ಕಳಸ: ಸ್ವಾತಂತ್ರೋತ್ಸವದಲ್ಲಿ ಬಳಕೆಯಾದ ಪಾಲಿಯೆಸ್ಟರ್ ಧ್ವಜಗಳ ವಿಲೇವಾರಿ ಚಿಂತೆಯ ನಡುವೆಯೇ ಸರ್ಕಾರೇತರ ಸಂಸ್ಥೆಯೊಂದು ವಿನೂತನ ಪ್ರಯೋಗ ನಡೆಸಿದೆ.
ಬೆಂಗಳೂರಿನ ಪ್ರತಿಬಿಂಬ ಟ್ರಸ್ಟ್ ತಾನು ದತ್ತು ತೆಗೆದುಕೊಂಡಿರುವ ಸಂಸೆ ಸರ್ಕಾರಿ ಪ್ರೌಢಶಾಲೆಗೆ ವಿಶಿಷ್ಟ ಧ್ವಜಗಳನ್ನು ಕೊಡುಗೆ ನೀಡಿತು. ನೈಸರ್ಗಿಕವಾಗಿ ವಿಘಟನೆ ಹೊಂದಿ ಮಣ್ಣಿನಲ್ಲಿ ಸೇರಬಹುದಾದ ಜಾತಿಯ ದಪ್ಪನೆಯ ಕಾಗದ ಬಳಸಿ ಈ ಧ್ವಜ ತಯಾರಿಸಲಾಗಿತ್ತು.
ಧ್ವಜದ ಎರಡು ಪದರಗಳ ನಡುವೆ ಬೀಜವನ್ನು ಹುದುಗಿಸಲಾಗಿದೆ. ಬಳಕೆಯ ಬಳಿಕ ಧ್ವಜವು ಮಣ್ಣಿನಲ್ಲಿ ಸೇರುವಾಗ ಈ ಬೀಜಗಳು ಮೊಳಕೆ ಒಡೆದು ಗಿಡ, ಮರಗಳಾಗಿ ಬೆಳೆಯಬಲ್ಲವು ಎಂದು ಶಾಲಾ ಮುಖ್ಯ ಶಿಕ್ಷಕ ಲೋಕೇಶ್ ಸತೀಶ್ ತಿಳಿಸಿದರು.
‘ಪ್ಲಾಸ್ಟಿಕ್ ಮತ್ತು ಪಾಲಿಯೆಸ್ಟರ್ ಧ್ವಜಗಳ ವಿಲೇವಾರಿ ಹೇಗೆ ಎಂದು ಯೋಚಿಸುತ್ತಿದ್ದಾಗ ಇಂತಹ ಒಂದು ಆಲೋಚನೆ ನಮ್ಮ ಸಂಸ್ಥೆಗೆ ಬಂತು. ಇಂತಹ ಧ್ವಜಗಳನ್ನು ನಾವು ನಮ್ಮ ಸಂಸ್ಥೆ ದತ್ತು ತೆಗೆದುಕೊಂಡಿರುವ ಎಲ್ಲ ಶಾಲೆಗಳಿಗೂ ವಿತರಣೆ ಮಾಡಿದ್ದೇವೆ’ ಎಂದು ಪ್ರತಿಬಿಂಬ ಟ್ರಸ್ಟ್ ಸ್ಥಾಪಕರಲ್ಲಿ ಒಬ್ಬರಾದ ಮುರುಳಿ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.