ADVERTISEMENT

ಮಾನವ– ವನ್ಯಜೀವಿ ಸಂಘರ್ಷ ತಡೆ ಜಾಗೃತಿ

ಆನೆ ದಿನಾಚರಣೆ: ಅರಣ್ಯ ಸಿಬ್ಬಂದಿಯಿಂದ ಬೈಕ್‌ ಜಾಥಾ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 6:13 IST
Last Updated 13 ಆಗಸ್ಟ್ 2020, 6:13 IST
ಚಿಕ್ಕಮಗಳೂರು ತಾಲ್ಲೂಕಿನ ಕೈಮರದಲ್ಲಿ ಬುಧವಾರ ಡಿಎಫ್‌ಒ ಜಗನ್ನಾಥ್‌ ಅವರು ಬೈಕ್‌ ರ‍್ಯಾಲಿಗೆ ಹಸಿರು ನಿಶಾನೆ ತೋರಿದರು. ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್‌, ಆರ್‌ಎಫ್‌ಒ ಸ್ವಾತಿ ಇದ್ದಾರೆ.
ಚಿಕ್ಕಮಗಳೂರು ತಾಲ್ಲೂಕಿನ ಕೈಮರದಲ್ಲಿ ಬುಧವಾರ ಡಿಎಫ್‌ಒ ಜಗನ್ನಾಥ್‌ ಅವರು ಬೈಕ್‌ ರ‍್ಯಾಲಿಗೆ ಹಸಿರು ನಿಶಾನೆ ತೋರಿದರು. ಗೌರವ ವನ್ಯಜೀವಿ ಪರಿಪಾಲಕ ಜಿ.ವೀರೇಶ್‌, ಆರ್‌ಎಫ್‌ಒ ಸ್ವಾತಿ ಇದ್ದಾರೆ.   

ಚಿಕ್ಕಮಗಳೂರು: ಅರಣ್ಯ ಇಲಾಖೆ ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ವತಿಯಿಂದ ಆನೆ ದಿನಾಚರಣೆ ಅಂಗವಾಗಿ ಬುಧವಾರ ಮಾನವ ಮತ್ತು ಕಾಡುಪ್ರಾಣಿ ಸಂಘರ್ಷ ತಡೆ ಜಾಗೃತಿ ಜಾಥಾ ನಡೆಯಿತು.

ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌. ಎಚ್‌. ಜಗನ್ನಾಥ್‌ ಅವರು ಬೈಕ್‌ ರ‍್ಯಾಲಿಗೆ ಚಾಲನೆ ನೀಡಿದರು. ಕೈಮರದಿಂದ ಹೊರಟ ಜಾಥಾ ಮಲ್ಲೇನಹಳ್ಳಿ– ಹೊಸಪೇಟೆ ಮಾರ್ಗವಾಗಿ ಕಡೂರು ತಾಲ್ಲೂಕಿನ ಎಮ್ಮೆದೊಡ್ಡಿ ಬಳಿಯ ಕಲ್ಲುಹೊಳೆ ತಲುಪಿ ಸಂಪನ್ನಗೊಂಡಿತು.

ಕಡೂರು, ತರೀಕೆರೆಯಿಂದಲೂ ಜಾಥಾ ಬಂದಿತ್ತು.

ADVERTISEMENT

ಈ ವೇಳೆ ಮಾತನಾಡಿದ ಉಪ ಅರಣ್ಯಸಂರಕ್ಷಣಾಧಿಕಾರಿ ಎನ್‌. ಎಚ್‌. ಜಗನ್ನಾಥ್‌ ಅವರು ‘ಕಾಡು, ಕಾಡು ಪ್ರಾಣಿಗಳಿದ್ದರೆ ನಾಡು. ಅವುಗಳನ್ನು ರಕ್ಷಿಸುದು ಎಲ್ಲರ ಕರ್ತವ್ಯ. ಕಾಡು ಪ್ರಾಣಿಗಳು ಹೊಲಕ್ಕೆ ನುಗ್ಗಿದರೆ ತಕ್ಷಣವೇ ಅರಣ್ಯ ಸಿಬ್ಬಂದಿಗೆ ತಿಳಿಸಬೇಕು’ ಎಂದು ಅವರು ಸಲಹೆ ನೀಡಿದರು.

ಸಿಬ್ಬಂದಿ, ಅಧಿಕಾರಿಗಳು ಮಾರ್ಗದುದ್ದಕ್ಕೂ ಗ್ರಾಮಗಳ ಜನರಿಗೆ ಕಾಡು, ಕಾಡು ಪ್ರಾಣಿಗಳ ರಕ್ಷಣೆ ಮಹತ್ವವನ್ನು ತಿಳಿಸಿದರು. 60ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿ ಪಾಲ್ಗೊಂಡಿದ್ದರು.

ಕಲ್ಲುಹೊಳೆ ಸಮೀಪದ ಹೊಲದಲ್ಲಿ ವಿದ್ಯುತ್‌ ಪ್ರವಹಿಸಿದ್ದ ತಂತಿ ತಗುಲಿ ಈಚೆಗೆ ಗಂಡಾನೆ ಸಾವಿಗೀಡಾದ ಸ್ಥಳಕ್ಕೆ ತೆರಳಿ ಎರಡು ನಿಮಿಷ ಮೌನ ಆಚರಿಸಲಾಯಿತು.
ತಂತಿಗೆ ವಿದ್ಯುತ್‌ ಪ್ರವಹಿಸಿದ್ದ ಆರೋಪಿ ಪತ್ತೆ ಹಚ್ಚಿದ ಕಡೂರಿನ
ಅರಣ್ಯ ಸಿಬ್ಬಂದಿ ತಂಡವನ್ನು ಅಭಿನಂದಿಸಲಾಯಿತು.

ಗೌರವ ವನ್ಯಜೀವಿ ಪರಿಪಾಲಕ ಜಿ. ವೀರೇಶ್‌, ತರೀಕೆರೆ ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ದಿನೇಶ್‌, ವಲಯ ಅರಣ್ಯಾಧಿಕಾರಿಗಳಾದ ಸ್ವಾತಿ, ಷರೀಫಾ, ತನುಜ್‌ ಕುಮಾರ್‌, ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್‌, ಮುಖಂಡ ಅನಿಲ್‌ಕುಮಾರ್‌ ಇದ್ದರು.

‘ಸಿಬ್ಬಂದಿ ವ್ಯವಸ್ಥೆ’

ಕಲ್ಲುಹೊಳೆ ಆನೆ ಹಿಮ್ಮೆಟ್ಟಿಸುವ ಬಿಡಾರದಲ್ಲಿ ಸಿಬ್ಬಂದಿ 24X7 ಇರುವಂತೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಡಿಎಫ್‌ಒ ಜಗನ್ನಾಥ್‌ ಹೇಳಿದರು.

ಕಲ್ಲುಹೊಳೆ ಬಳಿ ಜಾಗೃತಿ ಸಭೆಯಲ್ಲಿ ಮಾತನಾಡಿದರು. ಇಲ್ಲಿ ನಿರ್ಮಿಸಿರುವ ಆನೆ ಕಂದಕದ ಆಳವನ್ನು ಇನ್ನಷ್ಟು ಹೆಚ್ಚಿಸಲು, ಸೌರ ಬೇಲಿ ಅಳವಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ರೈಲ್ವೆ ಕಂಬಿ ತಡೆಗೋಡೆ ಅಳವಡಿಕೆಗೆ ಪ್ರಸ್ತಾವವನ್ನು ಸಲ್ಲಿಸಲಾಗುವುದು. ಬೆಳೆ ಹಾನಿ ಪರಿಹಾರದ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.