ADVERTISEMENT

ಮಹಿಳಾ ಸಶಕ್ತೀಕರಣ: ಗ್ರಾ.ಪಂಗಳಲ್ಲಿ ಒಕ್ಕೂಟ ರಚನೆ

ಮಹಿಳೆಯರಿಗೆ ಸ್ವಚ್ಚವಾಹಿನಿ ವಾಹನ ಚಾಲನಾ ತರಬೇತಿ ಸಮಾರೋಪ ಸಮಾರಂಭ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2022, 5:19 IST
Last Updated 18 ಆಗಸ್ಟ್ 2022, 5:19 IST
ಚಿಕ್ಕಮಗಳೂರಿನ ಯೂನಿಯನ್ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ  ಸಮಾರಂಭದಲ್ಲಿ ಜಿಲ್ಲಾ ಪಂಚಾಇತಿ ಸಿಇಒ ಪ್ರಭು ಪಾಲ್ಗೊಂಡಿದ್ದರು. 
ಚಿಕ್ಕಮಗಳೂರಿನ ಯೂನಿಯನ್ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ  ಸಮಾರಂಭದಲ್ಲಿ ಜಿಲ್ಲಾ ಪಂಚಾಇತಿ ಸಿಇಒ ಪ್ರಭು ಪಾಲ್ಗೊಂಡಿದ್ದರು.    

ಚಿಕ್ಕಮಗಳೂರು: ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತೀಕರಣಗೊಳಿಸುವ ಉದ್ದೇಶದಿಂದ ಜಿಲ್ಲೆಯ 226 ಗ್ರಾಮಪಂಚಾಯಿತಿಗಳಲ್ಲಿ ಮಹಿಳಾ ಸಂಜೀವಿನಿ ಒಕ್ಕೂಟಗಳನ್ನು ರಚನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಪ್ರಭು ತಿಳಿಸಿದರು.

ಯೂನಿಯನ್ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆಯಲ್ಲಿ, ಈಚೆಗೆ ಸ್ವ–ಸಹಾಯ ಸಂಘಗಳ ಮಹಿಳೆಯರಿಗೆ ಸ್ವಚ್ಚವಾಹಿನಿ ವಾಹನ ಚಾಲನಾ ತರಬೇತಿ ಸಮಾರೋಪ ಸಮಾರಂಭ, ‘ಬ್ಯೂಟಿಪಾರ್ಲರ್ ನಿರ್ವಹಣೆ ತರಬೇತಿ‘ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಮಹಿಳಾ ಒಕ್ಕೂಟಗಳ ರಚಿಸಲಾಗಿದ್ದು ಜಿಲ್ಲೆಗೆ ₹ 60 ಕೋಟಿ ಅನುದಾನ ಮಂಜೂರಾಗಿದೆ. ಈ ಪೈಕಿ ₹ 20 ಕೋಟಿ ಅನುದಾನ ಬಿಡುಗಡೆಗೊಂಡಿದೆ, ಸಂಜೀವಿನಿ ಒಕ್ಕೂಟದ ಮಹಿಳಾ ಸಂಘಗಳಿಗೆ ತಲಾ ₹1.5 ಲಕ್ಷ ಸಾಲ ಸೌಲಭ್ಯ ನೀಡಲಾಗುವುದು ಎಂದರು.

ADVERTISEMENT

ಸ್ವ ಸಹಾಯ ಸಂಘಗಳು ಆಹಾರ ಸಂಸ್ಕರಣೆಗೆ ಮುಂದಾದಲ್ಲಿ ಪ್ರತಿ ಸಂಘಕ್ಕೆ ₹ 10 ಲಕ್ಷ ಸಾಲ, ಕೌಶಲ ತರಬೇತಿ, ಜತೆಗೆ ಮಾರುಕಟ್ಟೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಮಾರುಕಟ್ಟೆಗಾಗಿ ತರೀಕೆರೆಯಲ್ಲಿ ಸಂಜೀವಿನಿ ಶೆಡ್ ನಿರ್ಮಿಸಲಾಗಿದೆ. ಮುಂಬರುವ ದಿನಗಳಲ್ಲಿ ಪ್ರತಿ ತಾಲ್ಲೂಕಿನಲ್ಲಿ ಗ್ರಾಮೀಣ ಮಾರುಟ್ಟೆ ತೆರೆಯಲಾಗುವುದು ಅದಕ್ಕಾಗಿ ಜಾಗ ಗುರುತಿಸುವ ಕಾರ್ಯವೂ ನಡೆದಿದೆ ಎಂದು ತಿಳಿಸಿದರು. ‌

ಸ್ವಚ್ಚವಾಹಿನಿ ವಾಹನ ಚಾಲನೆಗೆ ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಇದಕ್ಕಾಗಿ ವಾಹನ ಚಾಲನಾ ತರಬೇತಿಯನ್ನೂ ನೀಡಲಾಗಿದೆ. ತರಬೇತಿ ಸದುಪಯೋಗಪಡಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುವಂತೆ ಸಲಹೆ ನೀಡಿದರು.

ಡಿಆರ್‌ಡಿಎಕೋಶದ ಯೋಜನಾ ನಿರ್ದೇಶಕ ಸೋಮಶೇಖರ್ ಮಾತನಾಡಿ, ಸ್ವಚ್ಚ ಭಾರತ ಮಿಷನ್ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯಮಿಷನ್ ಮೂಲಕ ಸಂಜೀವಿನಿ ಒಕ್ಕೂಟದಲ್ಲಿ ಆಯ್ಕೆಯಾದ ಮಹಿಳೆಯರಿಗೆ ಆರ್‍ಸೆಟಿಮೂಲಕ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.

ಯೂನಿಯನ್ ಗ್ರಾಮೀಣ ಸ್ವ–ಉದ್ಯೋಗ ತರಬೇತಿ ಸಂಸ್ಥೆ ನಿರ್ದೇಶಕ ಜಿ.ರಮೇಶ ಮಾತನಾಡಿ, 2022-23ನೇ ಸಾಲಿನಲ್ಲಿ 788 ನಿರುದ್ಯೋಗಿ ಯುವಜನರಿಗೆ ತರಬೇತಿ ನೀಡುವ ಗುರಿ ಇದೆ. ಈವರೆಗೆ 312 ಮಂದಿಗೆ ತರಬೇತಿ ನೀಡಲಾಗಿದೆ ಎಂದರು.

ವಾಹನ ಚಾಲನಾ ತರಬೇತಿ ಉಪನ್ಯಾಸಕ ಫಿಲಿಫ್ ಕಾರ್ಲೊ, ವಿಶ್ವನಾಥ, ಉಪನ್ಯಾಸಕಿ ಅಪರ್ಣಾ ವಾಲಿ, ಗಿರಿಜಾ, ಸರ್ವಮಂಗಳ, ರೇಖಾ, ಗೌರಮ್ಮ, ಶ್ವೇತಾ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.