
ಚಿಕ್ಕಮಗಳೂರು: ಚಾರ್ಮಾಡಿ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಗೆ ಒಂದು ಬದಿಯಲ್ಲಿ ತಡೆಗೋಡೆ ಎತ್ತರಿಸುವ ಕಾಮಗಾರಿ ನಡೆಯುತ್ತಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ.
ಚಾರ್ಮಾಡಿ ಘಾಟಿ 25 ಕಿಲೋ ಮೀಟರ್ ವ್ಯಾಪ್ತಿಯಲ್ಲಿದ್ದು, ಜಿಲ್ಲೆಗೆ ಸಂಬಂಧಿಸಿದಂತೆ 13 ಕಿಲೋ ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಒಂದು ಕಡೆ ಕಡಿದಾದ ಗುಡ್ಡಗಳಿದ್ದು, ಮತ್ತೊಂದೆಡೆ ಅಷ್ಟೇ ಕಡಿದಾದ ಪ್ರಪಾತ ಇದೆ. ಪ್ರಪಾತ ಇರುವ ಭಾಗಕ್ಕೆ ತಡೆಗೋಡೆ ನಿರ್ಮಾಣವಾಗುತ್ತಿದೆ. ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವ ಪ್ರದೇಶಗಳನ್ನು ಗುರುತಿಸಿ ತಡೆಗೋಡೆ ಎತ್ತರಿಸುವ ಕಾಮಗಾರಿ ಈಗ ಆರಂಭಿಸಲಾಗಿದೆ.
ಹಿಂದೆ ನಿರ್ಮಿಸಿರುವ ತಡೆಗೋಡೆಯ ಮೇಲೆ ಒಂದರಿಂದ ಎರಡು ಅಡಿ ಕಾಂಕ್ರೀಟ್ ಸುರಿದು ಎತ್ತರಿಸಲಾಗುತ್ತಿದೆ. ಕಬ್ಬಿಣವನ್ನೂ ಹಾಕದೆ ತಡೆಗೋಡೆ ಮೇಲೆ ಕೆಲವೆಡೆ ಕಾಂಕ್ರೀಟ್ ಸುರಿಯಲಾಗಿದ್ದು, ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂಬುದು ಸ್ಥಳೀಯರ ಆಕ್ಷೇಪ.
ಹಾಲಿ ಇರುವ ತಡೆಗೋಡೆ ಕೊರೆದು ಕಬ್ಬಿಣ ಎತ್ತರಿಸಿಕೊಂಡು ನಂತರ ಕಾಂಕ್ರೀಟ್ ಹಾಕಿದರೆ ತಡೆಗೋಡೆ ಶಾಶ್ವತವಾಗಿ ಉಳಿಯಲಿದೆ. ಯಾವುದೇ ಸಣ್ಣ ವಾಹನ ಡಿಕ್ಕಿ ಹೊಡೆದರೆ ತಡೆಗೋಡೆ ಸಹಿತ ಪ್ರಪಾತಕ್ಕೆ ಬೀಳಬೇಕಾಗುತ್ತದೆ ಎಂದು ಕೊಟ್ಟಿಗೆಹಾರ ಸಾಮಾಜಿಕ ಕಾರ್ಯಕರ್ತ ಸಂಜಯ್ಗೌಡ ಆರೋಪಿಸಿದರು.
ಕಾಂಕ್ರೀಟ್ ಸುರಿದು ಹಿಂಬದಿಯಿಂದ ಬಿಳಿ ಬಣ್ಣ ಬಳಿಯಲಾಗುತ್ತಿದೆ. ಮೊದಲಿದ್ದ ತಡೆಗೋಡೆ ಮತ್ತು ಈಗ ಎತ್ತರಿಸಿರುವ ತಡೆಗೋಡೆ ಕಾಮಗಾರಿಯ ವ್ಯತ್ಯಾಸ ಕಾಣಿಸದಂತೆ ಮಾಡಲಾಗುತ್ತಿದೆ. ಹೀಗೇ ತೇಪೆ ಹಾಕಿ ಬಣ್ಣ ಬಳಿಯುವ ತಡೆಗೋಡೆಯಿಂದ ಯಾವ ಪ್ರಯೋಜನವೂ ಇಲ್ಲ ಎಂದು ಹೇಳಿದರು.
ಮತ್ತೊಂದೆಡೆ ಕೆಲವೆಡೆ ಈಗಿರುವ ಹಾಳಾಗಿದ್ದು, ಅದನ್ನು ತೆಗೆಯಲಾಗುತ್ತಿದೆ. ಆದರೆ, ಹಳೇ ತಡೆಗೋಡೆ ಅವಶೇಷಗಳನ್ನು ಪ್ರಪಾತಕ್ಕೆ ತಳ್ಳಲಾಗುತ್ತಿದೆ. ಇದರಿಂದ ಶೋಲಾ ಕಾಡು, ಅಲ್ಲಿರುವ ಪ್ರಾಣಿಗಳು, ಸರೀಸೃಪಗಳ ಸಹಜ ಜೀವನಕ್ಕೆ ತೊಂದರೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ ಹಾಸನ ವಿಭಾಗದ ಎಂಜಿನಿಯರ್ಗಳಿಗೆ ಈ ಬಗ್ಗೆ ಮಾಹಿತಿ ನೀಡಿದರೂ ತಲೆಕೆಡಿಸಿಕೊಂಡಿಲ್ಲ ಎಂದು ಅವರು ದೂರಿದರು.
ಚಾರ್ಮಾಡಿ ಘಾಟಿಯಲ್ಲಿ ತಡೆಗೋಡೆ ನಿರ್ಮಾಣ ಮಾಡದಿದ್ದರೆ ವಾಹನಗಳು ಪ್ರಪಾತಕ್ಕೆ ಬೀಳುವುದು ಹೆಚ್ಚಾಗಲಿದೆ. ಆದರೆ, ಈ ರೀತಿಯ ತಡೆಗೋಡೆಗಳು ಅಪಘಾತ ತಡೆಯುವುದಿಲ್ಲ. ಆದ್ದರಿಂದ ಕಾಮಗಾರಿ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಒತ್ತಾಯಿಸಿದರು.
ಸರಿಪಡಿಸಲು ಕ್ರಮ: ಎಂಜಿನಿಯರ್
ಕೆಲವೆಡೆ ಹೆಚ್ಚು ಎತ್ತರ ಮಾಡಿರುವುದರಿಂದ ಕಬ್ಬಿಣ ಕಾಣಿಸುತ್ತಿಲ್ಲ. ಅದನ್ನು ಸರಿಪಡಿಸಲು ಸೂಚನೆ ನೀಡಲಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ವಿಭಾಗದ ಎಇಇ ಕಾಂಬ್ಳೆ ತಿಳಿಸಿದರು. ಹೆದ್ದಾರಿ ನಿರ್ವಹಣೆಯ ಭಾಗವಾಗಿ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಲಾರಿಗಳು ಬಿದ್ದಿದ್ದವು. ಅಪಘಾತ ಹೆಚ್ಚಾಗಿ ಸಂಭವಿಸುತ್ತಿರುವ ಭಾಗದಲ್ಲಿ ಎರಡೂವರೆ ಕಿಲೋ ಮೀಟರ್ನಷ್ಟು ತಡೆಗೋಡೆ ನಿರ್ಮಿಸಲಾಗುತ್ತಿದೆ. ಮಳೆಗಾಲಕ್ಕೂ ಮೊದಲು ಕಾಮಗಾರಿ ಆರಂಭಿಸಲಾಗಿತ್ತು. ಮಳೆ ಜೋರಾದ ಬಳಿಕ ಕಾಮಗಾರಿ ಸ್ಥಗಿತವಾಗಿತ್ತು. ಬಾಕಿ ಕಾಮಗಾರಿಯನ್ನು ಈಗ ನಿರ್ವಹಿಸಲಾಗುತ್ತಿದೆ ಎಂದರು. ಮೇಲ್ನೋಟಕ್ಕೆ ಕೇವಲ ಕಾಂಕ್ರೀಟ್ ಹಾಕಲಾಗುತ್ತಿದೆ ಎಂಬಂತೆ ಕಾಣಿಸುತ್ತಿದೆ. ಕಬ್ಬಿಣ ಜೋಡಣೆ ಮಾಡಿಕೊಳ್ಳದಿದ್ದರೆ ಹಳೇ ಕಾಂಕ್ರೀಟ್ಗೆ ಹೊಸ ಕಾಂಕ್ರೀಟ್ ಹೊಂದಿಕೊಳ್ಳುವುದಿಲ್ಲ. ಕೆಲವೆಡೆ ಎತ್ತರ ಜಾಸ್ತಿಯಾಗಿದ್ದು ಅದನ್ನು ಸರಿಪಡಿಸಲು ತಿಳಿಸಲಾಗಿದೆ ಎಂದು ಹೇಳಿದರು. ಹಳೇ ತಡೆಗೋಡೆ ಒಡೆದ ಅವಶೇಷಗಳನ್ನು ಪ್ರಪಾತದ ಕಡೆಗೆ ತಳ್ಳುತ್ತಿರುವ ಆರೋಪದ ಬಗ್ಗೆ ಪರಿಶೀಲಿಸಲಾಗುವುದು. ಹಾಗೆ ಮಾಡಿದ್ದರೆ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.