ಚಿಕ್ಕಮಗಳೂರು: ತಾಲ್ಲೂಕಿನ ಹರಿಹರದಳ್ಳಿಯ ಮನೆಯಲ್ಲಿ ಭಾನುವಾರ ರಾತ್ರಿ ಟೈಲ್ಸ್ ಅಳವಡಿಕೆ ಕೆಲಸ ಮಾಡಿ ಮಲಗಿದ್ದ ಶಿವಕುಮಾರ್ (40) ಹಾಗೂ ಭರತ್ (20) ಮೃತಪಟ್ಟಿದ್ದು, ತೀವ್ರ ಅಸ್ವಸ್ಥಗೊಂಡಿದ್ದ ಸಚಿನ್ ಎಂಬುವರನ್ನು ಬೆಂಗಳೂರಿಗೆ ಒಯ್ಯಲಾಗಿದೆ. ವಿದ್ಯುತ್ ತಗುಲಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ.
ಶಿವಕುಮಾರ್ ಅವರು ಗಾರೆ ಕೆಲಸ, ಭರತ್ ಅವರು ಕಾಫಿ ಕ್ಯೂರಿಂಗ್ ವರ್ಕ್ಸ್ನಲ್ಲಿ ಕೆಲಸ ಮಾಡುತ್ತಿದ್ದರು.
‘ಮುಂದಿನವಾರ ಹೊಸಮನೆ ಪ್ರವೇಶ ಇತ್ತು. ಮನೆಗೆ ಟೈಲ್ಸ್ ಅಳವಡಿಸುವ ಕೆಲಸ ಮಾಡಿ ರಾತ್ರಿ ಮಲಗಿದ್ದಾರೆ. ಬೆಳಿಗ್ಗೆ 6 ಗಂಟೆಯಾದರೂ ಏಳದಿರುವದನ್ನು ಗಮನಿಸಿ ಕಿಟಕಿಯಲ್ಲಿ ನೋಡಿದಾಗ ಮೂವರು ಪ್ರಜ್ಞೆಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಬಾಗಿಲು ಒಡೆದು ಒಳಕ್ಕೆ ಹೋಗಿ ನೋಡಿದಾಗ ಈ ಅವಘಡ ಗೊತ್ತಾಗಿದೆ. ಅಸ್ವಸ್ಥವಾಗಿದ್ದ ಚೇತನ್ನನ್ನು ಚಿಕಿತ್ಸೆಗೆ ಬೆಂಗಳೂರಿಗೆ ಒಯ್ಯಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆಂಚೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿದ್ಯುತ್ ಅವಘಡದಿಂದ ಅಥವಾ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಕಾರಣ ಗೊತ್ತಾಗಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.