ಚಿಕ್ಕಮಗಳೂರು: ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯ ಮೇಲುಪೇಟೆಯ ಮಸೀದಿ ಸನಿಹದಲ್ಲಿ ಕಾರಿನಲ್ಲಿ ಗಾಂಜಾ ಸಾಗಿಸುತ್ತಿದ್ದ ನಾಲ್ವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲುಕಿನ ಅರೆಹಳ್ಳಿ ವಾಸಿ ಟಿಪ್ಪರ್ ಚಾಲಕ ಮೊಹಿದ್ ಖಾನ್ ( 24), ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ವಾಸಿ ಚಾಲಕ ಅಕ್ಬರ್ ಪಾಷಾ ಅಲಿಯಾಸ್ ಅಚ್ಚು (32), ಆನೆದಿಬ್ಬ ಗ್ರಾಮದ ಮೆಕ್ಯಾನಿಕ್ ಶಾಹೀದ್ಖಾನ್ (19) ಹಾಗೂ ಮೇಲುಪೇಟೆಯ ಕೂಲಿಕಾರ ಎಸ್.ಪ್ರಭ(33) ಅವರನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 50 ಕೆ.ಜಿ ಗಾಂಜಾ ಸೊಪ್ಪು, ಕಾರು ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
10 ಮಂದಿಯ ಜಾಲ ಆಂಧ್ರಪ್ರದೇಶದ ವಿಶಾಖಪಟ್ಟಣದ ಪಾಲೇರು ಬಳಿ ಶೇಖರ್ ಎಂಬವರಿಂದ 80 ಕೆ.ಜಿ. ಗಾಂಜಾ ಸೊಪ್ಪು ಖರೀದಿಸಿ ತಂದಿದ್ದಾರೆ. ಸಕಲೇಶಪುರ ಹಾಗೂ ಹಾಸನ ಭಾಗದಲ್ಲಿ 30 ಕೆ.ಜಿ ಮಾರಾಟ ಮಾಡಿದ್ದಾರೆ. 50 ಕೆ.ಜಿ ಗಾಂಜಾವನ್ನು ಕಾರಿನಲ್ಲಿ ಮಂಗಳೂರಿಗೆ ಒಯ್ಯುವಾಗ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದೆವು ಎಂದು ಪೊಲೀಸರು ತಿಳಿಸಿದ್ದಾರೆ.
ಜಾಲದ ಮಹಮ್ಮದ್, ಹಸೀನಾ ತಾಜ್, ಸಾಧಿಕ್ ಅಲಿಯಾಸ್ ಕಳವಾರ್, ಮುಜಮ್ಮಿಲ್ ಅಲಿಯಾಸ್ ಗೋರ, ಇರ್ಪಾನ್ ಮತ್ತು ಶೇಖರ್ ಎಂಬವರ ಪತ್ತೆಗೆ ಬಲೆ ಬೀಸಲಾಗಿದೆ. ಈ ಜಾಲವು ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರಿನಲ್ಲಿ ಗಾಂಜಾ ಮಾರಾಟ ಮಾಡಿರುವುದು ವಿಚಾರಣೆ ವೇಳೆ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿಇಎನ್ ಠಾಣೆಯ ಇನ್ಸ್ಪೆಕ್ಟರ್ ಎ.ಕೆ.ರಕ್ಷಿತ್, ಪಿಎಸ್ಐ ಎನ್.ಕೆ.ರಮ್ಯಾ ಅವರು ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.