ಚಿಕ್ಕಮಗಳೂರು: ಜಿಲ್ಲೆಯಲ್ಲಿಯಿಂದ ರಫ್ತು ಮಾಡಲು ಉತ್ಪನ್ನಗಳನ್ನು ಗುರತಿಸಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾಮಟ್ಟದ ರಫ್ತು ಉತ್ತೇಜನ ಸಮಿತಿ ಸಭೆಯಲ್ಲಿ ಮಾತನಾಡಿದರು.
2021–22ನೇ ಸಾಲಿನಲ್ಲಿ ಜಿಲ್ಲೆಯಿಂದ ₹486.76 ಕೋಟಿ ಮೌಲ್ಯದ ಕಾಫಿ , ₹41.71 ಕೋಟಿ ಇತರೆ ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ಪನ್ನಗಳನ್ನು ಗುರುತಿಸಿ ರಫ್ತು ಮಾಡಲು ಅನುಕೂಲವಾಗುವಂತೆ ಸಂಬಂಧಪಟ್ಟ ಅಧಿಕಾರಿಗಳು ಯೋಜನೆ ರೂಪಿಸಬೇಕು ಎಂದು ಹೇಳಿದರು.
ರಫ್ತುದಾರ ಜಯರಾಂ ಮಾತನಾಡಿ, ಫೈಟೋ ಸ್ಯಾನಿಟೇಶನ್ ಸರ್ಟಿಫಿಕೇಟ್ ಪಡೆಯಲು ಮತ್ತು ಇನ್ಲ್ಯಾಂಡ್ ಕಂಟೇನರ್ ಪಡೆಯಲು ಬೆಂಗಳೂರು, ಕೊಚ್ಚಿನ್ಗೆ ತೆರಳಬೇಕಾದ ಅನಿವಾರ್ಯ ಇದೆ. ಜಿಲ್ಲೆಯಲ್ಲಿಯೇ ಇನ್ಲ್ಯಾಂಡ್ ಕಂಟೇನರ್ ಡಿಪೋ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ವಿದ್ಯಾಹರ್ಟ್ ಸಂಸ್ಥೆ ವ್ಯವಸ್ಥಾಪಕ ಜಯದೇವ ಮಾತನಾಡಿ, ಜಿಲ್ಲೆಯಲ್ಲಿ ಸೂಕ್ತ ರಸ್ತೆ, ರೈಲು ಸಂಪರ್ಕ ವ್ಯವಸ್ಥೆ ಇಲ್ಲದಿರುವುದರಿಂದ ರಫ್ತಿಗೆ ಅಡಚಣೆಯಾಗಿದೆ. ಅದನ್ನು ಸರಿಪಡಿಸಬೇಕು ಎಂದು ಹೇಳಿದರು.
ರಫ್ತುದಾರ ಸಚ್ಚಿದಾನಂದ ಮಾತನಾಡಿ, ಜಿಲ್ಲೆಯಲ್ಲಿ ಹಲಸಿನ ಹಣ್ಣು, ಕಲ್ಲಂಗಡಿ, ಈರುಳ್ಳಿ ಹೆಚ್ಚು ಬೆಳೆಯಲಾಗುತ್ತದೆ. ಅವುಗಳ ರಫ್ತಿಗೆ ಅನುಕೂಲವಾಗುವಂತೆ ಕೋಲ್ಡ್ ಸ್ಟೋರೇಜ್ ಸಹಿತ ಮೂಲ ಸೌಕರ್ಯ ಒದಗಿಸಬೇಕು ಎಂದು ಹೇಳಿದರು.
ಸಣ್ಣ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಮುನೀರ್ ಅಹ್ಮದ್, ಕಾಫಿ ಕ್ಯೂರಿಂಗ್ ಆಸೋಸಿಯೇಶನ್ ಅಧ್ಯಕ್ಷ ದೇವರಾಜು, ಚೇಂಬರ್ ಆಫ್ ಕಾಮರ್ಸ್ ಸಂಸ್ಥೆ ಅಧ್ಯಕ್ಷ ಆರ್.ಎಂ.ಮಹೇಶ್, ಉಪಾಧ್ಯಕ್ಷ ಶಾಂತಾರಾಂ ಹೆಗಡೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸಿದ್ದರಾಜು, ತೋಟಗಾರಿಕ ಇಲಾಖೆ ಉಪನಿರ್ದೇಶಕ ವೇದಮೂರ್ತಿ, ಕೈಗಾರಿಕಾ ಕೇಂದ್ರ ಉಪನಿರ್ದೇಶಕ ಕೆ.ಎಸ್.ರವಿಪ್ರಸಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.