ADVERTISEMENT

ಗಣಪತಿ ಬರ ಮಾಡಿಕೊಳ್ಳಲು ಜನರು ಸಜ್ಜು

ಚಿಕ್ಕಮಗಳೂರು; ನಗರದ ಬೀದಿಗಳಿಗೆ ಸಿಂಗಾರ; ದೇವಸ್ಥಾನಗಳಿಗೆ ದೀಪಾಲಂಕಾರ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2024, 15:43 IST
Last Updated 6 ಸೆಪ್ಟೆಂಬರ್ 2024, 15:43 IST
ಗಣೇಶೋತ್ಸವಕ್ಕೆ ಚಿಕ್ಕಮಗಳೂರು ನಗರದ ಹನುಂತಪ್ಪ ವೃತ್ತದಲ್ಲಿ ಇಮ್ಮಡಿ ಪುಲಕೇಶಿ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿರುವುದು
ಗಣೇಶೋತ್ಸವಕ್ಕೆ ಚಿಕ್ಕಮಗಳೂರು ನಗರದ ಹನುಂತಪ್ಪ ವೃತ್ತದಲ್ಲಿ ಇಮ್ಮಡಿ ಪುಲಕೇಶಿ ಹೆಸರಿನಲ್ಲಿ ಮಹಾದ್ವಾರ ನಿರ್ಮಿಸಿರುವುದು   

ಚಿಕ್ಕಮಗಳೂರು: ಗೌರಿ ಹಬ್ಬದ ಸಂಭ್ರಮದಲ್ಲಿ ಶುಕ್ರವಾರ ಕಳೆದ ಜನ, ಶನಿವಾರ ಗಣಪತಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ.

ಬೆಳಿಗ್ಗೆಯಿಂದಲೇ ಗೌರಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು. ಶನಿವಾರ ಗಣೇಶ ಹಬ್ಬವಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಗಲ್ಲಿ ಗಲ್ಲಿಗಳಲ್ಲಿ ಯುವಕರ ಪಡೆ ಸಜ್ಜಾಗಿದೆ. ಕೊನೆಯ ಹಂತದ ಸಿದ್ಧತೆಗಳು ಭರದಿಂದ ಸಾಗಿದವು.

ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪತಿ, ಹಿಂದೂಮಹಾ ಗಣಪತಿ, ವಿಜಯಪುರ ಗಣಪತಿ, ಕೋಟೆ, ರಾಮನಹಳ್ಳಿ, ದಂಟರಮಕ್ಕಿ, ಜಯನಗರ, ಹೊಸಮನೆ ಬಡಾವಣೆ, ಉಂಡೇದಾಸರಹಳ್ಳಿ, ಕೆಂಪನಹಳ್ಳಿ ಸೇರಿದಂತೆ ಹಲವೆಡೆ ಪೆಂಡಾಲ್‌ಗಳು ನಿರ್ಮಾಣವಾಗಿವೆ. ನಗರದ ಬಸವನಹಳ್ಳಿ ರಸ್ತೆಯಲ್ಲಿ ದೀಪಾಲಂಕರಾಗಳು ಜಗಮಗಿಸುತ್ತಿದ್ದು, ಎಲ್ಲಾ ಬೀದಿಗಳು ಸಿಂಗಾರಗೊಂಡಿವೆ.

ADVERTISEMENT

ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ನಗರ ಓಂಕಾರೇಶ್ವರ ದೇವಸ್ಥಾನದ ಆವರಣ, ಹನುಮಂತಪ್ಪ ವೃತ್ತ, ಬಸವನಹಳ್ಳಿ ರಸ್ತೆ ದೀಪಾಂಲಕಾರದಿಂದ ಕಂಗೊಳಿಸುತ್ತಿದೆ.  ಬೋಳರಾಮೇಶ್ವರ ದೇವಾಲಯವೂ ಸಹ ವಿವಿಧ ಬಗೆಯ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸಿತು. 

ಶುಕ್ರವಾರವೂ ಮಾರುಕಟ್ಟೆಗಳಲ್ಲಿ ಖರೀದಿ ಜೋರಾಗಿತ್ತು. ಹೂವಿನ ದರ ಗುರುವಾರಕ್ಕಿಂತ ಶುಕ್ರವಾರ ಏರಿಕೆಯಾಗಿತ್ತು. ಸೇವಂತಿಗೆ ಹೂವು ₹100ರಿಂದ ₹150 ತನಕ ಮಾರಾಟವಾಯಿತು. ಆದರೂ, ಹಬ್ಬದ ಸಂಭ್ರಮದಲ್ಲಿರುವ ಜನ ಖರೀದಿಸಿದರು.

ಗಣೇಶೋತ್ಸವಕ್ಕೆ ಚಿಕ್ಕಮಗಳೂರು ನಗರದ ಬಸವನಹಳ್ಳಿ ರಸ್ತೆಯಲ್ಲಿ ವಿದ್ಯುತ್ ದೀಪಗಳು ಜಗಮುಗಿಸುತ್ತಿರುವುದು
ಚಿಕ್ಕಮಗಳೂರು ಕುಂಬಾರ ಬೀದಿಯಲ್ಲಿ ಕಲಾವಿದನ ಕೈಯಲ್ಲಿ ಅರಳಿದ ವಾಮನ ರೂಪದ ಗಣಪತಿ ಮೂರ್ತಿಯನ್ನು ಜಾಗರ ಸಮೀಪದ ಭಕ್ತರು ಖರೀದಿಸಿದರು
 ಚಿಕ್ಕಮಗಳೂರಿನ ಆಜಾದ್ ಪಾರ್ಕ್ ಮುಖ್ಯ ಗಣಪತಿಗೆ ಶುಕ್ರವಾರ ದೃಷ್ಟಿ ನೀಡಿದ ಕಲಾವಿದ

ರಾಮೇಶ್ವರ ನಗರದಲ್ಲಿ ಐದು ದಿನಗಳ ಗಣೇಶೋತ್ಸವ

ರಾಮೇಶ್ವರ ನಗರದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿ ಆಶಯದಲ್ಲಿ  ಸೆ.7 ರಿಂದ 11 ರವರೆಗೆ ಐದು ದಿನಗಳ ಕಾಲ ಗಣೇಶೋತ್ಸವ ನಡೆಯಲಿದೆ. ಶನಿವಾರ ಬೆಳಿಗ್ಗೆ 11.30ಕ್ಕೆ ಗಣಪತಿ ಪ್ರತಿಷ್ಠಾಪನೆಯಾಗಲಿದ್ದು ಮಧ್ಯಾಹ್ನ 120.30ಕ್ಕೆ ವಿಶೇಷ ಪೂಜೆ ಮಹಾಮಂಗಳಾರತಿ ನಡೆಯಲಿದೆ. ರಾತ್ರಿ 7 ಗಂಟೆಗೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ನಡೆಯಲಿದೆ. 8 ರಂದು ಸಂಜೆ 7ಕ್ಕೆ ಸ್ಥಳೀಯರಿಂದ ಕಾರ್ಯಕ್ರಮ ಭಕ್ತಿಗೀತೆ ಭಾವಗೀತೆ ಮತ್ತು ಜನಪದ ಗೀತೆ ಸ್ಪರ್ಧೆ 9 ರಂದು ತರೀಕೆರೆ ಗೀತಾಂಜಲಿ ತಂಡದಿಂದ ಆರ್ಕೆಸ್ಟ್ರಾ ಜರುಗಲಿದೆ. 10 ರಂದು ಸಂಜೆ 4.30ಕ್ಕೆ ಬಹುಮಾನ ವಿತರಣೆ ಪ್ರತಿಭಾ ಪುರಸ್ಕಾರ ರಾತ್ರಿ ಸಹ ಭೋಜನ ಏರ್ಪಡಿಸಲಾಗಿದೆ.11 ರಂದು ಸಂಜೆ 4.30ಕ್ಕೆ ವಿದ್ಯಾ ಗಣಪತಿಯನ್ನು ಬೆಳ್ಳಿರಥರಲ್ಲಿ ಕುಳ್ಳಿರಿಸಿ ರಾಮೇಶ್ವರನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ರಾತ್ರಿ ಬಸವನಹಳ್ಳಿ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ಸಮಿತಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.