
ಮೂಡಿಗೆರೆ: ತಾಲ್ಲೂಕಿನ ಚಾರ್ಮಾಡಿ ಘಾಟಿಯ ಅಪಾಯಕಾರಿ ಪ್ರದೇಶಗಳಲ್ಲಿ ಫೋಟೋ ಶೂಟ್ ಮುಂದುವರೆದಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚಾರ್ಮಾಡಿ ಘಾಟಿಯ ಆಲೆಕಾನು ತಿರುವು, ಅಣ್ಣಪ್ಪಸ್ವಾಮಿ ದೇವಾಲಯದ ಮುಂದಿನ ಕಡಿದಾದ ಪ್ರದೇಶಗಳಲ್ಲಿ ಬಂಡೆಗಳ ಮೇಲೆ ಹತ್ತಿ ಹೋಗದಂತೆ ಹಾಗೂ ಕಂದಕಗಳಿಗೆ ಇಳಿಯದಂತೆ ನಾಮಫಲಕ ಅಳವಡಿಸಲಾಗಿದೆ. ಆದರೂ ಎಚ್ಚರಿಕೆಯ ನಾಮಫಲಕವನ್ನು ಲೆಕ್ಕಿಸದ ಪ್ರವಾಸಿಗರು ಕಲ್ಲು ಬಂಡೆಗಳ ಮೇಲೆ ಹತ್ತುವುದು, ಕಂದಕಗಳಿಗೆ ಇಳಿಯುವ ದುಸ್ಸಾಹಸ ಮಾಡುತ್ತಿದ್ದಾರೆ.
ಭಾನುವಾರ ವಾರಾಂತ್ಯ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಘಾಟಿಯಲ್ಲಿ ಇಡೀದಿನ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನ ದಟ್ಟಣೆಯ ನಡುವೆಯೇ, ಪ್ರವಾಸಿಗರು ರಸ್ತೆ ಬದಿ ವಾಹನಗಳನ್ನು ನಿಲ್ಲಿಸಿ, ಅರಣ್ಯ ಪ್ರದೇಶಗಳಿಗೆ ತೆರಳುತ್ತಿದ್ದು ಎರಡು, ಮೂರು ಗಂಟೆಗಳ ಕಾಲ ಅವರ ವಾಹನಗಳು ರಸ್ತೆ ಬದಿಯೇ ನಿಲ್ಲುವಂತಾಗಿದ್ದು ಇದರಿಂದ ಇತರ ಸವಾರರು ಸಂಕಷ್ಟ ಅನುಭವಿಸುವಂತಾಗಿದೆ.
ಘಾಟಿಯಲ್ಲಿ ಇರುವ ಕಲ್ಲುಬಂಡೆಗಳ ಮೇಲೆ ಈಗಲೂ ಸಣ್ಣ ಪ್ರಮಾಣದಲ್ಲಿ ನೀರು ಜಿನುಗುತ್ತಿದ್ದು, ಸ್ವಲ್ಪ ನಿಗಾ ವಹಿಸದಿದ್ದರೂ ಪ್ರಪಾತಕ್ಕೆ ಬೀಳುವ ಅಪಾಯ ಎದುರಾಗುತ್ತದೆ. ಘಾಟಿಯಲ್ಲಿ ಪ್ರವಾಸಿ ವಾಹನಗಳು ನಿಲ್ಲದಂತೆ, ಕಲ್ಲುಬಂಡೆಗಳ ಮೇಲೆ ತೆರಳದಂತೆ, ಪ್ರಪಾತಕ್ಕೆ ಇಳಿಯದಂತೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.