ಕೊಪ್ಪ: ‘ಯಾವುದೇ ಬೆಳೆಗೆ ಫಲಕಟ್ಟಲು ಜೇನಿನ ಮೂಲಕ ಪರಾಗ ಸ್ಪರ್ಶವಾಗಬೇಕು. ಜೇನು ಸಂತತಿ ನಶಿಸಿದರೆ ಭೂಮಿಯಲ್ಲಿ ಮಾನವ ಜನಾಂಗ, ಪ್ರಾಣಿ, ಪಶುಪಕ್ಷಿ, ಇತರೆ ಜೀವಿಗಳಿಗೆ ಆಹಾರವಿಲ್ಲದೆ ಜೀವಸಂಕುಲವೇ ನಾಶವಾಗುವ ಸಾಧ್ಯತೆಗಳಿವೆ’ ಎಂದು ತಾಲ್ಲೂಕಿನ ಕೆಸವೆ ಗ್ರಾಮದ ಜೇನು ಕೃಷಿಕ ಪ್ರವೀಣ್ ತಿಳಿಸಿದರು.
ಬಾಳಗಡಿ ರಸ್ತೆಯಲ್ಲಿರುವ ಬೇಲೆಹಳ್ಳಿ ಅಶೋಕ್ ರಾವ್ ಅವರ ಕೃಷಿ ಭೂಮಿಯಲ್ಲಿ ಈಚೆಗೆ ‘ಇಂಚರ’ ಸ್ವ ಸಹಾಯ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಜೇನು ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಜೇನು ಕೃಷಿಕರಿಗೆ ಮಾಹಿತಿ ನೀಡಿದ ಅವರು, ‘ಜೇನು ಕೃಷಿ ಎಂಬುದು ಕುತೂಹಲಕಾರಿಯಾದ ಮತ್ತು ಮನಸ್ಸಿಗೆ ಮುದ ನೀಡುವ ಉಪಕಸುಬು’ ಎಂದರು.
‘ಜೇನು ಸಾಕಣೆ, ಕುಟುಂಬದ ಪಾಲು ಮಾಡುವಿಕೆ, ಜೇನು ತುಪ್ಪವನ್ನು ಯಂತ್ರದಲ್ಲಿ ತೆಗೆಯುವುದು, ಜೇನು ಕುಟುಂಬದ ರಕ್ಷಣೆ, ಮಳೆಗಾಲದಲ್ಲಿ ಅವುಗಳಿಗೆ ಆಹಾರ ನೀಡುವುದು, ಪೆಟ್ಟಿಗೆ ಸ್ವಚ್ಛಗೊಳಿಸುವುದು, ಜೇನುಕುಟುಂಬ ಸ್ಥಳಾಂತರ ಇತ್ಯಾದಿ ಕೆಲಸಗಳ ಪ್ರತಿ ಹಂತಗಳನ್ನೂ ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ಯಶಸ್ವಿ ಜೇನುಕೃಷಿ ಸಾಧ್ಯ’ ಎಂದು ತಿಳಿಸಿದರು.
‘ಇತ್ತೀಚಿನ ವರ್ಷಗಳಲ್ಲಿ ಅಡಿಕೆ ಮತ್ತು ಇತರ ಬೆಳೆಗಾರರು ಹೊಲ ಮತ್ತು ತೋಟಗಳಿಗೆ ವಿಷಕಾರಿ ಕ್ರಿಮಿನಾಶಕಗಳನ್ನು ಸಿಂಪಡಿಸುತ್ತಿರುವುದರಿಂದ ಜೇನು
ಹುಳು ನಾಶವಾಗುತ್ತಿವೆ. ಪ್ರತಿ ಕೃಷಿಕರು ಒಂದೆರಡು ಜೇನುಕುಟುಂಬ ಸಾಕಲೇಬೇಕು’ ಎಂದರು. ಕೊಪ್ಪದ ಜೇನು
ಕೃಷಿಕರಾದ ಹರ್ಡಿಕರ್, ಮನೋಹರ್, ಅಶೋಕ್ ಬೆಲೇಹಳ್ಳಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.