ಆಲ್ದೂರು: ಇಲ್ಲಿನ ನಾಡಕಚೇರಿ ವ್ಯಾಪ್ತಿಯ ಸೈಬರ್ ಕೇಂದ್ರಗಳ ಮಾಲೀಕರೊಂದಿಗೆ ಶುಕ್ರವಾರ ಉಪ ತಹಶೀಲ್ದಾರ್ ಸುಮಿತ್ರಾ ಎಲ್. ಸಭೆ ನಡೆಸಿದರು.
ಕಂದಾಯ ಇಲಾಖೆಗೆ ಸಂಬಂಧಪಟ್ಟ ಯೋಜನೆಗಳ ಅರ್ಜಿಗಳನ್ನು ಸೈಬರ್ ಕೇಂದ್ರಗಳಲ್ಲಿ ನಿಗದಿತ ಸಮಯದ ಒಳಗೆ ಸಲ್ಲಿಸಬೇಕು. ಸರ್ಕಾರದ ಯೋಜನೆಗಳು ಅರ್ಹ ಬಡವರಿಗೆ ಮಾತ್ರ ಸಲ್ಲಬೇಕು. ಅರ್ಜಿ ಸಲ್ಲಿಕೆಗೆ ನಿಗದಿತ ಶುಲ್ಕವನ್ನು ಮಾತ್ರ ಪಡೆಯಬೇಕು. ಹೆಚ್ಚಿನ ಶುಲ್ಕ ಪಡೆಯುವವರ ಪರವಾನಗಿ ರದ್ದುಗೊಳಿಸಲಾಗುವುದು ಎಂದರು.
ದಾಖಲಾತಿಗಳನ್ನು ಸರಿಯಾದ ರೀತಿಯಲ್ಲಿ ಸ್ಕ್ಯಾನ್ ಮಾಡಿ ಸಕಾಲದಲ್ಲಿ ಕಳುಹಿಸಬೇಕು ಎಂದು ಸೂಚಿಸಿದರು.
ಕಂದಾಯ ನಿರೀಕ್ಷಕ ವೆಂಕಟೇಶ್ ಮಾತನಾಡಿ, ‘ರೈತರಿಗಾಗಿ ಬೆಳೆ ಸಮೀಕ್ಷೆ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದ್ದು, ಅದರ ಮೂಲಕ ರೈತರು ತಾವೇ ಬೆಳೆಯನ್ನು ಸಮೀಕ್ಷೆ ಮಾಡಬಹುದು. ಬೆಳೆ ಸಮೀಕ್ಷೆ ಚಟುವಟಿಕೆಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಸರ್ಕಾರದ ವಿವಿಧ ಯೋಜನೆಗಳಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆ, ಸಹಾಯಧನ ಪಾವತಿ, ಬೆಳೆ ಪ್ರದೇಶದ ಅಂದಾಜು, ಕೃಷಿ ಮತ್ತು ಇತರೆ ಯೋಜನೆಗಳ ಅಡಿಯಲ್ಲಿ ಫಲಾನುಭವಿಗಳ ಆಯ್ಕೆಗೆ ಬಳಸಿಕೊಳ್ಳಲು ಸಹಕಾರಿಯಾಗುವುದು’ ಎಂದರು.
ಸೈಬರ್ ಕೇಂದ್ರದ ಮಾಲೀಕರಾದ ಮೋಹನ್, ಮೊಹಮ್ಮದ್ ಅಲಿ ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ಗ್ರಾಮಲೆಕ್ಕಿಗರಾದ ಸಂದೀಪ್, ಮೋಹನ್, ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.