ADVERTISEMENT

ಹರಿಹರಪುರ: ನವಗ್ರಹ ಹೋಮ ಸಂಪನ್ನ

ಏ.15ರಂದು ಮಹಾಕುಂಭಾಭಿಷೇಕ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2022, 3:56 IST
Last Updated 13 ಏಪ್ರಿಲ್ 2022, 3:56 IST
ಹರಿಹರಪುರ ಮಠದಲ್ಲಿ ಮಹಾಕುಂಭಾಭಿಷೇಕ ಪ್ರಯುಕ್ತ ಮಂಗಳವಾರ ಪೂಜಾ ಕಾರ್ಯ ನಡೆಯಿತು.
ಹರಿಹರಪುರ ಮಠದಲ್ಲಿ ಮಹಾಕುಂಭಾಭಿಷೇಕ ಪ್ರಯುಕ್ತ ಮಂಗಳವಾರ ಪೂಜಾ ಕಾರ್ಯ ನಡೆಯಿತು.   

ಕೊಪ್ಪ: ತಾಲ್ಲೂಕಿನ ಹರಿಹರಪುರ ಮಠದ ಲಕ್ಷ್ಮೀನರಸಿಂಹ ಸ್ವಾಮಿ, ಶಾರದಾ ಪರಮೇಶ್ವರಿ ದೇವಸ್ಥಾನದಲ್ಲಿ ಏ.15ರಂದು ನಡೆಯಲಿರುವ ಮಹಾಕುಂಭಾಭಿಷೇಕ ನಿಮಿತ್ತ ಏ.24ರ ವರೆಗೆ ಧಾರ್ಮಿಕ ವಿಧಿ ವಿಧಾನಗಳು ಜರುಗಲಿದ್ದು, ಮಂಗಳವಾರ ನವಗ್ರಹ ಹೋಮ ಇತ್ಯಾದಿ ಪೂಜಾ ಕೈಂಕರ್ಯ ನೆರವೇರಿಸಲಾಯಿತು.

ಬೆಳಿಗ್ಗೆ ನವಗ್ರಹ ಹೋಮ, ಪ್ರಾಕಾರ ಪರಿಗ್ರಹ, ಪ್ರಾಕಾರ ಶುದ್ಧಿ, ಕಲಶ ಪ್ರತಿಷ್ಠೆ, ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ಪ್ರಸಾದ ವಿನಿಯೋಗ ನಡೆಯಿತು. ಬಳಿಕ ಮಹಾ ಕುಂಭಾಭಿಷೇಕ ಮಹೋತ್ಸವದ ಪ್ರತಿಷ್ಠಾಂಗ ಪೂರ್ವ ವಿಧಿ, ಲಲಿತಾ ಹೋಮ, ಗಾಯತ್ರಿ ಮಹಾಯಾಗ ನಡೆಯಿತು.

ಮೂಡಿಗೆರೆ ಮಾಜಿ ಶಾಸಕ ಬಿ.ಬಿ.ನಿಂಗಯ್ಯ ಮಠಕ್ಕೆ ಭೇಟಿ ನೀಡಿ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಅವರಿಂದ ಆಶೀರ್ವಾದ ಪಡೆದರು. ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಡಿ.ಎನ್.ಜೀವರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್.ಎನ್.ರಾಮಸ್ವಾಮಿ ಭೇಟಿ ನೀಡಿದರು.

ADVERTISEMENT

ಏ.13ರ ಬೆಳಿಗ್ಗೆ 8 ಗಂಟೆಗೆ ಜಲಾಧಿವಾಸ, ನೇತ್ರೋನ್ಮೀಲನ, ಅಧಿವಾಸಾದಿಗಳು, ಸಂಜೆ 4ಗಂಟೆಗೆ ಲಕ್ಷ್ಮೀನರಸಿಂಹ ಸ್ವಾಮಿಗೆ ಅಧಿವಾಸ ಹೋಮ, ತತ್ವನ್ಯಾಸ, ಕಲಾನ್ಯಾಸಗಳು, ಅಷ್ಟಾವಧಾನ ಸೇವೆ ಹಾಗೂ ಪ್ರತಿಷ್ಠಾಂಗ ಪೂರ್ವ ವಿಧಿಗಳು, ಸುದರ್ಶನ ನಾರಸಿಂಹ ಮಹಾಯಾಗ, ಸ್ವಯಂಪ್ರಕಾಶ ಅಭಿನವ ರಾಮಾನಂದ ಸರಸ್ವತಿ ಸ್ವಾಮೀಜಿಯವರ ಜಯಂತಿ ಶತಮಾನೋತ್ಸವದ ಕಾರ್ಯಕ್ರಮಗಳು ಜರುಗಲಿವೆ.

ಏ.13ರಂದು ಸಂಜೆ 5.30ಕ್ಕೆ ವಿದುಷಿ ಸಂಯುಕ್ತಾ ಶಂಕರ್ ಮತ್ತು ವೃಂದ ಸಚ್ಚಿದಾನಂದ ಆರ್ಟ್ ಫೌಂಡೇಷನ್ ಬೆಂಗಳೂರು ವತಿಯಿಂದ ‘ಹರಿಹರಪುರ ಸ್ಥಳ ಮಹಿಮೆ’ ಕುರಿತ ನೃತ್ಯ ರೂಪಕ ಆಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.