ADVERTISEMENT

ಸಿ.ಟಿ.ರವಿ ರಾಜಕಾರಣದಲ್ಲಿರಲು ನಾಲಾಯಕ್‌: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2023, 7:48 IST
Last Updated 22 ಜನವರಿ 2023, 7:48 IST
ಚಿಕ್ಕಮಗಳೂರಿನಲ್ಲಿ ಶನಿವಾರ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶ ಸಿದ್ದರಾಮಯ್ಯ ಮಾತನಾಡಿದರು.
ಚಿಕ್ಕಮಗಳೂರಿನಲ್ಲಿ ಶನಿವಾರ ಕಾಂಗ್ರೆಸ್‌ನ ಪ್ರಜಾಧ್ವನಿ ಸಮಾವೇಶ ಸಿದ್ದರಾಮಯ್ಯ ಮಾತನಾಡಿದರು.   

ಚಿಕ್ಕಮಗಳೂರು: ಬಿಜೆಪಿ ಶಾಸಕ ಸಿ.ಟಿ.ರವಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇಲ್ಲ. ಅವರು ರಾಜಕಾರಣದಲ್ಲಿ ಇರಲು ಲಾಯಕ್ಕಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

ನಗರದ ಬೇಲೂರು ರಸ್ತೆ ಆಶ್ರಯ ಮೈದಾನದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶದಲ್ಲಿ ಅವರು ಮಾತನಾಡಿದರು. ಆರ್‌ಎಸ್‌ಎಸ್‌ನ ಗೋಳ್ವಾಳ್ಕರ್‌, ವಿ.ಡಿ.ಸಾರ್ವಕರ್‌ ಅವರು ಸಂವಿಧಾನವನ್ನು ವಿರೋಧ ಮಾಡಿದವರು. ಸಿ.ಟಿ.ರವಿ ಆರ್‌ಎಸ್‌ಎಸ್‌ ನಲ್ಲಿ ತರಬೇತಿ ಪಡೆದಿದ್ದಾರೆ. ಅವರು ಸಂವಿಧಾನಕ್ಕೆ ಬದ್ಧವಾಗಿರಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.

ಸಿ.ಟಿ.ರವಿ ಅಫೀಮು ಕುಡಿದವರ ರೀತಿ ಮಾತನಾಡುತ್ತಾರೆ. ದೇಶಭಕ್ತಿ, ರಾಷ್ಟ್ರಭಕ್ತಿ ಬಗ್ಗೆ ನಮಗೆ ಪಾಠ ಹೇಳುತ್ತಾರೆ. ಅವರಿಂದ ನಾವು ಪಾಠ ಕಲಿಯಬೇಕಾ? ಸಂವಿಧಾನದಲ್ಲಿ ನಂಬಿಕೆ ಇಲ್ಲದವರು ಜನ ಪರವಾಗಿರಲು ಸಾಧ್ಯ ಇಲ್ಲ. ರವಿ ಅವರ ದತ್ತ ಮಾಲೆಗೆ ಮಾರು ಹೋಗಬೇಡಿ, ದಾರಿ ತಪ್ಪಿಸುತ್ತಾರೆ. ಸಿ.ಟಿ.ರವಿ ಮತ್ತೆ ಗೆಲ್ಲಬಾರದು ಎಂದರು.
ನಾನೂ ಹಿಂದೂ ಅಲ್ವಾ? ನಮ್ಮ ಅಪ್ಪ ಸಿದ್ದರಾಮಯ್ಯ ಎಂದು ಹೆಸರು ಕರೆದಿಲ್ವಾ? ನನ್ನನ್ನು ಸಿದ್ರಾಮುಲ್ಲಾ ಎಂದು ಹೇಳಲು ಸಿ.ಟಿ.ರವಿ ಯಾವ ಗಿರಾಕಿ? ಎಂದು ಪ್ರಶ್ನಿಸಿದರು.

ADVERTISEMENT

ಬಿಜೆಪಿ ಸರ್ಕಾರ 40% ಕಮಿಷನ್‌ ಸರ್ಕಾರ ಎಂದು ಹೆಸರಾಗಿದೆ. ಬಿಜೆಪಿಯವರು ವಚನ ಭ್ರಷ್ಟರು. ಅದು ಕೋಮುವಾದದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜನರ ಭಾವನೆಗಳನ್ನು ಕೆರಳಿಸಿ ಜಾತಿ ಅಫೀಮು ಕೊಟ್ಟು ಅವರನ್ನು ಧರ್ಮಾಂಧವಾಗಿಸುವ ಪಕ್ಷ. ಬೂಟಾಟಿಕೆ, ಕೋಮುವಾದದ ರಾಜಕಾರಣ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು ಎಂದರು.

ಕಾಂಗ್ರೆಸ್‌ ಪಕ್ಷ ನುಡಿದಂತೆ ನಡೆದಿದೆ. ಕಾಂಗ್ರೆಸ್‌ ಪಕ್ಷ ಜನರ ಬದುಕಿನ ರಾಜಕಾರಣ ಮಾಡುತ್ತಿದೆ. ಜನರ ಸಮಸ್ಯೆ, ಸಂಕಷ್ಟಗಳನ್ನು ಆಲಿಸಲು ಪ್ರಜಾಧ್ವನಿ ಬಸ್‌ ಯಾತ್ರೆ ಆಯೋಜಿಸಿದ್ದೇವೆ. ಪ್ರತಿ ಜಿಲ್ಲೆಗೆ ಹೋಗಿ ಜನ ಜಾಗೃತಿ ಮೂಡಿಸುತ್ತಿದ್ದೇವೆ. ಮತದಾರರು ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ಜೆಡಿಎಸ್‌ ಗೆದ್ದೆತ್ತಿನ ಬಾಲ ಹಿಡಿಯುವ ಪಕ್ಷ. ಅಧಿಕಾರಕ್ಕಾಗಿ ಅವರು ಯಾರ ಜೊತೆಗೆ ಬೇಕಾದರೂ ಕೈಜೋಡಿಸುತ್ತಾರೆ.

ಸಿದ್ದರಾಮಯ್ಯ, ನಾಯಕ, ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.