ಚಿಕ್ಕಮಗಳೂರು: ‘ಬಿಹಾರದಲ್ಲಿ ಬಿಜೆಪಿ ಅಧಿಕಾರ ಹಿಡಿದರೆ ಕೋವಿಡ್ ಲಸಿಕೆ ಉಚಿತವಾಗಿ ಪೂರೈಸುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಕಟಿಸಿರುವುದರಲ್ಲಿ ತಪ್ಪೇನಿಲ್ಲ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಸಮರ್ಥಿಸಿಕೊಂಡರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉಚಿತವಾಗಿ ಅಕ್ಕಿ, ಲ್ಯಾಪ್ಟಾಪ್ ಕೊಡುತ್ತೇವೆ ಎಂದು ಪಕ್ಷಗಳು ಪ್ರಣಾಳಿಕೆಯಲ್ಲಿ ಹೇಳುವುದಿಲ್ಲವೇ? ಅಕ್ಕಿ ಹಸಿವು ನೀಗಿಸುತ್ತದೆ. ಹಾಗೆಯೇ ಲಸಿಕೆ ಜೀವ ಉಳಿಸುತ್ತದೆ. ಉಚಿತವಾಗಿ ಲಸಿಕೆ ಪೂರೈಸುವುದು ಶ್ರೇಷ್ಠವಲ್ಲವೆ? ಅದರಲ್ಲಿ ಹುಡುಕಲು ತಪ್ಪು ಏನಿದೆ?’ ಎಂದು ಕೇಳಿದರು.
‘ಉಪ ಚುನಾವಣೆ ನಂತರ ‘ಬಂಡೆ’ (ಡಿ.ಕೆ.ಶಿವಕುಮಾರ್) ಪುಡಿಯಾಗುತ್ತೆ, ‘ಹುಲಿಯಾ’ (ಸಿದ್ದರಾಮಯ್ಯ) ಕಾಡಿಗೆ ಹೋಗುತ್ತೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದನ್ನು ‘ಸ್ಫೋರ್ಟಿವ್’ ಆಗಿ ತೆಗೆದುಕೊಳ್ಳಬೇಕಿತ್ತು. ಹೇಳಿಕೆಯಲ್ಲಿ ವೈಯಕ್ತಿಕ ದಾಳಿ ಏನೂ ಇಲ್ಲ. ಅಭಿಮಾನಿಯೊಬ್ಬ ‘ಹೌದು ಹುಲಿಯಾ’ ಎಂದಾಗ ಎಂಜಾಯ್ ಮಾಡಿದಂತೆ ಅದನ್ನೂ ತೆಗೆದುಕೊಳ್ಳಬೇಕಿತ್ತು’ ಎಂದು ಪ್ರತ್ರಿಕ್ರಿಯಿಸಿದರು.
‘ಈ ಹೇಳಿಕೆ ಅವರಿಗೆ ಬೇಜಾರಾಗುವುದಾದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿ ಬಗ್ಗೆ ಬಳಸಿದ ಮಾತಿನ ಬಗ್ಗೆ ಏನು ಹೇಳಬೇಕು. ಟ್ವಿಟರ್ನಲ್ಲಿ ಅವರು ಸುಸಂಸ್ಕೃತಿಗೆ ತಕ್ಕ ಭಾಷೆ ಬಳಸಿಲ್ಲ ಅನಿಸುತ್ತಿದೆ. ನಾವ್ಯಾರು ಶತ್ರುಗಳಲ್ಲ. ರಾಜಕೀಯ ವಿರೋಧಿಗಳು. ಸಭ್ಯತೆ ಎಲ್ಲೆ ಮೀರಬಾರದು’ ಎಂದು ಹೇಳಿದರು.
‘ರಾಜಕೀಯ ವಿರೋಧಿಗಳು ಕಲ್ಲು ಹೊಡೆಯುತ್ತಿದ್ದಾರೆ ಎಂದರೆ, ರಾಜಕೀಯದಲ್ಲಿ ಕೇಂದ್ರ ಬಿಂದುವಾಗಿ ನನ್ನನ್ನು ಗುರುತಿಸುತ್ತಿದ್ದಾರೆ ಎಂದರ್ಥ. ಬೆಳೆಯುವ ಹಂತದಲ್ಲಿ ಟೀಕೆಗಳು ಇದ್ದೇ ಇರುತ್ತವೆ, ನಾನೂ ಹರ್ಷದಿಂದ ಸ್ವೀಕರಿಸುತ್ತೇನೆ’ ಎಂದು ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.