
ಪ್ರಜಾವಾಣಿ ವಾರ್ತೆ
ಗುಬ್ಬಿಗಾ (ನರಸಿಂಹರಾಜಪುರ): ಸರ್ಕಾರ ನಡೆಸುತ್ತಿರುವ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲೇ 2ನೇ ಸ್ಥಾನಕ್ಕೆ ಬಂದಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಎಸ್. ಕೀರ್ತನಾ ಹೇಳಿದರು.
ತಾಲ್ಲೂಕಿನ ಗುಬ್ಬಿಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ಹಿಂದೆ ರಾಜ್ಯದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷೆಯಲ್ಲಿ ಚಿಕ್ಕಮಗಳೂರು ಜಿಲ್ಲೆ ಪ್ರಥಮ ಸ್ಥಾನಕ್ಕೆ ಬಂದಿತ್ತು. ಈಗ ಶೇ 98ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. 10 ಸಾವಿರ ಮಂದಿ ಮಾತ್ರ ಬಿಟ್ಟು ಹೋಗಿದ್ದಾರೆ. ಗ್ರಾಮ ಪಂಚಾಯಿತಿಯವರು ಅವರನ್ನು ಪತ್ತೆ ಹಚ್ಚಿ ಸಮೀಕ್ಷೆ ಮಾಡುತ್ತಾರೆ. ಶೇ 100ರಷ್ಟು ಸಾಧನೆ ಮಾಡಲಾಗುವುದು ಎಂದರು.
ಶಾಲೆಯಲ್ಲಿ ವಿಶಾಲವಾದ ಮೈದಾನ ಇದ್ದು, ಹಣ್ಣಿನ ಗಿಡ, ತರಕಾರಿ ಬೆಳೆಬಹುದು. ಅರ್ಧ ಎಕರೆ ಅಡಿಕೆ ತೋಟ ಬೆಳೆದಿದ್ದಾರೆ. ಇದನ್ನು ನರೇಗಾ ಯೋಜನೆಯಡಿ ಸೇರಿಸಿಕೊಳ್ಳುವಂತೆ ಇ.ಒ. ಎಚ್.ಡಿ.ನವೀನ್ ಕುಮಾರ್ ಅವರಿಗೆ ಸೂಚಿಸಿದರು.
ಶಾಲೆಯಲ್ಲಿ ಮಕ್ಕಳಿಗೆ ಶೂ ವಿತರಿಸಿ ಸಂವಾದ ನಡೆಸಿದ ಅವರು, ಮಕ್ಕಳು ಆಟದ ಜತೆಗೆ ಓದಿನ ಕಡೆಗೂ ಗಮನ ನೀಡಬೇಕು. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಜ್ಞಾನ ಸಂಪತ್ತು, ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಶಾಲೆಯಲ್ಲಿ ಉತ್ತಮ ಬಿಸಿಯೂಟ ತಯಾರಿಕರು, ಉತ್ತಮ ಶಿಕ್ಷಕರಿದ್ದಾರೆ. ಎಲ್ಲರೂ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ. ಶಾಲಾಭಿವೃದ್ಧಿ ಸಮಿತಿಯವರು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ತಂಡದಂತೆ ಕೆಲಸ ಮಾಡುತ್ತಿದ್ದಾರೆ. ಕೆಲವು ದಾನಿಗಳೂ ನೆರವು ನೀಡಿದ್ದಾರೆ. ಶಾಲೆಯ ಕಾರಿಡಾರ್ಗೆ ಟೈಲ್ ಅಳವಡಿಸಲು ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೌರವ್, ತಾಲ್ಲೂಕು ಪಂಚಾಯಿತಿ ಇಒ ನವೀನ್ ಕುಮಾರ್, ಬಿಇಒ ರಮೇಶ್ ನಾಯ್ಕ, ಗುಬ್ಬಿಗಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗರತ್ನ, ಮುಖ್ಯ ಶಿಕ್ಷಕ ಅಶೋಕ್, ಪಿಡಿಒ ಸೀಮಾ, ಉದ್ಯೋಗ ಖಾತರಿ ಯೋಜನೆಯ ಸಹಾಯಕ ನಿರ್ದೇಶಕ ಮನಿಷ್, ಎಇಇ ಸಾಗರ್ ಜತೆಗಿದ್ದರು.
ದಿವ್ಯ ಕಾರುಣ್ಯ ಆನಂದಾಶ್ರಮಕ್ಕೆ ಭೇಟಿ: ತಾಲ್ಲೂಕಿನ ಮತ್ತಿಮರ ಗ್ರಾಮದಲ್ಲಿರುವ ದಿವ್ಯ ಕಾರುಣ್ಯ ಆನಂದಾಶ್ರಮಕ್ಕೆ ಎಚ್.ಎಸ್.ಕೀರ್ತನಾ ಭೇಟಿ ನೀಡಿ ಪರಿಶೀಲಿಸಿದರು.
ಈ ಆಶ್ರಮದಲ್ಲಿ 65 ಮಂದಿ ಅನಾಥರು, ಅಂಗವಿಕಲರು, ಬುದ್ಧಿಮಾಂಧ್ಯರು ಇದ್ದು, ಅವರಿಗೆ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಯುಡಿಐಡಿ ಕಾರ್ಡ್ ಇಲ್ಲದೆ ಸರ್ಕಾರದಿಂದ ಸವಲತ್ತು ಸಿಗುತ್ತಿಲ್ಲ ಎಂಬ ದೂರುಗಳು ಬಂದಿದ್ದರಿಂದ ಪರಿಶೀಲನೆ ನಡೆಸಿ ಆಧಾರ್ ಕಾರ್ಡ್ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ 35 ಮಂದಿಯ ಆಧಾರ್ ಕಾರ್ಡ್ ಆಗಿದ್ದು, ಉಳಿದವರಿಗೆ 2 ವಾರದಲ್ಲಿ ಮಾಡಿಸಲಾಗುವುದು. ಸರ್ಕಾರದಿಂದ ಸಿಗುವ ಸೌಲಭ್ಯ ಮಾಡಿಕೊಡಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ ಮಾತನಾಡಿ, ಇಲ್ಲಿನವರಿಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲ ಎಂದು ಗಮನಕ್ಕೆ ತಂದರು.
ಸ್ಮಶಾನಕ್ಕೆ ಜಾಗ ಗುರುತಿಸುವಂತೆ ತಾಲ್ಲೂಕು ಪಂಚಾಯಿತಿ ಇಒಗೆ ಸೂಚಿಸಿದರು.
ದಿವ್ಯ ಕಾರುಣ್ಯ ಆನಂದಾಶ್ರಮದ ಗುರುಗಳಾದ ಆನಂದಸ್ವಾಮಿ, ಲಿಸ್ಸಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗೌರವ್, ಸಿಡಿಪಿಒ ವೀರಭದ್ರಯ್ಯ, ಇ.ಒ. ನವೀನ್ ಕುಮಾರ್, ಅಧಿಕಾರಿಗಳು ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.