ಆಲ್ದೂರು: ಸಮೀಪದ ಆವತಿ ಹೋಬಳಿಯ ಹೊಸಳ್ಳಿ ಗ್ರಾಮದ ಗಂಗಮ್ಮ ಅವರ ಜಮೀನಿನಲ್ಲಿ ಹಾಕಿದ್ದ ಕಾಫಿ ಗಿಡಗಳನ್ನು ಅರಣ್ಯ ಸಿಬ್ಬಂದಿ ಕಿತ್ತು ಹಾಕಿದ್ದು, ಜಮೀನಿಗೆ ಮಂಗಳವಾರ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿ ಮಾಹಿತಿ ನೀಡಿದ ಅವರು, 1984ರಿಂದ 2.20 ಎಕರೆ ಜಮೀನು ಗಂಗಮ್ಮ ಅವರ ಅನುಭೋಗದಲ್ಲಿದೆ. ನಮೂನೆ 53, 57ರಲ್ಲಿ ಅರ್ಜಿ ಕೂಡ ಸಲ್ಲಿಸಿದ್ದು ದರಕಾಸ್ತು ಅರ್ಜಿ ಹಾಕಿ ಖಾತೆಗಾಗಿ ಪ್ರಕ್ರಿಯೆ ಮುಂದುವರಿಸಿದ್ದಾರೆ. ಕೆಲ ದಿನಗಳ ಹಿಂದೆ ಅರಣ್ಯ ಇಲಾಖೆಯ ಸಿಬ್ಬಂದಿ ಬಂದು ಇವರು ಹಾಕಿರುವ ಕಾಫಿ ಗಿಡಗಳನ್ನು ಕಿತ್ತು ಹಾಕಿದ್ದಾರೆ. ಜಮೀನು ಆವತಿ ಹೋಬಳಿ ಹೊಸಳ್ಳಿ ಗ್ರಾಮ ಸರ್ವೆ ನಂಬರ್ 11ರಲ್ಲಿ ಒಟ್ಟು 460 ಎಕರೆ ಕಂದಾಯ ಭೂಮಿಯಿದೆ. ಅದರಲ್ಲಿ 350 ಎಕರೆ ಅರಣ್ಯ ಮತ್ತು 97 ಎಕರೆ ಹುಲ್ಲು ಬೆನ್ನೆ ಜಮೀನು ಇದೆ. 97 ಎಕರೆ ಪೈಕಿ 2.20 ಎಕರೆ ಜಮೀನಿನಲ್ಲಿ ಗಂಗಮ್ಮ ಅವರು ತೋಟವನ್ನು ಮಾಡಿಕೊಂಡು ಬಂದಿದ್ದಾರೆ. ವಿನಕಾರಣ ಯಾರೋ ಹೇಳಿದ ಮಾತು ಕೇಳಿಕೊಂಡು ಸರಿಯಾಗಿ ಪರಿಶೀಲಿಸದೆ ಈ ರೀತಿ ಮಾಡಿರುವುದು ಸರಿಯಲ್ಲ ಎಂದು ಹೇಳಿದರು.
ಇದೇ ವೇಳೆ ಎಸಿಎಫ್ ಅವರಿಗೆ ಕರೆ ಮಾಡಿ ಗಿಡಗಳನ್ನು ಕಿತ್ತು ಹಾಕಬಾರದು. ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು ಎಂದು ಹೇಳಿದರು.
ಜಿಲ್ಲಾ ದೌರ್ಜನ್ಯ ತಡೆ ಸಮಿತಿ ಸದಸ್ಯರಾದ ಹುಣಸೆಮಕ್ಕಿ ಲಕ್ಷ್ಮಣ್, ಪ್ರಕಾಶ್, ಅಂಬೇಡ್ಕರ್ ಹೋರಾಟ ವೇದಿಕೆ ಕಠಾರದ ಹಳ್ಳಿ ಗಣೇಶ್, ಬೆರಣಗೋಡು ಮಂಜು, ವಿಜಯ್, ರವಿ, ರಂಜಿತಾ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.