ಕಡೂರು: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೊ ಪಾದಯಾತ್ರೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರಕ್ಕೆ ಅಕ್ಟೋಬರ್ 10 ರಂದು ತಲುಪಲಿದ್ದು, ಚಿಕ್ಕಮಗಳೂರು ಮತ್ತು ಕಡೂರು ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಕೋರಿದರು.
ಪಟ್ಟಣದಲ್ಲಿ ಕಡೂರು-ಬೀರೂರು ಬ್ಲಾಕ್ ಕಾಂಗ್ರೆಸ್ ಬುಧವಾರ ಏರ್ಪಡಿಸಿದ್ದ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಭಾರತ್ ಜೋಡೊ ದೇಶದ ನಾಗರಿಕರ ಧ್ವನಿಯಾಗಿ, ದೇಶದ ಸಂವಿಧಾನ ಉಳಿಸಲು ಹಾಗೂ ಅಂಬೇಡ್ಕರ್, ಗಾಂಧಿ ಅವರ ನೆನಪಿಗಾಗಿ ದೀನ– ದಲಿತರಿಗೆ, ಹಿಂದುಳಿದವರಿಗೆ, ಯುವಕರಿಗೆ ಶಕ್ತಿ ನೀಡುವ ಉದ್ದೇಶ ಇದೆ ಎಂದರು.
ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಮಾತನಾಡಿ, ಭಾರತ್ ಜೋಡೊ ಸೆ.30 ರಂದು ಕರ್ನಾಟಕ ಪ್ರವೇಶಿಸುತ್ತಿದೆ. ಅಕ್ಟೋಬರ್ 10 ರಂದು ಗುಬ್ಬಿ ತಾಲ್ಲೂಕಿನ ಅಂಕಸಂದ್ರ ಗ್ರಾಮಕ್ಕೆ ಬರಲಿರುವ ಪಾದಯಾತ್ರೆಯಲ್ಲಿ ಕಡೂರು ಮತ್ತು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸುಮಾರು 5 ಸಾವಿರ ಕಾರ್ಯಕರ್ತರು ಪಾಲ್ಗೊಳ್ಳಲಿದ್ದೇವೆ ಎಂದರು.
ಮುಖಂಡ ಶರತ್ಕೃಷ್ಣಮೂರ್ತಿ ಮಾತನಾಡಿ ಅಂದು ಬ್ರಿಟಿಷ್ರನ್ನು ಓಡಿಸಲು ಕ್ವಿಟ್ ಇಂಡಿಯಾ ಚಳುವಳಿ ನಡೆದಂತೆ ಇಂದು ಬಿಜೆಪಿಯನ್ನು ಓಡಿಸಲು ಭಾರತ್ ಜೋಡೊ ನಡೆಯುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವನಮಾಲ ದೇವರಾಜ್, ಶಿವಾನಂದಸ್ವಾಮಿ, ನಿಜಾಮುದ್ದೀನ್, ಪಟೇಲ್ಶಿವಣ್ಣ, ಬೀರೂರು ಜಯರಾಮ್, ಕಡೂರು ಪುರಸಭೆ ಸದಸ್ಯ ತೋಟದ ಮನೆ ಮೋಹನ್, ಕಡೂರು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಾಸೂರು ಚಂದ್ರಮೌಳಿ ಮತ್ತು ಆಸಂದಿ ಕಲ್ಲೇಶ್, ಲೋಲಾಕ್ಷಿಬಾಯಿ, ಪ್ರಕಾಶ ನಾಯ್ಕ, ಕುಮಾರನಾಯ್ಕ, ಯಾಸೀನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.