ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಆಡಳಿತ ವ್ಯವಸ್ಥೆ ಕುಸಿತ: ಡಾ.ಕೆ.ಪಿ.ಅಂಶುಮಂತ್

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 1:03 IST
Last Updated 20 ಜನವರಿ 2021, 1:03 IST
ಡಾ.ಕೆ.ಪಿ.ಅಂಶುಮಂತ್
ಡಾ.ಕೆ.ಪಿ.ಅಂಶುಮಂತ್   

ನರಸಿಂಹರಾಜಪುರ: ‘ಮೂರು ತಿಂಗಳಿನಿಂದ ಜಿಲ್ಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಲ್ಲದೆ ಆಡಳಿತ ವ್ಯವಸ್ಥೆ ಕುಸಿದಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಆರೋಪಿಸಿದರು.

ಇಲ್ಲಿನ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಜಿಲ್ಲೆಯಲ್ಲಿ ಅತಿವೃಷ್ಟಿ ಸಮಸ್ಯೆ, ಅಕಾಲಿಕ ಮಳೆಯಿಂದ ರೈತರು ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದು, ಇವರ ಸಮಸ್ಯೆಯನ್ನು ಆಲಿಸುವವರಿಲ್ಲ. ಹುಲಿ ಯೋಜನೆ, ಕಸ್ತೂರಿರಂಗನ್ ವರದಿಯಿಂದ ಜನರು ಆತಂಕದಲ್ಲಿದ್ದು, ಇದರ ಬಗ್ಗೆ ಮಾತನಾಡಬೇಕಾದ ಸಂಸದರು, ಬಿಜೆಪಿಯಲ್ಲಿ ಉನ್ನತ ಮಟ್ಟದ ಹುದ್ದೆ ಹೊಂದಿರುವ ಸಿ.ಟಿ.ರವಿ ಅವರು ಮೌನ ವಹಿಸಿದ್ದಾರೆ. ಬಿಜೆಪಿಯವರಿಗೆ ಜನರ ಸಮಸ್ಯೆಗಿಂತಲೂ ರಾಜಕಾರಣ ಮುಖ್ಯವಾಗಿದೆ’ ಎಂದು ದೂರಿದರು.

‘ಜನರಿಂದ ತಿರಸ್ಕೃತವಾಗಿದ್ದರೂ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯಾಗಿ ನೇಮಕವಾಗಿರುವ ಮಾಜಿ ಶಾಸಕರು ಕೀಳುಮಟ್ಟದ ಪದಗಳನ್ನು ಬಳಸುವ ಮೂಲಕ ಬೇಜವಾಬ್ದಾರಿಯುತವಾಗಿ ಶಾಸಕರನ್ನು, ಕಾಂಗ್ರೆಸ್ ಮುಖಂಡರನ್ನು ದೋಷಿಸುವುದನ್ನು ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಶಾಸಕರಿಗೆ ಸಹಕರಿಸಲಿ’ ಎಂದರು.

ADVERTISEMENT

ಇದೇ 20ರಂದು ರೈತರ ಪರವಾಗಿ ಕೆಪಿಸಿಸಿಯಿಂದ ಹಮ್ಮಿಕೊಳ್ಳಲಾಗಿರುವ ರಾಜಭವನ ಚಲೋ ಕಾರ್ಯಕ್ರಮಕ್ಕೆ ಜಿಲ್ಲೆಯಿಂದಲೂ ಮುಖಂಡರು ಭಾಗವಹಿಸಲಿದ್ದಾರೆ ಎಂದರು.

ಮುಖಂಡರಾದ ಅಂಜುಮ್, ಕಿರಣ್,ಪ್ರಶಾಂತ್ ಶೆಟ್ಟಿ, ಉಪೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.