ತರೀಕೆರೆ: ದಿನನಿತ್ಯದ ತಮ್ಮ ಬದುಕಿನ ಹಲವಾರು ಘಟನೆಗಳಲ್ಲಿ ಮಾನವೀಯತೆ ತೋರಿಸಬೇಕು. ಇದರಿಂದ ಜೀವನ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ, ಸೌಹಾರ್ಧ ಇರಲ್ಲ ಎಂದು ವಿಶ್ರಾಂತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘ ತರೀಕೆರೆ ಘಟಕ ಮತ್ತು ಯುವ ಸ್ಪೂರ್ತಿ ಅಕಾಡೆಮಿ ಚಿಕ್ಕಮಗಳೂರು ಸಹಯೋಗದಲ್ಲಿ ‘ಮನ-ಮಂಥನ’ ವಿದ್ಯಾರ್ಥಿಗಳು ಮತ್ತು ನೌಕರರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಲ್ಲರಲ್ಲೂ ಆಸೆ ಇರಬೇಕು. ಆದರೆ, ಯಾವ ದಾರಿಯಲ್ಲಿ ಹೋಗುತ್ತಿದ್ದೇವೆ ಎಂಬುದು ಮುಖ್ಯ. ತೃಪ್ತಿ ಮತ್ತು ಶಾಂತಿಯಿಂದ ಪಡೆಯುವುದು ಮುಖ್ಯ. ರಾಜಕೀಯಕ್ಕೆ ಬರುವವರು ಸೇವೆ ಮಾಡಲು ಬರಬೇಕು. ಆಸ್ತಿ ಮಾಡಲು ಬರಬಾರದು ಎಂದರು.
ಇಂದು ಪ್ರಾಮಾಣಿಕರಿಗೆ ಬೆಲೆ ಇಲ್ಲ. ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂತಾಗಿದೆ. ಇದಕ್ಕಾಗಿ ಸಮಾಜದಲ್ಲಿ ಪೈಪೋಟಿ ನಡೆಯುತ್ತಿದೆ. ಇದನ್ನು ಸರಿದಾರಿಯಲ್ಲಿ ಹೋಗಿ ಪಡೆಯುವುದು ತಪ್ಪಲ್ಲ. ಆದರೆ ಅಕ್ರಮವಾಗಿ ಸಂಪಾದಿಸುವುದು ತಪ್ಪು ಎಂದರು.
ಲೋಕಸಭೆಯ 221 ಸದಸ್ಯರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಇವರು ಜಾತಿ, ಹಣ ಮತ್ತು ಭಾಷೆಯ ಆಧಾರದಲ್ಲಿ ಮತ ಹಾಕುತ್ತಾರೆ. ಇಂತಹವರಿಗೆ ಮತ ಹಾಕುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ದುರಾಸೆ. ದುರಾಸೆಗೆ ಮದ್ದಿಲ್ಲ. ತೃಪ್ತಿ ಇರಬೇಕು. ದುರಾಸೆಯನ್ನು ಮಟ್ಟಹಾಕಬೇಕು. ಇದೇ ರೀತಿ ಮುಂದುವರೆದರೆ ದೇಶದಲ್ಲಿ ಕ್ರಾಂತಿಯಾಗುತ್ತದೆ ಎಂದರು.
ಪುರಸಭೆಯ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಅನಂತಪ್ಪ, ಯುವ ಸ್ಪೂರ್ತಿ ಅಕಾಡೆಮಿ ಅಧ್ಯಕ್ಷ ಸುಂದರೇಶ್ ಮಾತನಾಡಿದರು.
ಜಯ ಕರ್ನಾಟಕ ಸಂಘಟನೆಯ ಟಿ.ಎನ್. ಜಗದೀಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ರವಿ ದಳವಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.