ಮೂಡಿಗೆರೆ: ಕಾಡಾನೆ ನಿಯಂತ್ರಿಸುವಲ್ಲಿ ಸರ್ಕಾರವು ಸಂಪೂರ್ಣ ವಿಫಲವಾಗಿದೆ ಎಂದು ವಿಧಾನಪರಿಷತ್ ಉಪಸಭಾಪತಿ ಎಂ.ಕೆ. ಪ್ರಾಣೇಶ್ ಆರೋಪಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ನಂದಿಪುರ ಮಾಕೋನಹಳ್ಳಿ, ತುದಿಯಾಲ, ಕಾರ್ಬೈಲ್ ಸೇರಿದಂತೆ ಮೂಡಿಗೆರೆ ನಗರದ ಸಮೀಪವೇ ಭುವನೇಶ್ವರಿ ಹೆಸರಿನ 30ಕ್ಕೂ ಹೆಚ್ಚು ಕಾಡಾನೆಗಳು ಬಿಡು ಬಿಟ್ಟಿದ್ದು, ಈಗಾಗಲೇ ಪಕ್ಷದ ಮುಖಂಡರು ಅಧಿವೇಶನದಲ್ಲಿ ಚರ್ಚೆ ಮಾಡಿದ್ದೇವೆ’ ಎಂದರು.
ಆನೆಗಳ ನಿಯಂತ್ರಣಕ್ಕೆ ಆನೆ ಕಾರಿಡಾರ್ ಸ್ಥಾಪನೆ ಹಾಗೂ ಅವುಗಳನ್ನು ಸ್ಥಳಾಂತರ ಮಾಡುವ ಕೆಲಸವಾಗಬೇಕು. ಕಾಡಾನೆ ಹಾವಳಿ ಪ್ರದೇಶದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು ಎಂದು ಅನೇಕ ಬಾರಿ ಆಗ್ರಹಿಸಲಾಗಿದೆ. ಅರಣ್ಯ ಸಚಿವರು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಹಾರಿಕೆ ಹೇಳುತ್ತಾರೆಯೇ ಹೊರತು ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಕಾಡಾನೆಗಳು ಮತ್ತಾವರ, ಇಂದಾವರ, ಹಲಸುಮನೆ, ವಳಗೇರಹಳ್ಳಿ, ಹಳುವಳ್ಳಿ, ಬಾಣವರ, ಗಂಜಲಗೂಡು, ಮುಳ್ಳೂರು ಈ ಭಾಗಗಳಲ್ಲೂ ದಾಳಿ ನಡೆಸುತ್ತಿವೆ. ಇಂತಹ ಪ್ರದೇಶದಲ್ಲಿ ನಿಷೇಧಾಜ್ಞೆ ಹಾಕಿ ಜನರನ್ನೇ ಗದರಿಸಲಾಗುತ್ತದೆ ಹೊರತು, ಕಾಡಾನೆ ಓಡಿಸುವ ಕೆಲಸ ಮಾಡುವುದಿಲ್ಲ. ಹಲವೆಡೆ ಕಾಫಿ ಕಾಳುಮೆಣಸು ಕೊಯ್ಲಿಗೂ ಅಡ್ಡಿಯಾಗಿದೆ. ಕಾಡಾನೆಗಳ ಹಾವಳಿಯಿಂದ ನೂರಾರು ಎಕರೆ ಕಾಫಿ ತೋಟ ನಾಶವಾಗಿವೆ. ಇದಕ್ಕೆ ಸರಿಯಾದ ಪರಿಹಾರ ನೀಡುತ್ತಿಲ್ಲ ಎಂದರು.
ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಆನೆಗಳನ್ನು ಓಡಿಸಲು ಟಾಸ್ಕ್ ಫೋರ್ಸ್ ನಿರ್ಮಾಣ ಮಾಡಿ, ಆನೆ ಪರಿಣಿತ ಸ್ಥಳೀಯರಿಗೆ ಉದ್ಯೋಗ ನೀಡಿ ನಿಯಂತ್ರಣಕ್ಕೆ ಒತ್ತು ನೀಡಲಾಗಿತ್ತು. ಅನೇಕ ಕಡೆ ವಿದ್ಯುತ್ ಬೇಲಿ ನಿರ್ಮಾಣ ಮಾಡಲಾಗಿತ್ತು. ಇಂದು ಅಂತ ಹಳ್ಳಿಗಳಲ್ಲಿ ಒಂದಷ್ಟು ಕಾಡಾನೆ ಹಾವಳಿ ಕಡಿಮೆಯಾಗಿದೆ. ಆದರೆ, ಈಗಿನ ಸರ್ಕಾರ ಟಾಸ್ಕ್ ಪೋರ್ಸ್ ನೌಕರರಿಗೆ ಅನುದಾನವನ್ನೇ ಬಿಡುಗಡೆ ಮಾಡಿಲ್ಲ. ಮಾಡಿದ ಕೆಲಸಕ್ಕೆ ಸಂಬಳ ಕೂಡ ನೀಡಿಲ್ಲ. ಹೊಸ ಯಾವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿಲ್ಲ. ಆನೆಗಳ ನಿಯಂತ್ರಣಕ್ಕೆ ಸರ್ಕಾರ ಮುಂದಾಗದಿದ್ದಲ್ಲಿ ಸಂತ್ರಸ್ತ ಜನರೊಂದಿಗೆ ಸೇರಿ ಉಗ್ರ ಹೋರಾಟ ರೂಪಿಸಬೇಕಾಗುತ್ತದೆ ಎಂದು ಎಂ.ಕೆ. ಪ್ರಾಣೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.