ತರೀಕೆರೆ: ವಧುವಿಗೆ ತಾಳಿ ಕಟ್ಟಬೇಕಿದ್ದ ವರ ಮದುವೆ ಮಂಟಪದಿಂದಲೇ ಪರಾರಿಯಾದ ಕಾರಣ ಮದುವೆ ಮನೆಗೆ ಬಂದಿದ್ದ ವರನ ಸ್ನೇಹಿತನೇ ವಧುವಿಗೆ ತಾಳಿ ಕಟ್ಟಿದ ಘಟನೆ ನಡೆದಿದೆ.
ತಾಲ್ಲೂಕಿನ ದೋರನಾಳು ಗ್ರಾಮದ ಸಹೋದರರಾದ ಅಶೋಕ್ ಕುಮಾರ್ ಅವರಿಗೆ ಭದ್ರಾವತಿಯ ಸ್ವಾತಿ ಹಾಗೂ ನವೀನ್ ಕುಮಾರ್ ಅವರಿಗೆ ಹೊಳಲ್ಕೆರೆಯ ಸಿಂಧೂ ಎಂಬುವವರೊಂದಿಗೆ ಮದುವೆ ನಿಶ್ಚಿತಾರ್ಥವಾಗಿತ್ತು. ಪಟ್ಟಣದ ಶೃಂಗೇರಿ ಶಾರದಾ ಸಭಾಭವನದಲ್ಲಿ ಶನಿವಾರ ಸಂಜೆ ಆರತಕ್ಷತೆಯೂ ನಡೆದಿತ್ತು.
ಭಾನುವಾರ ವಿವಾಹ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿರುವಾಗಲೇ ವರ ನವೀನ್ ಕುಮಾರ್ ಇದ್ದಕ್ಕಿದ್ದಂತೆ ಕಾಲ್ಕಿತ್ತಿದ್ದಾನೆ. ಇದರಿಂದ ವಧು ಸಿಂಧೂ ಹಾಗೂ ಪೋಷಕರು ಸೇರಿದಂತೆ ಮದುವೆಗೆ ಬಂದಿದ್ದವರು ಆತಂಕಕ್ಕೊಳಗಾದರು.
ಮದುವೆಗೆ ಬಂದಿದ್ದ ಅಶೋಕ್ ಕುಮಾರ್ ಸ್ನೇಹಿತ, ಬಿಎಂಟಿಸಿ ನೌಕರ ಚಂದ್ರಪ್ಪ ಅವರು ‘ವಧು ಒಪ್ಪಿದರೆ ತಾನೇ ಮದುವೆಯಾಗುತ್ತೇನೆ’ ಎಂದು ಹೇಳಿದಾಗ ಸಿಂಧೂ ಒಪ್ಪಿಗೆ ಸೂಚಿಸಿದ್ದಾರೆ. ವಧು–ವರರನ್ನು ಹರಸಲು ಬಂದ ಚಂದ್ರಪ್ಪ ಅವರೇ ವಧುವಿಗೆ ತಾಳಿ ಕಟ್ಟಿ, ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.