ಕಡೂರು: ರೈತರನ್ನು ದೂರವಿಟ್ಟು ಕಾರ್ಪೊರೇಟ್ ಸಂಸ್ಕೃತಿಯನ್ನು ಪೋಷಿಸುತ್ತಿರುವ ಸರ್ಕಾರವಿದು ಎಂದು ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಆರೋಪಿಸಿದರು.
ಕಡೂರು ತಾಲ್ಲೂಕಿನ ಮದಗದ ಕೆರೆಗೆ ಮಂಗಳವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಬಾಗಿನ ಸಮರ್ಪಿಸಿ ಅವರು ಮಾತನಾಡಿದರು.
‘ರೈತರ ನೋವಿಗೆ ಸ್ಪಂದಿಸಲು ರೈತ ಜನಪ್ರತಿನಿಧಿಯಿಂದ ಮಾತ್ರ ಸಾಧ್ಯ. ರಾಜ್ಯದ ರೈತರಿಗೆ ಬಗರ್ ಹುಕುಂ ಅಡಿಯಲ್ಲಿ ಸಾಗುವಳಿ ಚೀಟಿ ನೀಡಲು ಸಿದ್ದರಾಮಯ್ಯ ಸರ್ಕಾರದ ಅವದಿಯಲ್ಲಿ ಆದೇಶಿಸಲಾಗಿತ್ತು. ಅವರ ರೈತಪರ ಕೆಲಸಗಳನ್ನು ಇಂದಿನ ರಾಜ್ಯ ಸರ್ಕಾರ ತಡೆಹಿಡಿದಿವೆ. ಇಂದಿನ ಚುನಾಯಿತ ಪ್ರತಿನಿಧಿಗಳಿಗೆ ರಾಜಕೀಯ ಇಚ್ಛಾಶಕ್ತಿ ಕಡಿಮೆ ಇರುವುದರಿಂದ ರೈತರಿಗೆ ಸಾಗುವಳಿ ಪತ್ರ ನೀಡಲಾಗಿಲ್ಲ’ ಎಂದರು
‘ತಾಲ್ಲೂಕಿನ ಜೀವನಾಡಿ ಕೆರೆ ತುಂಬಿದ್ದರೂ ಇದರ ಸರಣಿ ಕೆರೆಗಳು ತುಂಬಿಲ್ಲ. ಐದು ವರ್ಷಗಳ ಭೀಕರ ಬರಗಾಲದ ಕಹಿ ಅನುಭವ ನಮ್ಮೊಂದಿಗಿದೆ. ದೇವರ ಕೃಪೆಯಿಂದ ಮಳೆ ಮತ್ತಷ್ಟು ಚೆನ್ನಾಗಿ ಬಂದು ಎಲ್ಲ ಕೆರೆಗಳೂ ತುಂಬಲಿ. ಕೆರೆಗೆ ಭಾಗಿನ ಅರ್ಪಣೆ ಮಾಡುವುದು ನಮ್ಮ ಸಂಸ್ಕೃತಿ. ತಾಲ್ಲೂಕಿನ ರೈತರ ಪರವಾಗಿ ಅರ್ಪಿಸಿದ್ದೇವೆ. ಯಾವುದೇ ರಾಜಕೀಯ ದೃಷ್ಟಿಯಿಂದಲ್ಲ. ಮುಂದೆ ಅವಕಾಶ ದೊರೆತಲ್ಲಿ ರೈತರ ಧ್ವನಿಯಾಗುವ ಆಶಯ ತಮ್ಮದು’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಲೋಲಾಕ್ಷಿಬಾಯಿ ಮಾತನಾಡಿ, ‘ಮದಗದಕೆರೆ ಆವರಣದಲ್ಲಿ ಪ್ರವಾಸಿ ಮಂದಿರದ ಅವಶ್ಯಕತೆ ಇದೆ. ಎಮ್ಮೆದೊಡ್ಡಿ ಭಾಗದ ರೈತರ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನವಾಗಬೇಕು’ ಎಂದರು.
ಕಡೂಕು ಮತ್ತು ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಚಂದ್ರಮೌಳಿ, ಆಸಂದಿ ಕಲ್ಲೇಶ್, ತಾಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ಚಂದ್ರಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪ್ರೇಮಬಾಯಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಬಸವರಾಜು, ಪುರಸಭೆ ಸದಸ್ಯ ಮೋಹನ್ ಕುಮಾರ್, ಮಾಜಿ ಅಧ್ಯಕ್ಷ ಬಶೀರ್ ಸಾಬ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.