ನರಸಿಂಹರಾಜಪುರ: ಕಡೂರಿನ ವಕೀಲರಿಗೆ ತರೀಕೆರೆ ಉಪವಿಭಾಗಾಧಿಕಾರಿ ಅವಾಚ್ಯವಾಗಿ ನಿಂದಿಸಿದ್ದಾರೆ ಎಂದು ಆರೋಪಿಸಿರುವ ತಾಲ್ಲೂಕು ವಕೀಲರ ಸಂಘದ ಸದಸ್ಯರು, ಉಪವಿಭಾಗಾಧಿಕಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಹಶೀಲ್ದಾರ್ ತನುಜಾ ಟಿ.ಸವದತ್ತಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
‘ಜ.22ರಂದು ಕಡೂರಿನ ವಕೀಲ ಹರೀಶ್ ಅವರು ತರೀಕೆರೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಪ್ರಕರಣವೊಂದರ ಬಗ್ಗೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆ ಆದೇಶವನ್ನು ಉಪವಿಭಾಗಾಧಿಕಾರಿಗೆ ಮಂಡಿಸುವಾಗ ಕಡೂರಿನ ವಕೀಲರಿಗೆ ನಿಂದಿಸಿದ್ದಾರೆ. ಕಚೇರಿಯಲ್ಲಿ ಕೂರಿಸಿಕೊಂಡು ವಕೀಲರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ತರೀಕೆರೆ ಪಿಎಸ್ಐಯನ್ನು ಕರೆಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ದೂರಿದ್ದಾರೆ.
‘ಈ ವಿಚಾರ ತಿಳಿದು ತರೀಕೆರೆ ವಕೀಲರ ಸಂಘದ ಸದಸ್ಯರು ಉಪವಿಭಾಗಾಧಿಕಾರಿ ಕಚೇರಿಗೆ ಹೋದಾಗ ತರೀಕೆರೆ ಸಿಪಿಐ ಹಾಗೂ ಇತರ ಪೊಲೀಸ್ ಸಿಬ್ಬಂದಿಯನ್ನು ಕರೆಸಿ ಕಡೂರಿನ ವಕೀಲರನ್ನು ಅವರ ವಶದಲ್ಲಿಟ್ಟುಕೊಳ್ಳುವಂತೆ ಹೇಳಿದ್ದಾರೆ. ಹಾಗಾಗಿ ತರೀಕೆರೆ ಉಪವಿಭಾಗಾಧಿಕಾರಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳ ಬೇಕು’ ಎಂದು ಆಗ್ರಹಿಸಿದ್ದಾರೆ.
ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಎಚ್.ಎ.ಸಾಜು, ಕಾರ್ಯದರ್ಶಿ ಎಂ.ಆರ್.ಶಿವಪ್ರಸಾದ್, ಉಪಾಧ್ಯಕ್ಷ ಕೆ.ಜೈಪ್ರಕಾಶ್, ಖಜಾಂಚಿ ಎಚ್.ಎಂ.ಬಸವರಾಜು, ಸಹಕಾರ್ಯದರ್ಶಿ ಕೆ.ಎಸ್.ಕಾರ್ತಿಕೇಯನ್, ವಕೀಲರಾದ ಎಸ್.ಎಸ್.ಸಂತೋಷ್ ಕುಮಾರ್, ಚಂದ್ರಶೇಖರ್, ವಿದ್ವತ್, ಪೌಲ್ ಚೆರಿಯನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.