ಚಿಕ್ಕಮಗಳೂರು: ನಗರದ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಾಗಿದ್ದ ಕೋವಿಡ್ ರೋಗಿ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಮೇಘರಾಜ್ (31) ಅವರನ್ನು ಜನರಲ್ ವಾರ್ಡ್ನಿಂದ ತೀವ್ರ ನಿಗಾ ಘಟಕಕ್ಕೆ (ಐಸಿಯು) ವರ್ಗಾಯಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ, ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೇಘರಾಜ್ ಸಂಬಂಧಿ ಸುಧೀರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ, ‘ಮೂರು ದಿನಗಳ ಹಿಂದೆ ಹೋಲಿಕ್ರಾಸ್ ಆಸ್ಪತ್ರೆಗೆ ದಾಖಲಿಸಿದ್ದೆವು. ಅವತ್ತಿನಿಂದಲೂ ಜನರಲ್ ವಾರ್ಡ್ನಲ್ಲೇ ಇಟ್ಟಿದ್ದಾರೆ. ಬುಧವಾರ ರಾತ್ರಿ (ಇದೇ 13) ಮೇಘರಾಜ್ ಫೋನ್ನಲ್ಲಿ ಮಾತನಾಡಿದ್ದರು.
ಐಸಿಯು ವರ್ಗಾಯಿಸುತ್ತಾರೆ ಎಂದು ಹೇಳಿದ್ದರು. ಆದರೆ, ಆಸ್ಪತ್ರೆಯವರು ವರ್ಗಾಯಿಸಿಲ್ಲ. ಐಸಿಯುನಲ್ಲಿ ಇಟ್ಟು ಚಿಕಿತ್ಸೆ ನೀಡಿದ್ದರೆ ಬದುಕುತ್ತಿದ್ದರೇನೋ?’ ಎಂದು ಕಣ್ಣೀರಿಟ್ಟರು.
‘ಮೇಘರಾಜ್ಗೆ ಫೋನ್ ಮಾಡಿದಾಗ ಆಸ್ಪತ್ರೆ ಸಿಬ್ಬಂದಿ ಕರೆ ಸ್ವೀಕರಿಸಿ, ಅವರು ಮೃತಪಟ್ಟಿದ್ದಾರೆ ಎಂದು ತಿಳಿಸಿದರು. ರೋಗಿಯ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ಮಾಹಿತಿಯನ್ನು ನೀಡಿರಲಿಲ್ಲ.
₹2.5 ಲಕ್ಷ ಬಿಲ್ ಕಟ್ಟಿಸಿಕೊಂಡಿದ್ದಾರೆ. ಆಸ್ಪತ್ರೆಯವರು ಸರಿಯಾಗಿ ಮಾಹಿತಿ ನೀಡದೆ ಮೋಸ ಮಾಡಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.