು ಸರಿಯಲ್ಲ. ಪ್ರಕರಣದ ಬಗ್ಗೆ ಸಮಗ್ರ ತನಿಖೆಯಾಗಬೇಕು’ ಎಂದು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.