ಬಾಳೆಹೊನ್ನೂರು: ‘ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಲು ಹೃದಯ ಶ್ರೀಮಂತಿಕೆ ಬೇಕು. ಸುಖ ಸಂತೋಷ ಸೌಭಾಗ್ಯ ನಮಗಾಗಿ ಹೇಗೆ ಬಯಸುತ್ತೇವೆಯೋ ಅದೇ ರೀತಿ ಇತರರಿಗಾಗಿ ಬಯಸುವುದು ನಿಜವಾದ ಧರ್ಮ. ವ್ಯರ್ಥ ಕಾಲಹರಣ ಮಾಡುವವರಿಗೆ ಜೀವನದ ಮೌಲ್ಯ ಅರ್ಥವಾಗುವುದಿಲ್ಲ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ತಿಳಿಸಿದರು.
ಪೀಠದಲ್ಲಿ ಜರುಗುತ್ತಿರುವ 29ನೇ ಶರನ್ನವರಾತ್ರಿ ಆಚರಣೆಯ 4ನೇ ದಿನವಾದ ಮಂಗಳವಾರ ಆಶೀರ್ವಚನ ನೀಡಿದ ಅವರು, ‘ಹಣಕ್ಕಿಂತಲೂ ಹೆಚ್ಚು ಬೆಲೆ ಬಾಳುವಂಥಹುದು ಒಳ್ಳೆಯ ಹೆಸರು. ಸುಳ್ಳು ಹೇಳಲು ಹಲವು ದಾರಿ. ಆದರೆ, ಸತ್ಯ ಹೇಳಲು ಇರುವುದೊಂದೇ ದಾರಿ. ಸತ್ಯದ ದಾರಿಯಲ್ಲಿ ಬರುವ ಸಂಕಷ್ಟಗಳಿಗೆ ಅಂಜದೇ ಅಳುಕದೇ ಧರ್ಮದ ಹೆದ್ದಾರಿಯಲ್ಲಿ ಸಾಗುವುದೊಂದೇ ನಮ್ಮ ಗುರಿಯಾಗಬೇಕು. ಮುಳ್ಳುಗಳ ನಡುವೆ ಗುಲಾಬಿ ಅರಳಿ ಸುಗಂಧ ಪರಿಮಳ ಬೀರುವಂತೆ ಕಷ್ಟಗಳ ನಡುವೆ ಬಾಳಿ ಬದುಕಿದರೂ ಮೂಲ ಆದರ್ಶಗಳನ್ನು ಎಂದಿಗೂ ಮರೆಯಬಾರದು. ಚತುರ್ವಿಧ ಪುರುಷಾರ್ಥಗಳಲ್ಲಿ ಒಂದನ್ನಾದರೂ ಸಾಧಿಸದಿದ್ದರೆ ಮಾನವ ಜೀವನ ವ್ಯರ್ಥವಾಗುತ್ತದೆ’ ಎಂದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸತೀಶ ಅವರು 2021ನೇ ‘ಪುಣ್ಯಕೋಟಿ’ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮಿ, ಶಿರಕೋಳ ಹಿರೇಮಠದ ಗುರುಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ, ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ, ಮಳಲಿ ಸಂಸ್ಥಾನ ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮಿ, ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯ ಸ್ವಾಮಿ, ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯ ಸ್ವಾಮಿ, ಚಿಕ್ಕಮಗಳೂರು ಡಿಸಿಎಫ್ ಶರಣಬಸಪ್ಪ, ಲೋಕಾಪುರದ ಸುರೇಶ್ವರಸ್ವಾಮಿ ಹಿರೇಮಠ, ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ, ಕಮಲಾ ಸುರೇಶ್ವರಸ್ವಾಮಿ, ಹಿರೇಮಠ ಲೋಕಾಪುರ, ಶಿಕ್ಷಕ ವೀರೇಶ ಕುಲಕರ್ಣಿ, ಶಿವಮೊಗ್ಗದ ಶಾಂತಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.