ADVERTISEMENT

ಆನೆ ತುಳಿತಕ್ಕೆ ಇಬ್ಬರು ಬಲಿ: ಜನಾಕ್ರೋಶ

ಶೃಂಗೇರಿ–ಕಾರ್ಕಳ ಹೆದ್ದಾರಿಯಲ್ಲಿ ದಿನವಿಡೀ ವಾಹನ ಸಂಚಾರ ತಡೆದು ಆಕ್ರೋಶ: ರಸ್ತೆಯಲ್ಲೇ ಅಡುಗೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 5:17 IST
Last Updated 1 ನವೆಂಬರ್ 2025, 5:17 IST
ಹರೀಶ್ ಶೆಟ್ಟಿ
ಹರೀಶ್ ಶೆಟ್ಟಿ   

ಶೃಂಗೇರಿ: ತಾಲ್ಲೂಕಿನ ಕುದುರೆಮುಖ ರಾಷ್ಟ್ರೀಯ ಉದ್ಯಾನದೊಳಗಿನ ಕೆರೆಕಟ್ಟೆ ಗ್ರಾಮದ ಕೆರೆಗದ್ದೆಗೆ ಬಂದಿದ್ದ ಒಂಟಿ ಸಲಗ ದಾಳಿಗೆ ಇದೇ ಗ್ರಾಮದ ಇಬ್ಬರು ಮೃತಪಟ್ಟಿದ್ದು, ಇದರಿಂದ ರೊಚ್ಚಿಗೆದ್ದ ಸ್ಥಳೀಯರು ರಸ್ತೆ ಸಂಚಾರ ತಡೆದು ಆಕ್ರೋಶ ವ್ಯಕ್ತಪಡಿಸಿದರು.

ಕೆರೆಗದ್ದೆಯ ಹರೀಶ್ ಶೆಟ್ಟಿ (53) ವರ್ಷ ಮತ್ತು ಉಮೇಶ್ ಗೌಡ (54) ಮೃತಪಟ್ಟವರು. ಹರೀಶ್‍ ಅವರಿಗೆ ತಾಯಿ, ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ. ಉಮೇಶ್‍ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಹರೀಶ್ ಶೆಟ್ಟಿ ಅವರು ದನದ ಕೊಟ್ಟಿಗೆಗೆ ಸೋಪ್ಪು ತರಲು ಪಕ್ಕದ ತೋಟದ ಸಮೀಪ ಹಡ್ಯಕ್ಕೆ ತೆರಳಿದ್ದರು. ಸೊಪ್ಪು ಹೊತ್ತು ಬರುವಾಗ ಏಕಾಏಕಿ ಒಂಟಿ ಸಲಗ ದಾಳಿ ಮಾಡಿದೆ. ಮೃತರು ಕೂಗಿಕೊಂಡಾಗ ನಾಯಿಗಳು ಬೋಗಳಲು ಆರಂಭಿಸಿದವು. ಆಗ ಪಕ್ಕದ ಮನೆಯ ಉಮೇಶ್ ಗೌಡ ಅವರು ನೋಡಲು ಹೋಗಿದ್ದಾಗ ಅವರ ಮೇಲೂ ಆನೆ ದಾಳಿ ಮಾಡಿದೆ ಎಂದು ಸ್ಥಳೀಯರು ಹೇಳಿದರು.

ADVERTISEMENT

ಹರೀಶ್ ಶೆಟ್ಟಿ ಮತ್ತು ಉಮೇಶ್ ಗೌಡ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಸಂಖ್ಯೆಯ ಗ್ರಾಮಸ್ಥರು ಜಮಾಯಿಸಿ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಟಿ.ಡಿ. ರಾಜೇಗೌಡ ಮತ್ತು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು.

ಬೆಳಿಗ್ಗೆ 9ರಿಂದ ಸಂಜೆ 6ರವರೆಗೆ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮಂಗಳೂರು, ಕಾರ್ಕಳದಿಂದ ಶೃಂಗೇರಿಗೆ ಬರುವ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ಕೆರೆಕಟ್ಟೆಯಿಂದ ಮಾಳ ಗೇಟ್‍ ತನಕ 20 ಕಿಲೋ ಮೀಟರ್ ತನಕ  ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಮಲೆನಾಡು ಮತ್ತು ಕರಾವಳಿ ಜನಪರ ಒಕ್ಕೂಟ, ಮಲೆನಾಡು ನಾಗರಿಕ ಹಕ್ಕುಗಳ ಹೋರಾಟ ಸಮಿತಿ, ರೈತ ಸಂಘ, ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು, ಜನಪ್ರತಿನಿಧಿಗಳು, ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

‘ರೈತರ ಹೆಣ ಬಿದ್ದ ಮೇಲೆ ಅಧಿಕಾರಿಗಳು ಬರುತ್ತಾರೆ. ಜನಪ್ರತಿನಿಧಿಗಳು ಸಾಂತ್ವನ ಹೇಳಿ ಹೋಗುತ್ತಾರೆ. ಒಂದಷ್ಟು ಪರಿಹಾರ ನೀಡಿದರೆ ಸತ್ತವರು ಎದ್ದು ಬರಲು ಸಾಧ್ಯವಿಲ್ಲ. ಅವರ ಕುಟುಂಬದವರನ್ನು ದೇವರೇ ಕಾಪಾಡಬೇಕು. ಶೃಂಗೇರಿ ಕ್ಷೇತ್ರದಲ್ಲಿ ರೈತರ ಸಮಸ್ಯೆಗಳನ್ನು ಕೇಳುವ ಕಾಳಜಿ ಅಧಿಕಾರಿಗಳಿಗೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಣ್ಣುಮುಚ್ಚಿ ಕುಳಿತಿದೆ. ಶೃಂಗೇರಿ ಕ್ಷೇತ್ರದಲ್ಲಿ ಆನೆಗಳು ಬಾರದಂತೆ ಸರ್ಕಾರ ಕೂಡಲೇ ಬಂದೋಬಸ್ತ್‌ ಮಾಡಬೇಕು’ ಎಂದು ರೈತ ಸಂಘದ ಕ್ಷೇತ್ರ ಘಟಕದ ಅಧ್ಯಕ್ಷ ಕರುವಾನೆ ನವೀನ್ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಶಾಸಕ ಟಿ.ಡಿ ರಾಜೇಗೌಡ, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ, ಮಂಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ವನ್ಯಜೀವಿ ವಿಭಾಗದ ಡಿಸಿಎಫ್‌ ಶಿವರಾಮ ಬಾಬು, ಎಸಿಎಫ್ ಮೋಹನ್ ಕುಮಾರ್, ವಲಯಾ ಅರಣ್ಯ ಸಂರಕ್ಷಣಾಧಿಕಾರಿ ಮಧುಕರ್, ವನ್ಯಜೀವಿ ವಲಯ ಅರಣ್ಯ ಸಂರಕ್ಷಣಾಧಿಕಾರಿ ಅನಿಲ್ ಕುಮಾರ್ ಭೇಟಿ ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

ಉಮೇಶ್ ಗೌಡ
ಕೆರೆಕಟ್ಟೆ ಬಳಿ ರಸ್ತೆಯಲ್ಲಿ ಗಂಜಿ ಬೇಯಿಸಿ ಪ್ರತಿಭಟನೆ ನಡೆಸಿದ ಸ್ಥಳೀಯರು
ಶೃಂಗೇರಿಯಿಂದ ಮಂಗಳೂರಿಗೆ ತೆರಳುವ ರಸ್ತೆಯಲ್ಲಿ ವಾಹನ ಸಾಲುಗಟ್ಟಿ ನಿಂತಿರುವುದು

₹20 ಲಕ್ಷದ ಚೆಕ್ ವಿತರಣೆ

ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ ಶಾಸಕ ಟಿ.ಡಿ.ರಾಜೇಗೌಡ ಅವರು ಸರ್ಕಾರದಿಂದ ನೀಡುವ ಪರಿಹಾರದ ₹20 ಲಕ್ಷ ಮೊತ್ತದ ಚೇಕ್ ವಿತರಿಸಿದರು. ವೈಯಕ್ತಿಕವಾಗಿ ಮೃತರ ಕುಟುಂಬಕ್ಕೆ ತಲಾ ₹1 ಲಕ್ಷ ಹಣದ ಜೊತೆ ಎರಡು ಕುಟುಂಬಕ್ಕೂ ತಲಾ ₹5 ಲಕ್ಷ ಪರಿಹಾರ ವಿತರಿಸಲಾಗುವುದು. ಆನೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು. ಉಳಿದ ಆನೆಗಳನ್ನು ಓಡಿಸಲು ಅರಣ್ಯ ಇಲಾಖೆ ಮುಂದಾಗಲಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಪುನರ್ವಸತಿ ವಿಳಂಬ ಸಾವಿಗೆ ಕಾರಣ

ಕುದುರೆಮುಖ ರಾಷ್ಟ್ರೀಯ ಉದ್ಯಾನದಿಂದ ಹೊರ ಬರಲು ಸಿದ್ಧವಿರುವ ಕುಟುಂಬಗಳಿಗೆ ಪುನರ್ವಸತಿ ನೀಡಿದ್ದರೆ ಈ ಸಾವು ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ‘ಪುನರ್ವಸತಿಗೆ 650 ಕುಟುಂಬಗಳು ಬಾಕಿ ಇವೆ. ಮೌಲ್ಯಮಾಪನ ಸಂಪೂರ್ಣಗೊಂಡು ಜಿಲ್ಲಾ ಸಮಿತಿಯ ಅನುಮೋದನೆಗೆ ಬಾಕಿ ಇರುವ ಪ್ರಕರಣಗಳಿಗೆ 2025ರ ಹೊಸ ದರ ಅನ್ವಯಿಸುವಂತೆ ಮಾಡಬೇಕು. ತೋಟಗಾರಿಕೆ ಇಲಾಖೆಯ ಬೆಳೆಗಳ ಮೌಲ್ಯಮಾಪನ ವೇಳೆಯಲ್ಲಿ ರೈತರು ಬೆಳೆದ ಎಲ್ಲಾ ಮಾದರಿಯ ಬೆಳೆಗಳಿಗೆ ಗ್ರೇಡ್ –1  ನೀಡಬೇಕು’ ಎಂದು ಸ್ಥಳೀಯರಾದ ರಾಜೇಶ್ ದ್ಯಾವಂಟು ಒತ್ತಾಯಿಸಿದರು.

ನ. 17ಕ್ಕೆ ಜನಸ್ಪಂದನಾ ಸಭೆ

ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿ ಪುನರ್ವಸತಿ ಸಮಸ್ಯೆ ಸೇರಿದಂತೆ ಈ ಭಾಗದ ಜನರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನ. 17ರಂದು ಕೆರೆಕಟ್ಟೆಯಲ್ಲಿ ಜನಸ್ಪಂದನಾ ಸಭೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು. ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಅರಣ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಏಳು ಜನ ಆನೆ ದಾಳಿಯಿಂದ ಮೃತಪಟ್ಟಿದ್ದಾರೆ. ನಾಲ್ಕು ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ. ಉಳಿದ ಆನೆಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

‘ಸರ್ಕಾರ ಮಾಡಿರುವ ಕೊಲೆ’

ಕಾಡಾನೆ ತುಳಿದು ಇಬ್ಬರು ಮೃತಪಟ್ಟಿರುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಿರುವ ಕೊಲೆ ಎಂದು ಮಲೆನಾಡು ಕರಾವಳಿ ಜನಪರ ಒಕ್ಕೂಟದ ಅಧ್ಯಕ್ಷ ಅನಿಲ್ ಹೊಸಕೊಪ್ಪ ಆಕ್ರೋಶ ವ್ಯಕ್ತಪಡಿಸಿದರು. ಅವರು ಊರು ಬಿಡಲು ತಯಾರಿದ್ದರೂ 8 ವರ್ಷಗಳಿಂದ ಪರಿಹಾರ ಕೊಟ್ಟಿಲ್ಲ. ರಾಷ್ಟೀಯ ಉದ್ಯಾನವನ ವ್ಯಾಪ್ತಿಯಲ್ಲಿ ಈ ಸ್ಥಳ ಬರುವುದರಿಂದ ಕೇಂದ್ರ ಪರಿಸರ ಸಚಿವರು ಹಾಗೂ ವನ್ಯಜೀವಿಗೆ ಸಂಬಂಧಪಟ್ಟವರು ಹೊಣೆಗಾರರು. ಕುಟುಂಬಕ್ಕೆ ಹೆಚ್ಚಿನ ಪರಿಹಾರದ ಜತೆಗೆ ಆ ಭಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

- ₹300 ಕೋಟಿ ಪರಿಹಾರಕ್ಕೆ ವರದಿ ಸಲ್ಲಿಕೆ 

ಬಾಳೆಹೊನ್ನೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಒಟ್ಟು 1300 ಕುಟುಂಬಗಳು ವಾಸಿಸುತ್ತಿದ್ದು 600 ಕುಟುಂಬಗಳು ಸ್ವಯಂ ಪ್ರೇರಣೆಯಿಂದ ಹೊರ ಬರಲು ಇಚ್ಚಿಸಿವೆ. ಈ ಪೈಕಿ 300 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ ಎಂದು ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಡಿಸಿಎಫ್ ಶಿವರಾಮ ಬಾಬು ‘ಪ್ರಜಾವಾಣಿ’ಗೆ ತಿಳಿಸಿದರು. 300 ಕುಟುಂಬಗಳಿಗ ಪರಿಹಾರ ನೀಡಲು ಸುಮಾರು ₹300 ಕೋಟಿ ಅಗತ್ಯವಿದ್ದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಮೃತ ಉಮೇಶ್ ಕುಟುಂಬ ಕೂಡ ಉದ್ಯಾನ ತೊರೆಯಲು ನಿರ್ಧರಿಸಿ ಅರ್ಜಿ ಸಲ್ಲಿಸಿತ್ತು. ₹53 ಲಕ್ಷ ಪರಿಹಾರ ಬಂದಿದ್ದು ಇನ್ನೆರಡು ದಿನದಲ್ಲಿ ವಿತರಿಸಲು ಉದ್ದೇಶಿಸಲಾಗಿತ್ತು ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.