ಕಳಸ: ಬಲಿಗೆ ಸಮೀಪದ ಗುಹೆಯಲ್ಲಿ ವಾಸಿಸುವ ಅನಂತ ಅವರನ್ನು ಜಿಲ್ಲಾಡಳಿತ ಚಿಕಿತ್ಸೆಗಾಗಿ ಬುಧವಾರ ಚಿಕ್ಕಮಗಳೂರಿಗೆ ಕರೆದೊಯ್ದಿದೆ.
ಗುಹೆಯಲ್ಲಿ ವಾಸಿಸುತ್ತಿದ್ದ ಅನಂತ ಅವರ ಕುಟುಂಬವನ್ನು ಹೊರನಾಡಿನ ಗಿರಿಜನ ಆಶ್ರಮ ಶಾಲೆಯ ವಸತಿಗೃಹಕ್ಕೆ ಜಿಲ್ಲಾಡಳಿತ ಕಳೆದ ತಿಂಗಳು ಸ್ಥಳಾಂತರಿಸಿತ್ತು. ಆದರೆ ಪತ್ನಿ, ಮಗಳನ್ನು ಬಿಟ್ಟು ಅನಂತ ಮತ್ತೆ ಗುಹೆಯಲ್ಲಿ ವಾಸ ಮಾಡುತ್ತಿದ್ದರು. ಈ ಬಗ್ಗೆ ‘ಪ್ರಜಾವಾಣಿ’ ಕಳೆದ ವಾರ ವರದಿ ಪ್ರಕಟಿಸಿತ್ತು.
ಗಿರಿಜನ ಆಶ್ರಮ ಶಾಲೆಯಲ್ಲಿದ್ದ ಅನಂತ ಅವರ ಪತ್ನಿ ಮತ್ತು ಪುತ್ರಿಯನ್ನು ಬುಧವಾರ ಭೇಟಿ ಮಾಡಿದ ಉಪ ವಿಭಾಗಾಧಿಕಾರಿ ಡಾ. ನಾಗರಾಜ್, ತಹಶೀಲ್ದಾರ್ ರಮೇಶ್, ಕಂದಾಯ ನಿರೀಕ್ಷಕ ಅಜ್ಜೇಗೌಡ ಮತ್ತು ತಂಡ ಅವರಿಗೆ ಧೈರ್ಯ ತುಂಬಿತು. ಆನಂತರ ಬಲಿಗೆ ಸಮೀಪದ ಗುಹೆಯಲ್ಲಿದ್ದ ಅನಂತ ಅವರನ್ನು ಮನವೊಲಿಸಿ ಕಳಸಕ್ಕೆ ಕರೆದುಕೊಂಡು ಬರಲಾಯಿತು. ಅವರ ಮಾನಸಿಕ ಆರೋಗ್ಯದ ಬಗ್ಗೆ ವೈದ್ಯರಲ್ಲಿ ತಪಾಸಣೆ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.