
ಚಿಕ್ಕಮಗಳೂರು: ಹೊಂಡ–ಗುಂಡಿಗಳ ನಡುವೆ ಮಾಯವಾದ ರಸ್ತೆ, ಗುಂಡಿಗಳಿಗೆ ಹೆದರಿಸಿ ಸಂಚಾರಕ್ಕೆ ಭಯಪಡುತ್ತಿರುವ ವಾಹನ ಸವಾರರು, ಧೂಳಿನ ನಡುವೆ ಸಂಚಾರ...
ಇದು ನಗರದ ಕೋಟೆ ಮುಖ್ಯರಸ್ತೆಯ ಸ್ಥಿತಿ. ಚಿಕ್ಕಮಗಳೂರು– ಬೇಲೂರು ರಸ್ತೆಯಿಂದ ಕೋಟೆ ಆಂಜಯೇಸ್ವಾಮಿ ದೇವಸ್ಥಾನದಿಂದ ಅಂಬಳೆ ಕೈಗಾರಿಕಾ ಪ್ರದೇಶಕ್ಕೆ ಹೋಗುವ ಮುಖ್ಯರಸ್ತೆಯಲ್ಲಿ ವಾಹನಗಳಿರಲಿ, ಜನ– ಜಾನುವಾರ ಸಂಚಾರವೇ ಕಷ್ಟವಾಗಿದೆ.
ಗುಂಡಿ– ಹೊಂಡಗಳಿಂದ ತುಂಬಿಕೊಂಡಿರುವ ಮಾರ್ಗದಲ್ಲಿ ರಸ್ತೆ ಹುಡುಕಾಡಬೇಕಾದ ಸ್ಥಿತಿ ಇದೆ. ಸಣ್ಣಪುಟ್ಟ ಕಾರುಗಳು ಸಂಚರಿಸಲು ಸಾಧ್ಯವೇ ಇಲ್ಲದಂತಾಗಿದೆ. ಮೊದಲೇ ಗುಂಡಿ ಬಿದ್ದಿದ್ದ ರಸ್ತೆ ಮಳೆಗಾಲದಲ್ಲಿ ಹೊಂಡದಂತಾಗಿವೆ.
ಅಂಬಳೆ ಕೈಗಾರಿಕಾ ಪ್ರದೇಶ, ಸರ್ಕಾರಿ ವೈದ್ಯಕೀಯ ಕಾಲೇಜು, ಕೇಂದ್ರೀಯ ವಿದ್ಯಾಲಯ ಮತ್ತು ಗೌಡನಹಳ್ಳಿ, ಅಂಬಳೆ ಸೇರಿ ವಿವಿಧ ಗ್ರಾಮಗಳಿಗೆ ಸಂಚರಿಸುವ ಪ್ರಮುಖ ರಸ್ತೆ ಕೂಡ ಇದಾಗಿದೆ. ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತಿವೆ.
ಒಮ್ಮೆ ಈ ರಸ್ತೆಯಲ್ಲಿ ಸಂಚರಿಸಿದರೆ ಮತ್ತೊಮ್ಮೆ ಸವಾರರು ವಾಹನ ತರುವುದಿಲ್ಲ. ಗೊತ್ತಿಲ್ಲದೆ ಇದೇ ರಸ್ತೆಯಲ್ಲಿ ಸಣ್ಣ ಕಾರುಗಳಲ್ಲಿ ಸಾಗಿದರೆ ಮುಂದೆ ಸಾಗುವುದೇ ಕಷ್ಟ. ಮಳೆಗಾಲದಲ್ಲಿ ನೀರಿನಿಂದ ತುಂಬಿಕೊಂಡಿದ್ದ ರಸ್ತೆ ಹೊಂಡಗಳು, ಈಗ ಧೂಳು ಹರಡುತ್ತಿವೆ.
ಪ್ರಮುಖ ರಸ್ತೆ ಆಗಿರುವುದರಿಂದ ಧೂಳಿನ ನಡುವೆಯೇ ವಾಹನಗಳು ಸಾಗುವುದು ಅನಿವಾರ್ಯವಾಗಿದೆ. ಇನ್ನು ರಸ್ತೆ ಬದಿಯ ನಿವಾಸಿಗಳ ಸ್ಥಿತಿಯಂತೂ ಹೇಳ ತೀರದಾಗಿದೆ. ಬಾಗಿಲು ತೆರೆದರೆ ಧೂಳು ಮನೆಯೊಳಗೆ ನುಗ್ಗುವ ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ನಗರಸಭೆ ಮತ್ತು ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಕೈಗಾರಿಕಾ ಪ್ರದೇಶಕ್ಕೆ ಬರುವ ದೊಡ್ಡ ಲಾರಿಗಳಿಂದ ಹೊಂಡಗಳು ದೊಡ್ಡದಾಗಿವೆ. ಅವುಗಳು ಸಾಗುವಾಗ ಹೊಂಡಗಳಲ್ಲಿ ಸಿಲುಕಿ ಉರುಳುವ ಆತಂಕ ನಿವಾಸಿಗಳನ್ನು ಕಾಡುತ್ತಿದೆ. ರಸ್ತೆ ಸಮಸ್ಯೆಗೆ ಮಳೆಗಾಲದ ನೆಪವನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಮಳೆ ಆರಂಭವಾಗುವ ಮುನ್ನ ಏನು ಮಾಡುತ್ತಿದ್ದರು ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.
ವಾಹನ ಸಂಚಾರಕ್ಕೆ ಯೋಗ್ಯವಾದ ರಸ್ತೆಯನ್ನಾಗಿ ಮಾಡದಿದ್ದರೆ ವಾಹನ ಸವಾರರು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈಗ ಒಂದು ವಾರದಿಂದ ಮಳೆ ನಿಂತಿದ್ದು, ಕೂಡಲೇ ರಸ್ತೆ ಅಭಿವೃದ್ಧಿಪಡಿಸಬೇಕು ಎಂಬುದು ನಿವಾಸಿಗಳು ಮತ್ತು ವಾಹನ ಸವಾರರ ಒತ್ತಾಯ.
ಬದಲಿ ರಸ್ತೆಯಲ್ಲಿ ತೆರಳುವ ವಾಹನ
ಈ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವ ವಾಹನಗಳು ಮುಖ್ಯರಸ್ತೆ ಬಿಟ್ಟು ಬಡಾವಣೆಯ ಬದಲಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಅಂಬಳೆ ಕೈಗಾರಿಕಾ ಪ್ರದೇಶದ ಕಡೆಯಿಂದ ಬಂದರೆ ಸಿಗುವ ರೈಲ್ವೆ ಸೇತುವೆ ನಂತರ ಎಡಕ್ಕೆ ತಿರುವು ಪಡೆದು ಬಡಾವಣೆಯ ಕಿರಿದಾದ ರಸ್ತೆಯಲ್ಲಿ ಸಾಗಿ ಮತ್ತೆ ಮುಖ್ಯ ರಸ್ತೆಗೆ ಸೇರಿಕೊಳ್ಳುತ್ತಿದ್ದಾರೆ. ಇದೇ ರೀತಿ ಭಾರಿ ವಾಹನಗಳು ಸಂಚರಿಸಿದರೆ ಬಡಾವಣೆ ರಸ್ತೆಯೂ ಹಾಳಾಗಿದೆ ಎನ್ನುತ್ತಾರೆ ನಿವಾಸಿಗಳು. ಈ ಬದಲಿ ಮಾರ್ಗ ಅರಿಯದೆ ಮುಖ್ಯರಸ್ತೆಯಲ್ಲಿ ಬರುವ ವಾಹನ ಸವಾರರು ಬಿದ್ದು ಎದ್ದು ಹೋಗುವುದು ಅನಿವಾರ್ಯವಾಗಿದೆ.
ಕಾಮಗಾರಿ ಆರಂಭಿಸಲು ಕ್ರಮ
ನಗರೋತ್ಥಾನ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಮನವಿ ಮಾಡಲಾಗಿದೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದು ನಗರಸಭೆ ಸದಸ್ಯ ಮಧುಕುಮಾರ್ ರಾಜ್ ಅರಸ್ ತಿಳಿಸಿದರು. ಕೈಗಾರಿಕಾ ಪ್ರದೇಶಕ್ಕೆ ದೊಡ್ಡ ಲಾರಿಗಳು ಹೋಗುವುದರಿಂದ ಮತ್ತು ನಿರಂತರ ಮಳೆಯಿಂದ ರಸ್ತೆ ಸಂಪೂರ್ಣ ಹಾಳಾಗಿದೆ. ನಗರೋತ್ಥಾನ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಶಾಸಕರಿಗೆ ಮನವಿ ಮಾಡಿದ್ದೇನೆ. ಮಳೆ ಸ್ಥಗಿತಗೊಂಡ ಕೂಡಲೇ ಅಭಿವೃದ್ಧಿಪಡಿಸುವುದಾಗಿ ತಿಳಿಸಿದ್ದಾರೆ. ಮಳೆ ಈಗ ಕಡಿಮೆಯಾಗಿದ್ದು ಶೀಘ್ರವೇ ಕಾಮಗಾರಿ ಆರಂಭವಾಗಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.