ತರೀಕೆರೆ: ‘ಬದುಕು ಮಾನವೀಯತೆಯಿಂದ ಕೂಡಿದಾಗ ಜೀವನ ಸಾರ್ಥಕವಾಗುತ್ತದೆ. ಇಲ್ಲದಿದ್ದರೆ ಸಮಾಜದಲ್ಲಿ ಶಾಂತಿ ಸೌಹಾರ್ದ ಇರಲ್ಲ’ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ನೌಕರರ ಸಂಘದ ತರೀಕೆರೆ ಘಟಕ ಮತ್ತು ಚಿಕ್ಕಮಗಳೂರಿನ ಯುವ ಸ್ಫೂರ್ತಿ ಅಕಾಡೆಮಿ ಸಹಯೋಗದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಎಲ್ಲರಲ್ಲೂ ಆಸೆ ಇರಬೇಕು. ಆದರೆ, ಯಾವ ದಾರಿಯಲ್ಲಿ ಹೋಗುತ್ತಿದ್ದೇವೆ ಎನ್ನುವುದು ಮುಖ್ಯ. ರಾಜಕೀಯಕ್ಕೆ ಬರುವವರು ಜನ ಸೇವೆ ಮಾಡಲು ಬರಬೇಕು, ಆಸ್ತಿ ಮಾಡಲು ಬರಬಾರದು’ ಎಂದರು.
‘ಇಂದು ಪ್ರಾಮಾಣಿಕರಿಗೆ ಬೆಲೆ ಇಲ್ಲ. ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವಂತಾಗಿದೆ. ಇದಕ್ಕಾಗಿ ಸಮಾಜದಲ್ಲಿ ಪೈಪೋಟಿ ನಡೆಯುತ್ತಿದೆ. ಅಕ್ರಮ ಸಂಪತ್ತು ಪಡೆದವನಿಗೆ ನಿದ್ರೆ ಬರುವುದಿಲ್ಲ. ದುರಾಸೆಯಿಂದ ಎಲ್ಲ ಅನ್ಯಾಯಗಳು ಆಗುತ್ತವೆ’ ಎಂದರು.
ಪುರಸಭಾ ಉಪಾಧ್ಯಕ್ಷೆ ಗಿರಿಜಾ ಪ್ರಕಾಶ್ ವರ್ಮಾ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಆರ್. ಅನಂತಪ್ಪ, ಯುವ ಸ್ಫೂರ್ತಿ ಅಕಾಡೆಮಿ ಅಧ್ಯಕ್ಷ ಸುಂದರೇಶ್ ಮಾತನಾಡಿದರು.
ಜಯ ಕರ್ನಾಟಕ ಸಂಘಟನೆಯ ಟಿ.ಎನ್. ಜಗದೀಶ್, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್, ತಾಲ್ಲೂಕು ಘಟಕದ ಅಧ್ಯಕ್ಷ ರವಿ ದಳವಾಯಿ, ವಿದ್ಯಾರ್ಥಿಗಳು, ನೌಕರರು ಇದ್ದರು.
ನೌಕರ ಸಂಘದ ಕಾರ್ಯದರ್ಶಿ ದೇವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿರ್ದೆಶಕ ಎಂ.ಬಿ. ರಾಮಚಂದ್ರಪ್ಪ ಸ್ವಾಗತಿಸಿದರು. ಕವಿತಾ ನಿರೂಪಿಸಿದರು. ಮಾನಸ ಪ್ರಾರ್ಥಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.