ಬಂಧನ
(ಪ್ರಾತಿನಿಧಿಕ ಚಿತ್ರ)
ಚಿಕ್ಕಮಗಳೂರು: ಸ್ನೇಹಿತೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದ 17 ವರ್ಷದ ಬಾಲಕನನ್ನು ನಗರದ ಮಾರ್ಕೆಟ್ ರಸ್ತೆಯ ಜ್ಯೋತಿ ಸರ್ಕ್ಲ್ನಲ್ಲಿ ಅಡ್ಡಗಟ್ಟಿ ನಂತರ ಮನೆಗೆ ನುಗ್ಗಿ ಹಲ್ಲೆ ಮಾಡಿದ ಆರೋಪದಲ್ಲಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ತಮಿಳು ಕಾಲೊನಿಯ ಪರಿಶಿಷ್ಟ ಜಾತಿಗೆ ಸೇರಿದ ಬಾಲಕ, ಮುಸ್ಲಿಂ ಸಮುದಾಯದ ಸ್ನೇಹಿತೆಯನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಮುಸ್ಲಿಂ ಯುವಕರ ಗುಂಪು ಅಡ್ಡಗಟ್ಟಿ ಜಗಳ ಮಾಡಿದೆ’ ಎಂದು ಮೂಲಗಳು ತಿಳಿಸಿವೆ.
ಬಳಿಕ ದೂರು ನೀಡಿರುವ ಬಾಲಕನ ಚಿಕ್ಕಪ್ಪ ಸುಮನ್, ‘ಜಗಳ ಬಿಡಿಸಿಕೊಂಡು ತಮಿಳು ಕಾಲೊನಿಯ ನಮ್ಮ ಮನೆಗೆ ಬಂದ ನಂತರ ಮುಸ್ಲಿಂ ಯುವಕರ ಗುಂಪು ಮನೆಗೆ ನುಗ್ಗಿ ನಮ್ಮ ಮೇಲೆ ಹಲ್ಲೆ ಮಾಡಿದೆ. ಕೀಳು ಜಾತಿಯ ನಿಮಗೆ ಮುಸ್ಲಿಂ ಹುಡುಗಿಯ ಸ್ನೇಹ ಬೇಕಾ ಎಂದು ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ರಹಿ, ನಯಾಜ್, ಫರಾಜ್, ತಮೀಮ್, ಆಜಮ್, ತಬ್ರಿಜ್, ನಹಿಲ್, ಅಹಮ್ಮದ್ ಹನೀಫ್ ಎಂಬುವರ ವಿರುದ್ಧ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
‘ಬಾಲಕನ ಮೇಲೆ ಹಲ್ಲೆ ನಡೆದಿಲ್ಲ. ಆದರೆ, ಅವರನ್ನು ಹೆದರಿಸಿದ್ದಾರೆ. ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದ್ದು, ಮೂವರನ್ನು ಬಂಧಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ದಯಾಮ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.