ADVERTISEMENT

ವಿಧಾನ ಪರಿಷತ್‌ ಚುನಾವಣೆ: ಬಿಎಸ್‌ವೈ ಮಾತಿಗೆ ತಪ್ಪಲ್ಲ

ಸಚಿವ ಸೋಮಶೇಖರ್‌ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 16:21 IST
Last Updated 2 ಜೂನ್ 2020, 16:21 IST
ಎಸ್.ಟಿ.ಸೋಮಶೇಖರ್
ಎಸ್.ಟಿ.ಸೋಮಶೇಖರ್   

ಚಿಕ್ಕಮಗಳೂರು: ‘ವಿಧಾನ ಪರಿಷತ್‌ನ ಕೆಲವು ಸ್ಥಾನಗಳಿಗೆ ಸದ್ಯದಲ್ಲೇ ಚುನಾವಣೆ ನಡೆಯಲಿದೆ. ಎಂಟಿಬಿ ನಾಗರಾಜ್‌, ಎಚ್‌. ವಿಶ್ವನಾಥ್‌, ಆರ್‌. ಶಂಕರ್‌ ಆಕಾಂಕ್ಷಿಗಳಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನಮ್ಮನ್ನು ಸಚಿವರನ್ನಾಗಿ ಮಾಡಿದ್ದಾರೆ, ಅವರು ಮಾತಿಗೆ ತಪ್ಪಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಪ್ರತಿಕ್ರಿಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಾಸಕರು, ಸಂಸದರ ಮೂಲಕ ಆಕಾಂಕ್ಷಿಗಳು ಒತ್ತಡ ಹೇರುವುದು ಸಾಮಾನ್ಯ. ಈ ಪರಿಪಾಠ ಎಲ್ಲ ಪಕ್ಷಗಳಲ್ಲೂ ಇದೆ. ಯಡಿಯೂರಪ್ಪ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತಾರೆ, ಅವರು ಎಲ್ಲರಿಗೂ ಅವಕಾಶ ಮಾಡಿಕೊಡುತ್ತಾರೆ’ ಎಂದು ಉತ್ತರಿಸಿದರು.

‘ವಿಧಾನ ಪರಿಷತ್‌ನಲ್ಲಿ ಬಿಜೆಪಿಗೆ ಈಗ ಒಂಬತ್ತು ಸ್ಥಾನ ಲಭ್ಯವಾಗುತ್ತದೆ. ಈ ಪೈಕಿ ರಾಜ್ಯಸಭೆಯಲ್ಲಿ ಎರಡು ಸ್ಥಾನ ಇವೆ. ಜಾತಿ, ಸಮುದಾಯಗಳಲ್ಲಿ ಪಕ್ಷಕ್ಕೆ ದುಡಿದವರನ್ನು ಗುರುತಿಸಿ ಆಯ್ಕೆ ಮಾಡುವ ಪರಿಪಾಠ ನಡೆದುಕೊಂಡು ಬಂದಿದೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ’ ಎಂದರು.

ADVERTISEMENT

ಆಶಾ ಕಾರ್ಯಕರ್ತೆಯರ ಸಂಘಗಳಿಗೆ ಸಾಲ ಒದಗಿಸಲು ಕ್ರಮ:

‘ಸ್ತ್ರೀಶಕ್ತಿ ಗುಂಪು, ಸ್ವಸಹಾಯ ಸಂಘಗಳಿಗೆ ಸಹಕಾರ ಬ್ಯಾಂಕಿನ ಮೂಲಕ ₹ 5 ಲಕ್ಷ ಸಾಲ ಒದಗಿಸುವಂತೆ, ಆಶಾ ಕಾರ್ಯಕರ್ತೆಯರ ಸಂಘಗಳಿಗೂ ಒದಗಿಸಲು ಗಮನ ಹರಿಸಲಾಗುವುದು’ ಎಂದು ಸೋಮಶೇಖರ್‌ ಹೇಳಿದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಹಕಾರ ಇಲಾಖೆಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಲಾಗುವುದು. ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.