ಚಿಕ್ಕಮಗಳೂರು: ನಗರಾದ್ಯಂತ ಸ್ವಚ್ಛ ವಾಹಿನಿಗಳಲ್ಲಿ ಸಂಗ್ರಹಿಸಿದ ಸಂತೆ ಮೈದಾನ ಭಾಗದಲ್ಲಿ ಕಸ ಸಾಗಣೆ ವಾಹನಗಳಿಗೆ ವಿಲೇವಾರಿ ಮಾಡುವುದನ್ನು ವಿರೋಧಿಸಿ ಸ್ಥಳೀಯರು ನಗರಸಭೆ ಆಯಕ್ತರೊಂದಿಗೆ ವಾಗ್ವಾದ ನಡೆಸಿದರು.
ನಗರಸಭೆ ಅಧಿಕಾರಿಗಳ ವಿರುದ್ಧ ದಲಿತ ಸಂಘರ್ಷ ಸಮಿತಿ ಮುಖಂಡ ದಂಟರಮಕ್ಕಿ ಶ್ರೀನಿವಾಸ್, ಇತರರು ಆಕ್ರೋಶ ವ್ಯಕ್ತಪಡಿಸಿದರು. ಈ ಭಾಗದ ತಮಿಳು ಕಾಲೋನಿ ಇತರಡೆಗಳ ಹಲವರು ಈಚೆಗೆ ಕಾಯಿಲೆಯಾಗಿ ಚಿಕಿತ್ಸೆ ಪಡೆದಿದ್ದಾರೆ ಎಂದರು.
ಸಂತೆ ಮಾರುಕಟ್ಟೆ ಜನವಸತಿ ಪ್ರದೇಶವಾಗಿದೆ. ಪ್ರತಿ ಬುಧವಾರ ಸಂತೆ ನಡೆಯುತ್ತದೆ. ಮೀನು ಮಾರುಕಟ್ಟೆಯೂ ಇಲ್ಲಿದೆ. ಈ ಆವರಣದಲ್ಲಿ ತ್ಯಾಜ್ಯ ಸುರಿದು ಸಾಗಣೆ ವಾಹನಕ್ಕೆ ವಿಲೇವಾರಿ ಮಾಡುವಾಗ ಕಸ ಬೀಳುತ್ತದೆ. ಈ ಪ್ರದೇಶದಲ್ಲಿ ಕೊಳಕು ಹರಡುತ್ತದೆ. ಸೊಳ್ಳೆಗಳು ಹೆಚ್ಚುತ್ತವೆ. ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಕೂಡಲೇ ಇಲ್ಲಿ ಡಂಪ್ ಮಾಡುವುದನ್ನು ನಿಲ್ಲಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದರು.
ನಗರಸಭೆ ಅಧ್ಯಕ್ಷ, ಆಯುಕ್ತ ಬಿ.ಸಿ.ಬಸವರಾಜು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು. ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಸ್ಥಳೀಯರು ಪೊಲೀಸರೊಂದಿಗೂ ವಾಗ್ವಾದ ನಡೆಸಿದರು. ನಂತರ ಪರಿಸ್ಥಿತಿ ತಿಳಿಗೊಳಿಸಿದರು.
‘4 ದಿನಗಳಲ್ಲಿ ಕ್ರಮವಹಿಸದಿದ್ದರೆ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ’
ಸಂತೆಮೈದಾನವನ್ನು ಡಂಪಿಂಗ್ ಯಾರ್ಡ್ ಮಾಡಿರುವುದಕ್ಕೆ ವಿರೋಧ ಮಾಡಿದ್ದೇವೆ. ನಾಲ್ಕು ದಿನಗಳಲ್ಲಿ ಬೇರೆ ಜಾಗಕ್ಕೆ ಸ್ಥಳಾಂತರಿಸುವುದಾಗಿ ನಗರಸಭೆ ಅಧ್ಯಕ್ಷ, ಆಯುಕ್ತರು ಹೇಳಿದ್ದಾರೆ. 4 ದಿನಗಳ ಒಳಗೆ ಬೇರೆಡೆಗೆ ಕ್ರಮವಹಿಸದಿದ್ದಲ್ಲಿ ನಗರಸಭೆ ಕಚೇರಿ ಎದುರು ತ್ಯಾಜ್ಯ ಸುರಿದು ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ದಸಂಸ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ತಿಳಿಸಿದರು.
‘ವಾರದೊಳಗೆ ಬೇರೆಡೆಗೆ ಸ್ಥಳಾಂತರ’
‘ಬಸವನಹಳ್ಳಿ ಕೆರೆ ಪಕ್ಕದಲ್ಲ ಜಾಗದ ಮೊದಲು ಡಂಪಿಂಗ್ ನಡೆಯುತ್ತಿತ್ತು. ಈಗ ಅಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ತಾತ್ಕಾಲಿಕವಾಗಿ ಸಂತೆ ಮೈದಾನದ ಭಾಗದಲ್ಲಿ ಮಾಡಲಾಗುತ್ತಿದೆ. ಇನ್ನೊಂದು ವಾರದಲ್ಲಿ ಬೇರೆ ಕಡೆಗೆ ಸ್ಥಳಾಂತರಿಸುತ್ತೇವೆ’ ಎಂದು ನಗರಸಭೆ ಆಯುಕ್ತ ಬಸವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
‘ನಗರದ ಹೊರವಲಯದಲ್ಲಿ ಜಾಗ ಗುರುತಿಸಲಾಗುವುದು. ಅಲ್ಲಿಗೆ ಸ್ಥಳಾಂತರ ಮಾಡಲಾಗುವುದು’ ಎಂದು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.