ADVERTISEMENT

ಭ್ರಷ್ಟಾಚಾರಕ್ಕೆ ಹೆಚ್ಚಳಕ್ಕೆ ದುರಾಸೆ ಕಾರಣ: ಸಂತೋಷ್‌ ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2023, 11:38 IST
Last Updated 28 ಡಿಸೆಂಬರ್ 2023, 11:38 IST
ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ಯುವ ಶಕ್ತಿ ಕಾರ್ಯಕ್ರಮವನ್ನು ಸಿದ್ದಪ್ಪಾಜಿ ಉದ್ಘಾಟಿಸಿದರು. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕ ಜಿ.ಎಚ್.ಶ್ರೀನಿವಾಸ್ ಇದ್ದರು
ಅಜ್ಜಂಪುರ ತಾಲ್ಲೂಕಿನ ಸೊಕ್ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ನಡೆದ ಯುವ ಶಕ್ತಿ ಕಾರ್ಯಕ್ರಮವನ್ನು ಸಿದ್ದಪ್ಪಾಜಿ ಉದ್ಘಾಟಿಸಿದರು. ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ, ಶಾಸಕ ಜಿ.ಎಚ್.ಶ್ರೀನಿವಾಸ್ ಇದ್ದರು   

ಅಜ್ಜಂಪುರ: ‘ಭ್ರಷ್ಟಾಚಾರ ಎಂಬ ರೋಗಕ್ಕೆ ತೃಷ್ತಿ ಮತ್ತು ಮಾನವೀಯತೆಯೇ ಮದ್ದು’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮುರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ತಾಲ್ಲೂಕಿನ ಸೊಕ್ಕೆ ಸರ್ಕಾರಿ ಪ್ರೌಢ ಶಾಲೆಯಲ್ಲಿ ಬುಧವಾರ ಶಾಲಾ ಮಕ್ಕಳೊಂದಿಗೆ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ಇಂದಿನ ಸಮಾಜ ಶ್ರೀಮಂತಿಕೆಯನ್ನು ಪೂಜಿಸುತ್ತಿದೆ. ಅತ್ಯಾಚಾರ, ಭ್ರಷ್ಟಾಚಾರ, ಕೊಲೆ ಆರೋಪಿಗಳಿಗೆ ಸಲಾಂ ಹೊಡೆಯಲಾಗುತ್ತಿದೆ. ಜೈಲು ಸೇರಿ ಬಂದವರನ್ನೂ ಸ್ವಾಗತಿಸಲಾಗುತ್ತಿದೆ. ಇದು ದುರದೃಷ್ಟಕರ ಬೆಳವಣಿಗೆ’ ಎಂದರು.

ADVERTISEMENT

ಸಮಾಜದಲ್ಲಿ ದುರಾಸೆ ರೋಗ ಹೆಚ್ಚಾಗಿದೆ. ಕೆಲ ಸರ್ಕಾರಿ ನೌಕರರು, ಅಧಿಕಾರಿಗಳು, ಜನಪ್ರತಿನಿಧಿಗಳು ಪೈಪೋಟಿಗೆ ಬಿದ್ದವರಂತೆ ಅಕ್ರಮವಾಗಿ ಹಣ ಸಂಪಾದಿಸುತ್ತಿದ್ದಾರೆ. ತಪ್ಪು ಮಾಡಿದವರಿಗೆ ಕಾನೂನಿನ ಭಯವಿಲ್ಲ. ಇದು ಭ್ರಷ್ಟಾಚಾರ ಹೆಚ್ಚಲು ಕಾರಣವಾಗಿದೆ ಎಂದರು.

‘ವಯಸ್ಸು 84, ಆದರೂ 1,807 ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಸಮಾಜದಲ್ಲಿ ಕಾಣುವ ಅನ್ಯಾಯವನ್ನು ಬೇರು ಮಟ್ಟದಲ್ಲಿಯೇ ಸರಿಪಡಿಸಲು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದೇನೆ’ ಎಂದರು.

ವ್ಯಕ್ತಿತ್ವ ವಿಕಸನ ತರಬೇತುದಾರ ಸಿ.ಬಿ. ಸುಂದರೇಶ್,   ಶಿವಮೊಗ್ಗದ ದೊಡ್ಡಮ್ಮ ದೇವಿ ಉಪಾಸಕ ಸಿದ್ದಪ್ಪಾಜಿ ಮಾತನಾಡಿದರು.

ಶಿಕ್ಷಕಿ ಅನುಸೂಯಾ, ದೀಪಾ, ಸವಿತಾ, ಯೋಗೀಶ್, ಚಂದ್ರಶೇಖರ್, ಬಸವಯ್ಯ, ಯಶೋಧಮ್ಮ, ಮಲ್ಲಿಕಾರ್ಜುನ ಸ್ವಾಮಿ, ದೇವರಾಜ್ ಅವರನ್ನು  ಸನ್ಮಾನಿಸಲಾಯಿತು.

ಶಾಸಕ ಜಿ.ಎಚ್.ಶ್ರೀನಿವಾಸ್, ಶ್ರೀರಾಮಕೃಷ್ಣ ಸಮೂಹ ಸಂಸ್ಥೆ ಸಂಸ್ಥಾಪಕ ಡಿ.ಎಂ.ದೇವರಾಜ್, ಮುಖ್ಯಶಿಕ್ಷಕ ತಿಪ್ಪೇಶಪ್ಪ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಪ್ರಭುಕುಮಾರ್, ಉಪಾಧ್ಯಕ್ಷ ಚನ್ನಕೇಶವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.