ADVERTISEMENT

‘ಜೀವನದ ಅಮೂಲ್ಯ ಮೌಲ್ಯ ಪ್ರೀತಿ’

‘ಏಸುವಿನ ಜೀವನ ವೃತ್ತಾಂತ’ ಧ್ವನಿ–ಬೆಳಕು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2018, 16:13 IST
Last Updated 25 ಡಿಸೆಂಬರ್ 2018, 16:13 IST
ಸಂತ ಜೋಸೆಫ್‌ ಪ್ರಧಾನಾಲಯ ವಿದ್ಯುತ್‌ದೀಪಾಲಂಕಾರದಿಂದ ಮಂಗಳವಾರ ಕಂಗೊಳಿಸುತ್ತಿತ್ತು.
ಸಂತ ಜೋಸೆಫ್‌ ಪ್ರಧಾನಾಲಯ ವಿದ್ಯುತ್‌ದೀಪಾಲಂಕಾರದಿಂದ ಮಂಗಳವಾರ ಕಂಗೊಳಿಸುತ್ತಿತ್ತು.   

ಚಿಕ್ಕಮಗಳೂರು: ‘ಜೀವನದ ಅಮೂಲ್ಯ ಮೌಲ್ಯ ಪ್ರೀತಿ. ಕೆಡುಕು ಮಾಡಿದವರನ್ನು ಪ್ರೀತಿಸಬೇಕು’ ಎಂದು ಬಿಷಪ್‌ ಅಂತೋಣಿ ಸ್ವಾಮಿ ಹೇಳಿದರು.

ಕ್ರಿಸ್‌ಮಸ್‌ ಅಂಗವಾಗಿ ನಗರದ ಪ್ರಭುಬೀದಿಯ ಸಂತ ಜೋಸೆಫ್‌ ಪ್ರಧಾನಾಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ‘ಏಸುವಿನ ಜೀವನ ಸಂದೇಶ’ ಧ್ವನಿ–ಬೆಳಕು ಕಾರ್ಯಕ್ರಮಕ್ಕೂ ಮುನ್ನ ಮಾತನಾಡಿದರು. ಶತ್ರುವನ್ನು ಪ್ರೀತಿಸಬೇಕು ಎಂಬುದು ಏಸು ಸ್ವಾಮಿ ಸಂದೇಶ. ದುರ್ಗುಣಗಳಿದ್ದರೆ ಸಂತೋಷದಿಂದ ಜೀವಿಸಲು ಸಾಧ್ಯ ಇಲ್ಲ ಎಂದು ಹೇಳಿದರು.

ಜಗತ್ತಿನ ಎಲ್ಲೆಡೆ ಹಿಗ್ಗಿನಿಂದ ಕ್ರಿಸ್‌ಮಸ್‌ ಆಚರಿಸಲಾಗುತ್ತಿದೆ. ಏಸು ಸ್ವಾಮಿ ಅವರು ವಿಶ್ವಕ್ಕೆ ಶುಭ ಸಂದೇಶಗಳನ್ನು ಸಾರಿದರು. ಭಾರತ ಬಹುಧರ್ಮಗಳ ದೇಶ. ಎಲ್ಲ ಧರ್ಮಗಳಲ್ಲೂ ಒಳ್ಳೆಯದು ಇದೆ. ಅದನ್ನು ನಾವು ಪಾಲಿಸೇಕು. ಆಗ ಎಲ್ಲರೂ ಅನ್ಯೋನ್ಯವಾಗಿ ಜೀವಿಸಲು ಸಾಧ್ಯ. ಎಲ್ಲರೊಂದಿಗೆ ಪ್ರೀತಿಯಿಂದ ಇರುತ್ತೇವೆ. ನಿಸ್ವಾರ್ಥ ಜೀವನ ಮಾಡುತ್ತೇವೆಂದು ನಿರ್ಧಾರ ಮಾಡಬೇಕು ಎಂದರು.

ADVERTISEMENT

ಗಾಯನ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ನಂತರ ‘ಏಸುವಿನ ಜೀವನ ಸಂದೇಶ’ ಧ್ವನಿ–ಬೆಳಕು ಕಾರ್ಯಕ್ರಮ ನಡೆಯಿತು. ಆವರಣದಲ್ಲಿ ನೆರೆದಿದ್ದ ಸಭಿಕರು ಕುತೂಹಲದಿಂದ ಕಾರ್ಯಕ್ರಮ ವೀಕ್ಷಿಸಿದರು.

**

ಕ್ರಿಸ್‌ಮಸ್‌ ಸಡಗರ‌

ನಗರದಲ್ಲಿ ಮಂಗಳವಾರ ಕ್ರಿಸ್‌ಮಸ್‌ ಸಡಗರ ಮೇಳೈಸಿತ್ತು. ಸಂತ ಜೋಸೆಫ್‌ ಪ್ರಧಾನಾಲಯ ಸಹಿತ ಎಲ್ಲ ಚರ್ಚ್‌ಗಳು ಬಣ್ಣಬಣ್ಣದ ವಿದ್ಯುತ್‌ ದೀಪಗಳು, ನಕ್ಷತ್ರಾಕೃತಿಗಳು, ಕ್ರಿಸ್‌ಮಸ್‌ ವೃಕ್ಷಗಳಿಂದ ಅಲಂಕೃತಗೊಂಡಿದ್ದವು.

ಚರ್ಚ್‌ ಆವರಣದಲ್ಲಿ ಗೋದಲಿಗಳನ್ನು ನಿರ್ಮಿಸಿದ್ದರು. ಕೆಲ ಪುಟಾಣಿಗಳು ಸಾಂಟಾಕ್ಲಾಸ್‌ ವೇಷದಲ್ಲಿ ಸಂಭ್ರಮಿಸಿದರು. ಕ್ರಿಶ್ಚಿಯನ್‌ ಸಮುದಾಯದವರು ಚರ್ಚ್‌ಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಮೊಂಬತ್ತಿಗಳನ್ನು ಹಚ್ಚಿಟ್ಟರು.

ಫಾದರ್‌, ಧರ್ಮಾಧ್ಯಕ್ಷರು, ಚರ್ಚ್‌ ಗುರುಗಳಿಗೆ ವಂದಿಸಿದರು.

‘ಹ್ಯಾಪಿ ಕ್ರಿಸ್‌ಮಸ್‌’, ‘ಮೆರಿ ಕ್ರಿಸ್‌ಮೆಸ್‌’ ಹೇಳಿ ಶುಭಾಶಯ ಕೋರಿದರು. ನೆರೆಹೊರೆಯವರಿಗೆ ಕೇಕ್‌ ವಿತರಿಸಿದರು. ಕ್ರಿಸ್‌ಮಸ್‌ ನಿಮಿತ್ತ ಮನೆಗಳಲ್ಲಿ ವಿಶೇಷ ಭಕ್ಷ್ಯ ಭೋಜನ ಇದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.