ಚಿಕ್ಕಮಗಳೂರು: ಕರ್ನಾಟಕ ಪ್ರದೇಶ ಕುರುಬರ ಸಂಘದ ಆಡಳಿತ ಮಂಡಳಿಯ ಚಿಕ್ಕಮಗಳೂರು ಜಿಲ್ಲೆಯ ನಾಲ್ಕು ನಿರ್ದೇಶಕರ ಸ್ಥಾನಗಳಿಗೆ ಭಾನುವಾರ ಚುನಾವಣೆ ನಡೆಯಿತು. ನಾಲ್ಕು ನಿರ್ದೇಶಕ ಸ್ಥಾನಗಳ ಪೈಕಿ ಒಂದು ಮಹಿಳೆಗೆ ಮೀಸಲಾಗಿದೆ.
ಜಿಲ್ಲಾ ಪಂಚಾಯಿತಿ ಬಳಿಯ ಕನಕ ಸಮುದಾಯ ಭವನ ಆವರಣದ ಶಾಲಾ ಕಟ್ಟಡದಲ್ಲಿ ಮತದಾನ ನಡೆಯಿತು. ನಾಲ್ಕು ಮತಗಟ್ಟೆಗಳು ಇದ್ದವು. ಒಟ್ಟು 3,365 ಮತದಾರರು ಇದ್ದಾರೆ.
ಬೆಳಿಗ್ಗೆ 9ರಿಂದ ಸಂಜೆ 4ಗಂಟೆವರೆಗೆ ಮತದಾನ ನಡೆಯಿತು. ಸಮುದಾಯದ ಮುಖಂಡರು, ಸ್ಪರ್ಧಿಗಳು ಉತ್ಸಾಹದಿಂದ ಮತದಾನ ಮಾಡಿದರು.
ಮತದಾರರು ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಬ್ಬ ಮತದಾರ ಸಾಮಾನ್ಯ ಕ್ಷೇತ್ರದಲ್ಲಿ ಮೂವರಿಗೆ, ಮಹಿಳಾ ಕ್ಷೇತ್ರದಲ್ಲಿ ಒಬ್ಬರಿಗೆ ಮತ ಹಾಕಬೇಕು.
ಮಹಿಳಾ ನಿರ್ದೇಶ ಸ್ಥಾನಕ್ಕೆ ಜಿ.ಎಸ್.ರೇಖಾ ಹುಲಿಯಪ್ಪಗೌಡ ಮತ್ತು ಸವಿತಾ ಸತ್ಯನಾರಾಯಣ ಈ ಇಬ್ಬರು ಕಣದಲ್ಲಿದ್ದಾರೆ. ಮೂರು ಸಾಮಾನ್ಯ ಸ್ಥಾನಗಳಿಗೆ ಟಿ.ಸಿ.ದರ್ಶನ್, ಡಿ.ಸಿ.ಪುಟ್ಟೇಗೌಡ, ಎಂ.ಎಸ್.ಬಸವರಾಜಪ್ಪ, ಬಿ.ಎಂ.ಮುರುಗೇಶಪ್ಪ, ಕೆ.ಎಸ್.ಲೋಕೇಶಪ್ಪ, ಕೆ.ಟಿ.ಶ್ರೀನಿವಾಸ್, ಕೆ.ಜೆ.ಸಚ್ಚಿನ್, ಟಿ.ಎಚ್.ಹಾಲವಜ್ರಪ್ಪ ಒಟ್ಟು ಎಂಟು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಸಂಜೆ 5.30ರ ನಂತರ ಮತ ಎಣಿಕೆ ಪ್ರಕ್ರಿಯೆ ಶುರುವಾಗಿತ್ತು. ಮಹಿಳಾ ಸ್ಥಾನದಲ್ಲಿ ರೇಖಾ ಹುಲಿಯಪ್ಪ ಗೌಡ ಮುನ್ನಡೆ ಸಾಧಿಸಿದ್ದರು. ಸಹಕಾರ ಇಲಾಖೆಯ ಅಭಿವೃದ್ಧಿ ಅಧಿಕಾರಿ ಗುರುಮೂರ್ತಿ ಅವರು ಚುನಾವಣಾ ಅಧಿಕಾರಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.