ADVERTISEMENT

ಗುಣಮಟ್ಟದ ಬೀಜದಿಂದ ಇಳುವರಿ ಹೆಚ್ಚಳ ಸಾಧ್ಯ: ಡಿ.ಎಲ್.‌ ಅಶೋಕ್‌

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 13:09 IST
Last Updated 15 ಜೂನ್ 2025, 13:09 IST
ಮೂಡಿಗೆರೆ ಕೃಷಿ ಇಲಾಖೆ ಕಚೇರಿ ಮುಂಭಾಗದಲ್ಲಿ ಭಾನುವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ರೈತರಿಗೆ ಬೀಜದ ಭತ್ತ ವಿತರಿಸಲಾಯಿತು
ಮೂಡಿಗೆರೆ ಕೃಷಿ ಇಲಾಖೆ ಕಚೇರಿ ಮುಂಭಾಗದಲ್ಲಿ ಭಾನುವಾರ ಕೃಷಿ ಇಲಾಖೆ ಹಾಗೂ ಕೃಷಿಕ ಸಮಾಜದ ವತಿಯಿಂದ ರೈತರಿಗೆ ಬೀಜದ ಭತ್ತ ವಿತರಿಸಲಾಯಿತು   

ಮೂಡಿಗೆರೆ: ‘ಕೃಷಿಯಲ್ಲಿ ಗುಣಮಟ್ಟದ ಬೀಜ ಖರೀದಿಯಿಂದ ಹೆಚ್ಚು ಇಳುವರಿ ಪಡೆಯಲು ಸಾಧ್ಯ’ ಎಂದು ಕೃಷಿಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಡಿ.ಎಲ್.‌ ಅಶೋಕ್‌ ಹೇಳಿದರು.

ಪಟ್ಟಣದ ಬಿಳಗುಳದಲ್ಲಿರುವ ಕೃಷಿ ಇಲಾಖೆ ಕಚೇರಿಯಲ್ಲಿ ಭಾನುವಾರ ರೈತರಿಗೆ ಬೀಜದ ಭತ್ತವನ್ನು ವಿತರಿಸಿ ಅವರು ಮಾತನಾಡಿದರು.

‘ಮಲೆನಾಡಿನಲ್ಲಿ ಭತ್ತದ ಬೆಳೆಯನ್ನು ನಷ್ಟದ ಬೆಳೆ ಎಂದು ಗುರುತಿಸಲಾಗಿದೆ. ಆದರೆ, ವೆಚ್ಚ ಕಡಿಮೆ ಮಾಡಿ, ಇಳುವರಿ ಹೆಚ್ಚು ಪಡೆದರೆ ಭತ್ತದ ಬೆಳೆಯಲ್ಲಿಯೂ ಲಾಭ ಗಳಿಸಲು ಸಾಧ್ಯವಿದೆ. ರೈತರು ಬೀಜದ ಭತ್ತವನ್ನು ಅಕ್ಕಪಕ್ಕದ ರೈತರಿಂದ ಪಡೆಯುವುದು ಅಥವಾ ಹಿಂದಿನ ಬೆಳೆಯ ಭತ್ತವನ್ನೇ ಬೀಜದ ಭತ್ತವನ್ನಾಗಿ ಮಾಡಿಕೊಳ್ಳುವ ಬದಲು ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರವನ್ನು ಸಂಪರ್ಕಿಸಿ ಗುಣಮಟ್ಟದ ಭತ್ತದ ಬೀಜವನ್ನು ಖರೀದಿಸಿ ಸಸಿಮಡಿ ನಿರ್ಮಿಸಿಕೊಳ್ಳಬೇಕು. ಇದರಿಂದ ಇಳುವರಿ ಹೆಚ್ಚಾಗಿ ಲಾಭ ಪಡೆಯಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

ಕೃಷಿಕ ಸಮಾಜದ ಪದಾಧಿಕಾರಿ ಪಿ.ಕೆ. ನಾಗೇಶ್‌ ಮಾತನಾಡಿ, ಭತ್ತದ ಬೆಳೆಯಲ್ಲಿ ಬೀಜೋಪಚಾರವೂ ಮುಖ್ಯವಾಗಿದ್ದು, ಗದ್ದೆಯಲ್ಲಿನ ನೀರಾವರಿ ವ್ಯವಸ್ಥೆಗೆ ಅನುಗುಣವಾಗಿ ಬೀಜದ ಭತ್ತವನ್ನು ಪಡೆಯಬೇಕು. ಭತ್ತದ ಬೆಳೆಯಲ್ಲಿ ಈಗಾಗಲೇ ಮಲೆನಾಡಿಗೆ ಸೂಕ್ತವಾಗುವ ಹೊಸ ತಳಿಗಳ ಆವಿಷ್ಕಾರಗಳಾಗಿದ್ದು, ಅವುಗಳನ್ನು ಪಡೆದು ನಾಟಿ ಕಾರ್ಯಕ್ಕೆ ಮುಂದಾಗಬೇಕು ಎಂದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುಮಾ ಮಾತನಾಡಿ, ಈ ಬಾರಿ ಮುಂಗಾರು ಪೂರ್ವ ಮಳೆಯು ಉತ್ತಮವಾಗಿದ್ದರಿಂದ ಭತ್ತದ ಗದ್ದೆಗಳು ಸೂಕ್ತವಾಗಿ ಹದವಾಗಿವೆ. ರೈತರು ಮಣ್ಣಿನ ಪರೀಕ್ಷೆ ನಡೆಸಿ, ಮಣ್ಣಿಗೆ ಅವಶ್ಯಕವಾಗಿರುವ ಪೋಷಕಾಂಶಗಳನ್ನು ನೀಡಿ ಕೃಷಿ ನಡೆಸಿದರೆ ಉತ್ತಮ ಇಳುವರಿ ಪಡೆದು ಲಾಭ ಹೊಂದಬಹುದು ಎಂದರು.

ಕಾರ್ಯಕ್ರಮದಲ್ಲಿ ಕೃಷಿಕ ಸಮಾಜದ ಪದಾಧಿಕಾರಿಗಳಾದ ಚಂದ್ರಶೇಖರ್‌, ರಮೇಶ್‌ ಆಚಾರ್‌ ಕಡಿದಾಳ್‌, ಬಿ.ಆರ್.‌ ಯತೀಶ್‌, ರಮೇಶ್‌ ದೇವರುಂದ, ಯು. ಹೊಸಳ್ಳಿ ಜಗನ್ನಾಥ್‌, ಹೆಸ್ಗಲ್‌ ಗಿರೀಶ್‌, ಪುಟ್ಟಸ್ವಾಮಿಗೌಡ, ಸತೀಶ್‌ ಊರುಬಗೆ, ಕುಮಾರ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.