ADVERTISEMENT

ಕುಂದೂರಿಗೆ ಬಂದ ಆರು ಸಾಕಾನೆ: ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2022, 7:12 IST
Last Updated 28 ನವೆಂಬರ್ 2022, 7:12 IST

ಮೂಡಿಗೆರೆ: ತಾಲ್ಲೂಕಿನ ಕುಂದೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಮೂರು ಕಾಡಾನೆಗಳನ್ನು ಸೆರೆ ಹಿಡಿಯಲು ಭಾನುವಾರ ರಾತ್ರಿ ವೇಳೆಗೆ ಆರು ಸಾಕಾನೆಗಳನ್ನು ಕರೆ ತರಲಾಗಿದೆ.

ನಾಗರಹೊಳೆಯ ದುಬಾರೆ, ಮತ್ತಿಗೋಡು ಆನೆ ಶಿಬಿರಗಳಿಂದ ಆರು ಸಾಕಾನೆಗಳು ಲಾರಿಗಳಲ್ಲಿ ತರಲಾಗಿದ್ದು, ದಸರಾ ಆನೆ ಅಭಿಮನ್ಯು ನೇತೃತ್ವದಲ್ಲಿ ಆರು ಆನೆಗಳು ಕಾರ್ಯಚರಣೆ ನಡೆಸಲಿವೆ. ಇತ್ತೀಚೆಗೆ ಮೂಡಿಗೆರೆ ತಾಲ್ಲೂಕಿನ ಊರುಬಗೆ ಭಾಗದಲ್ಲಿ ಆನೆ ಕಾರ್ಯಾಚರಣೆಗೆ ಆಗಮಿಸಿದ್ದ ತಂಡದಲ್ಲಿ ಇದ್ದ ಆನೆಗಳಲ್ಲಿ ಗೋಪಾಲಸ್ವಾಮಿ ಎಂಬ ಆನೆಯು ವಾರದ ಹಿಂದೆ ಮತ್ತಿಗೋಡು ಅರಣ್ಯದಲ್ಲಿ ಮೃತಪಟ್ಟಿದ್ದು, ಗೋಪಾಲಸ್ವಾಮಿ ಸ್ಥಾನಕ್ಕೆ ಹರ್ಷ ಎಂಬ ಆನೆಯನ್ನು ಕರೆತರಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮೂಡಿಗೆರೆ ಸಮೀಪದ ದೊಡ್ಡಹಳ್ಳ ಗ್ರಾಮದ ಬಳಿ ಆಲ್ದೂರು ಅರಣ್ಯ ವಲಯಕ್ಕೆ ಸೇರಿದ ಜಾಗದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆಗೆ ಶಿಬಿರ ಸ್ಥಾಪಿಸಲಾಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಕಾರ್ಯಾಚರಣೆ ಆರಂಭವಾಗಲಿದೆ. ಈ ಭಾಗದಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಹಾಗೂ ಆನೆ ಸೆರೆ ಶಿಬಿರದ ಬಳಿ ಜನರು ಸೇರಬಾರದು. ಇತ್ತೀಚೆಗೆ ಭೈರಾಪುರದಲ್ಲಿ ಆನೆ ಸೆರೆಗೆ ಸ್ಥಾಪಿಸಿದ್ದ ಶಿಬಿರದ ಬಳಿ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಸೇರಿದ್ದರಿಂದ ತುಂಬಾ ತೊಡಕು ಉಂಟಾಗಿತ್ತು. ಜನರು ಹೆಚ್ಚು ಸೇರುವುದರಿಂದ ಕಾರ್ಯಾಚರಣೆಗೆ ಅಡಚಣೆ ಉಂಟಾಗುತ್ತದೆ, ಮೂರು ಕಾಡಾನೆಗಳನ್ನು ಹಿಡಿಯಬೇಕಾಗಿರುವುದರಿಂದ ಸಾರ್ವಜನಿಕರು ಇಲಾಖೆಯೊಂದಿಗೆ ಸಹಕರಿಸಬೇಕು’ ಎಂದು ಅರಣ್ಯ ಇಲಾಖೆಯು ಮನವಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.