ಶೃಂಗೇರಿ: ‘70 ವರ್ಷಗಳಿಂದ ರೈತರಿಗೆ ವಿರುದ್ಧವಾದ ನೀತಿ ಇರಲಿಲ್ಲ. ಮಲೆನಾಡಿನ ಕೃಷಿಕರಿಗೆ ಕೃಷಿ ಎಂಬುದು ಸಂಸ್ಕೃತಿ. ಆದರೆ, ಈಗ ಕೇಂದ್ರ ಸರ್ಕಾರವು ರೈತ, ದಲಿತ ಹಾಗೂ ಕಾರ್ಮಿಕರ ವಿರೋಧಿ ನೀತಿಗಳನ್ನು ತಂದು ಬದುಕಿನ ಜೊತೆ ಚೆಲ್ಲಾಟವಾಡುತ್ತಿದೆ’ ಎಂದು ಶಾಸಕ ಟಿ.ಡಿ ರಾಜೇಗೌಡ ಆರೋಪಿಸಿದರು.
ಭಾರತ್ ಬಂದ್ ಬೆಂಬಲಿಸಿ ಪಟ್ಟಣದ ಮೆಸ್ಕಾಂ ಕಚೇರಿ ಮುಂಭಾಗದಲ್ಲಿ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
‘ಭೂ ಸುಧಾರಣಾ ಕಾಯ್ದೆಯಿಂದ ಮಲೆನಾಡಿನ ಸಣ್ಣ ಹಿಡುವಳಿದಾರರಿಗೆ ಅನ್ಯಾಯವಾಗುತ್ತಿದೆ. ದೇಶದಲ್ಲಿ ಎಲ್ಲರೂ ರೈತರ ಋಣದಲ್ಲಿದ್ದಾರೆ. ಅನ್ನ ಕೊಡುವ ರೈತ ತಲೆ ತಗ್ಗಿಸಬಾರದು. ಸವಲತ್ತು ಕೇಳುವುದು ರೈತನ ಹಕ್ಕು, ನೀಡುವುದು ಸರ್ಕಾರದ ಕರ್ತವ್ಯ. ರೈತರನ್ನು ಸರ್ಕಾರ ಕಡೆಗಣಿಸುತ್ತಿದೆ’ ಎಂದು ಆರೋಪಿಸಿದರು.
ಪರಿಸರವಾದಿ ಕಲ್ಕುಳಿ ವಿಠಲ್ ಹೆಗ್ಡೆ ಮಾತನಾಡಿ, ‘ಕೇಂದ್ರ ಮತ್ತು ರಾಜ್ಯ ಸರ್ಕಾರ ತಂದ ಭೂಸುಧಾರಣೆ ತಿದ್ದುಪಡಿ ಕಾಯ್ದೆಯಿಂದ ಉಳ್ಳವರು ಹಾಗೂ ಇಲ್ಲದವರ ನಡುವೆ ಕೋಲಾಹಲವನ್ನು ಸೃಷ್ಟಿಸಿ, ರೈತರ ಮರಣ ಶಾಸನಕ್ಕೆ ಸರ್ಕಾರ ಮುನ್ನುಡಿ ಬರೆಯುತ್ತಿದೆ’ ಎಂದು ಆರೋಪಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಾರನ ಕೊಡಿಗೆ ನಟರಾಜ್, ಬಿಎಸ್ಪಿಯ ಕೆ.ಎಂ ಗೋಪಾಲ್, ರೈತ ಸಂಘದ ಶ್ರೀನಿವಾಸ್ ಮೂರ್ತಿ, ಕಿಸಾನ್ ಘಟಕದ ಅಧ್ಯಕ್ಷ ಗೋಪಾಲ್ ನಾಯಕ್, ಜೆಡಿಎಸ್ ಕ್ಷೇತ್ರಾಧ್ಯಕ್ಷ ಭರತ್ ಗಿಣಿಕಲ್, ಯುವ ಕಾಂಗ್ರೆಸ್ ಅಧ್ಯಕ್ಷ ರಾಜ್ಕುಮಾರ್ ಹೆಗ್ಡೆ, ಜನಶಕ್ತಿಯ ಗುರುಮೂರ್ತಿ, ವೆಂಕಟೇಶ್ ಹಾಗಲಗಂಚಿ, ಮಹಿಳಾ ಮನೆಯ ಭಾಗ್ಯ ಹಾಗಲಗಂಚಿ, ಮಲೆನಾಡು ಜನಪರ ಒಕ್ಕೂಟದ ಸಂತೋಷ್ ಕಾಳ್ಯ, ಆಮ್ ಆದ್ಮಿ ಪಕ್ಷದ ರಾಜನ್, ಪಟ್ಟಣ ಪಂಚಾಯಿತಿ ಸದಸ್ಯ ರಫೀಕ್ ಮತ್ತು ವಿವಿಧ ಸಂಘಟನೆಗಳ ವಿಜಯ್ ಕುಮಾರ್, ಜಗದೀಶ್ ಕಣದಮನೆ, ಕೆ.ಟಿ ಮಂಜುನಾಥ್, ತ್ರಿಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.