
ಮೆಣಸೂರು (ನರಸಿಂಹರಾಜಪುರ): ಕ್ರಿಸ್ಮಸ್ ಸಂತೋಷ ಮತ್ತು ಶಾಂತಿ ಸಮಾಧಾನದ ಶ್ರೇಷ್ಠ ಹಬ್ಬವಾಗಿದೆ ಎಂದು ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಟೀನಾ ಹೇಳಿದರು.
ತಾಲ್ಲೂಕಿನ ಮೆಣಸೂರು ಗ್ರಾಮದ ಮೌಂಟ್ ಕಾರ್ಮೆಲ್ ಪದವಿಪೂರ್ವ ಕಾಲೇಜು ಹಾಗೂ ಕಾರ್ಮೆಲ್ ಹಿರಿಯ ಪ್ರಾಥಮಿಕ ಶಾಲೆಯ ಆಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆಯಲ್ಲಿ ಅವರು ಮಾತನಾಡಿದರು.
ಮನುಷ್ಯ ಮನುಷ್ಯನನ್ನು ಪ್ರೀತಿಸುವಾಗ ಮನಸ್ಸಿನಲ್ಲಿ ದೇವರು ಜನಿಸುತ್ತಾನೆ. ದ್ವೇಷಿಸಿದಾಗ ಮನಸ್ಸಿನಲ್ಲಿ ದೇವರು ಮರಣ ಹೊಂದುತ್ತಾನೆ. ಮಕ್ಕಳಿಗಾಗಿ ತಂದೆ–ತಾಯಿ ತ್ಯಾಗ ಮಾಡುತ್ತಾರೆ. ಮಕ್ಕಳು ವೃದ್ಧಾಪ್ಯದಲ್ಲಿ ತಂದೆ–ತಾಯಿಯರನ್ನು ಸಲಹಬೇಕು. ಬಡವರ, ಹಸಿದವರ ರೋಗಿಗಳ ಸೇವೆ ಮಾಡಬೇಕು. ಪ್ರತಿಯೊಬ್ಬರು ಸ್ವಾರ್ಥತೆ, ಅಹಂಕಾರ, ದರ್ಪ ಬಿಟ್ಟು ಜೀವನ ನಡೆಸಬೇಕು. ಆರೋಗ್ಯ, ಸಂಪತ್ತು, ಜ್ಞಾನವನ್ನು ಇತರರ ಒಳಿತಾಗಿ ವಿನಿಯೋಗಿಸಿದಾಗ ದೇವರು ನಮ್ಮಲ್ಲೂ ಜನಿಸುವನು ಎಂಬುದು ಕ್ರಿಸ್ತನ ಸಂದೇಶವಾಗಿದೆ. ಏಸು ಕ್ರಿಸ್ತರ ಸಂದೇಶವನ್ನು ಪಾಲಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸಿ ಎಲ್ಲರೂ ನೆಮ್ಮದಿಯಿಂದ ಬದುಕಬಹುದು ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮೌಂಟ್ ಕಾರ್ಮೆಲ್ ಪಿಯು ಕಾಲೇಜಿನ ಪ್ರಾಂಶುಪಾಲೆ ಸಿಸ್ಟರ್ ಶುಭಾ ಮಾತನಾಡಿ, ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಆರಾಧಿಸುವ ಸಾಂತಕ್ಲಾಸ್ ಕಷ್ಟದಲ್ಲಿರುವವರಿಗೆ ನೆರವಿನ ಸಹಾಯ ಹಸ್ತ ಚಾಚುವ ಸಂಕೇತವಾಗಿದೆ. ಏಸು ಕ್ರಿಸ್ತರು ಜನಿಸಿದ ಗೋದಲಿ ಬಡವರಿಗೆ ಕೊಟ್ಟ ಹೊಸ ಜೀವನದ ಭರವಸೆಯಾಗಿದೆ. ಮನುಷ್ಯನ ಹೃದಯದಲ್ಲಿ ಮಾನವೀಯತೆ, ಪ್ರೀತಿಯಿದ್ದಾಗ ಮಾತ್ರದೇವರು ಕಾಣಲು ಸಾಧ್ಯವಾಗುತ್ತದೆ. ಕ್ರಿಸ್ಮಸ್ ಎಂಬುದು ಪ್ರೀತಿ, ಕರುಣೆ, ಭರವಸೆಯ ಸಂಕೇತವಾಗಿದೆ. ನಮ್ಮನ್ನು ನಾವು ಪ್ರೀತಿಸುವಂತೆ ಇನ್ನೊಬ್ಬರನ್ನು ಪ್ರೀತಿಸಬೇಕು. ನಮ್ಮನ್ನು ಮತ್ತೊಬ್ಬರು ಗೌರವಿಸಬೇಕು ಎಂದು ಅಪೇಕ್ಷೆ ಪಟ್ಟಂತೆ ಇನ್ನೊಬ್ಬರನ್ನು ನಾವು ಗೌರವಿಸಬೇಕು ಎಂಬುದು ಕ್ರಿಸ್ತನ ಸಂದೇಶವಾಗಿದೆ ಎಂದರು.
ವಿದ್ಯಾರ್ಥಿನಿ ಕ್ರಿಸ್ಟಲ್ ಹಬ್ಬದ ಮಹತ್ವದ ಬಗ್ಗೆ ಮಾತನಾಡಿದರು. ಉಪನ್ಯಾಸಕರಾದ ಐ.ಎಂ.ರಾಜೀವ, ಟಿ.ಮಂಜುನಾಥ್, ಸಪ್ನ ಹೆಗ್ಡೆ, ನಂದಿನಿ ಆಲಂದೂರು, ಅನುಷಾ, ಪ್ರೀಜಿನಾ, ಅನುಪಮಾ, ಸುನಿತಾ ವಿದ್ಯಾರ್ಥಿನಿಯರಾದ ಸಹನಾ, ದರ್ಶನಾ, ಬೇಬಿ ಆಯಿಷಾ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.