
ಚಿಕ್ಕಮಗಳೂರು: ಕುತೂಹಲ ಮೂಡಿಸಿದ್ದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿಕೂಟ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯ ಸಾಧಿಸಿದ್ದಾರೆ.
13 ನಿರ್ದೇಶಕ ಸ್ಥಾನಗಳಲ್ಲಿ 8 ಸ್ಥಾನ ಅವಿರೋಧ ಆಯ್ಕೆಯಾಗಿದ್ದು, 5 ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಎರಡೂ ಪಕ್ಷಗಳ ಆಂತರಿಕ ಒಪ್ಪಂದದ ಪ್ರಕಾರ 11 ಸ್ಥಾನ ಬಿಜೆಪಿ ಮತ್ತು 2 ಸ್ಥಾನ ಜೆಡಿಎಸ್ಗೆ ಹಂಚಿಕೆ ಮಾಡಲಾಗಿತ್ತು. ಅದೇ ರೀತಿಯ 11 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಮತ್ತು 2 ಸ್ಥಾನಗಳಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ.
ಚಿಕ್ಕಮಗಳೂರು ತಾಲೂಕು ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಎರಡು ಸ್ಥಾನಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ ಸ್ಫರ್ಧಿಸಿದ್ದರು. ಹಲವು ವರ್ಷಗಳಿಂದ ಬಿಜೆಪಿಯಲ್ಲಿ ಕೆಲಸ ಮಾಡಿರುವ ಎಂ.ಎಸ್.ನಿರಂಜನ್ ಕೂಡ ಸ್ಪರ್ಧೆಯಲ್ಲಿದ್ದರು. ಈ ಕ್ಷೇತ್ರದಲ್ಲಿ 32 ಮತದಾರರಿದ್ದು, ಒಬ್ಬರಿಗೆ ಎರಡು ಮತ ಚಲಾಯಿಸುವ ಹಕ್ಕು ನೀಡಲಾಗಿತ್ತು.
ಎರಡು ಸ್ಥಾನಗಳಿಗೆ ಮೂವರು ಸ್ಪರ್ಧೆ ಮಾಡಿದ್ದರಿಂದ ಜಿದ್ದಾಜಿದ್ದಿ ಏರ್ಪಟ್ಟು ಹೆಚ್ಚು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಎಸ್.ಎಲ್.ಭೋಜೇಗೌಡ 30 ಮತ, ಸಿ.ಟಿ.ರವಿ 27 ಮತ ಮತ್ತು ಎಂ.ಎಸ್.ನಿರಂಜನ್ 5 ಮತಗಳನ್ನು ಪಡೆದಿದ್ದಾರೆ. ಹೆಚ್ಚು ಮತ ಪಡೆದ ಇಬ್ಬರ ಆಯ್ಕೆಯನ್ನು ಚುನಾವಣಾಧಿಕಾರಿ ಘೋಷಣೆ ಮಾಡಿದರು.
ಕೊಪ್ಪ ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದ ಒಂದು ಸ್ಥಾನಕ್ಕೆ ಯು.ಎಸ್.ಪ್ರಜ್ವಲ್, ಕೆ.ಎಸ್.ರವೀಂದ್ರ ಹಾಗೂ ಬಿ.ಎಸ್.ಸತೀಶ್ ಸ್ಫರ್ಧೆ ಮಾಡಿದ್ದರು. ಯು.ಎಸ್.ಪ್ರಜ್ವಲ್ 5 ಮತ, ಕೆ.ಎಸ್.ರವೀಂದ್ರ ಶೂನ್ಯ, ಬಿ.ಎಸ್.ಸತೀಶ್ 6 ಮತಗಳನ್ನು ಪಡೆದಿದ್ದಾರೆ. ಬಿ.ಎಸ್.ಸತೀಶ್ ಜಯ ಸಾಧಿಸಿದ್ದಾರೆ.
ಜಿಲ್ಲೆಯ ಎಲ್ಲಾ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ(ಟಿಎಪಿಸಿಎಂಎಸ್) ಒಂದು ಸ್ಥಾನಕ್ಕೆ ಕೆ.ಎಸ್.ಆನಂದ್ ಹಾಗೂ ಎಚ್.ಕೆ.ದಿನೇಶ್ ಹೊಸೂರು ಸ್ಫರ್ಧಿಸಿದ್ದರು. ಕೆ.ಎಸ್.ಆನಂದ್ 3 ಮತಗಳನ್ನು ಪಡೆದು ಸೋಲನುಭವಿಸಿದರೆ, 4 ಮತ ಪಡೆದ ಎಚ್.ಕೆ.ದಿನೇಶ್ ಗೆಲುವು ಸಾಧಿಸಿದರು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಗ್ರಾಮೀಣ ಅಭಿವೃದ್ಧಿ ಬ್ಯಾಂಕುಗಳು, ಪಟ್ಟಣ ಸಹಕಾರ ಬ್ಯಾಂಕುಗಳು ಹಾಗೂ ಇನ್ನುಳಿದ ಸಹಕಾರ ಸಂಘಗಳ ಕ್ಷೇತ್ರದ 1 ಸ್ಥಾನಕ್ಕೆ ಮೂಡಿಗೆರೆ ಕ್ಷೇತ್ರದ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹಾಗೂ ಟಿ.ಎಲ್.ರಮೇಶ್ ಸ್ಫರ್ಧಿಸಿದ್ದರು. ಎಂ.ಪಿ.ಕುಮಾರಸ್ವಾಮಿ 38 ಮತ ಪಡದುಕೊಂಡರೆ, ಟಿ.ಎಲ್.ರಮೇಶ್ 56 ಮತ ಪಡೆದರು. ಟಿ.ಎಲ್.ರಮೇಶ್ ಅವರ ಆಯ್ಕೆಯನ್ನು ಚುನಾವಣಾಧಿಕಾರಿಯಾಗಿದ್ದ ಉಪವಿಭಾಗಾಧಿಕಾರಿ ಬಿ.ಕೆ.ಸುದರ್ಶನ್ ಘೋಷಣೆ ಮಾಡಿದರು.
ಮಾದರಿ ಹೊಂದಾಣಿಕೆ: ಭೋಜೇಗೌಡ ಎನ್ಡಿಎ ಮೈತ್ರಿಕೂಟದಲ್ಲಿರುವ ಜೆಡಿಎಸ್ ಮತ್ತು ಬಿಜೆಪಿ ಆಂತರಿಕ ಹೊಂದಾಣಿಕೆ ಪ್ರಕಾರ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿತ್ತು. ಅಷ್ಟೂ ಕ್ಷೇತ್ರಗಳಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು ಜಯ ಸಾಧಿಸಿದ್ದು ಇದು ಮಾದರಿ ಹೊಂದಾಣಿಕೆ ಎಂದು ನಿರ್ದೇಶಕರಾಗಿ ಆಯ್ಕೆಯಾದ ಎಸ್.ಎಲ್.ಭೋಜೇಗೌಡ ಹೇಳಿದರು. ಜೆಡಿಎಸ್ ಪಕ್ಷವು ಎನ್ಡಿಎ ಭಾಗವಾದ ನಂತರ ನಡೆದ ಮೊದಲ ಚುನಾವಣೆ ಇದಾಗಿದ್ದು ರೈತ ಸಮುದಾಯ ನಮಗೆ ಅಭೂತಪೂರ್ವ ಬೆಂಬಲ ನೀಡಿದೆ. ಬ್ಯಾಂಕಿನ ಚುಕ್ಕಾಣಿ ಎನ್ಡಿಎ ಒಕ್ಕೂಟಕ್ಕೆ ಜನ ಕೊಟ್ಟಿದ್ದಾರೆ. ಸಹಕಾರಿ ತತ್ವದಲ್ಲಿ ನಂಬಿಕೆ ಇರಿಸಿ ಆಡಳಿತ ನಡೆಸುತ್ತೇವೆ ಎಂದರು.
ನಿರೀಕ್ಷಿತ ಗೆಲುವು: ಸಿ.ಟಿ.ರವಿ ‘ಚುನಾವಣಾ ಪೂರ್ವ ಹೊಂದಾಣಿಕೆ ಪ್ರಕಾರ ನಮ್ಮ ತಂಡದ ಅಷ್ಟೂ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ’ ಎಂದು ನಿರ್ದೇಶಕರಾಗಿ ಆಯ್ಕೆಯಾದ ಸಿ.ಟಿ.ರವಿ ಪ್ರತಿಕ್ರಿಯಿಸಿದರು. ‘ಜನ ನಮ್ಮ ಮೇಲೆ ನಂಬಿಕೆ ಇಟ್ಟು ಆಯ್ಕೆ ಮಾಡಿದ್ದಾರೆ. ಇಲ್ಲಿ ಪಕ್ಷ ರಾಜಕಾರಣ ಇರುವುದಿಲ್ಲ. ಜನಪರ ಕೆಲಸ ಮುಂದುವರಿಸುತ್ತೇವೆ. ಜನಸ್ನೇಹಿ ಆಡಳಿತ ನೀಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.