ADVERTISEMENT

ಶಾರದೆಗೆ ಇಂದ್ರಾಣಿ ಅಲಂಕಾರ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 5:03 IST
Last Updated 28 ಸೆಪ್ಟೆಂಬರ್ 2025, 5:03 IST
ಶನಿವಾರ ಇಂದ್ರಾಣಿ ಅಲಂಕಾರದಲ್ಲಿ ಕಂಗೋಳಿಸಿದ ಶೃಂಗೇರಿ ಶಾರದೆ
ಶನಿವಾರ ಇಂದ್ರಾಣಿ ಅಲಂಕಾರದಲ್ಲಿ ಕಂಗೋಳಿಸಿದ ಶೃಂಗೇರಿ ಶಾರದೆ   

ಶೃಂಗೇರಿ: ನವರಾತ್ರಿಯ 7ನೇ ದಿನವಾದ ಶನಿವಾರ ಶಾರದಾ ಮಠದಲ್ಲಿ ಶಾರದಾ ದೇವಿಗೆ ಇಂದ್ರಾಣಿ ಅಲಂಕಾರ ಮಾಡಲಾಗಿತ್ತು. ಐರಾವತ ವಾಹನವನ್ನು ಆರೋಹಣೆ ಮಾಡಿ, ಕೈಯಲ್ಲಿ ಇಂದ್ರನ ವಜ್ರಾಯುಧವನ್ನು ಹಿಡಿದು ಭಕ್ತರನ್ನು ಅನುಗ್ರಹಿಸುವ ರೀತಿಯಲ್ಲಿ ಅಲಂಕಾರ ಮಾಡಲಾಗಿತ್ತು.

ಶಾರದಾ ಮಠದಲ್ಲಿ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣ ವೇದಗಳ ಪಾರಾಯಣ, ಮಾಧವೀಯ ಶಂಕರ ದಿಗ್ವಿಜಯ, ಪ್ರಸ್ಥಾನತ್ರಯ ಭಾಷ್ಯಪಾರಾಯಣ, ಮಹಾವಿದ್ಯೆ, ದುರ್ಗಾ ಸಪ್ತಶತಿ, ಮುಂತಾದ ಪಾರಾಯಣ ಮತ್ತು ಸೂರ್ಯ ನಮಸ್ಕಾರ, ಭುವನೇಶ್ವರಿ ಜಪ, ದುರ್ಗಾ ಜಪ ಮುಂತಾದ ಜಪಗಳು, ಕುಮಾರೀ ಹಾಗೂ ಸುವಾಸಿನೀಪೂಜೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿತು. ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ ನಡೆಯಿತು. ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ಅವರು ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.

ಸಂಜೆ ನಡೆದ ಬೀದಿ ಉತ್ಸವದಲ್ಲಿ ನೆಮ್ಮಾರು, ಬುಕ್ಕಡಿಬೈಲು, ಹರೂರು, ಅಳಲೆಗುಡ್ಡ, ಮಲ್ನಾಡು, ವಿಶ್ವಹಿಂದೂ ಪರಿಷತ್ತು, ಬಜರಂಗದಳ, ಎಬಿವಿಪಿ, ಶ್ರೀರಾಮ ಸೇನೆ, ವಿಶ್ವಕರ್ಮ ಸೇವಾ ಸಮಾಜ ಮತ್ತು ವಿಶ್ವಕರ್ಮ ಮಹಿಳಾ ಮಂಡಳಿ, ಶಾಲಾ–ಕಾಲೇಜುಗಳ ನೌಕರರು, ಸಂಘ ಸಂಸ್ಥೆಗಳ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.

ADVERTISEMENT

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪಾಲಕ್ಕಾಡ್‍ನ ಮೇಲಾರ್ಕೋಡ್ ರವಿ ಭಾಗವತರ್ ಮತ್ತು ವೃಂದದಿಂದ ನಾಮ ಸಂಕೀರ್ತನೆ ನಡೆಯಿತು.

ದರ್ಬಾರು: ಸಿಂಹಾಸನದಲ್ಲಿರುವ ಶಾರದಾಂಬೆಯ ಉತ್ಸವ ಮೂರ್ತಿಯನ್ನು ಬಂಗಾರದ ರಥದಲ್ಲಿ ಇಡಲಾಯಿತು. ವೇದ, ವಾದ್ಯ ಪೋಷಗಳೊಂದಿಗೆ, ಛತ್ರಚಾಮರಗಳೊಂದಿಗೆ ದೇವಾಲಯದ ಒಳ ಪ್ರಾಂಗಳದಲ್ಲಿ ಮೂರು ಸುತ್ತು ರಥೋತ್ಸವ ನಡೆಯಿತು. ಬಳಿಕ ಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರಿಯ ಗುರುಗಳಾದ ವಿಧುಶೇಖರಭಾರತೀ ಸ್ವಾಮೀಜಿ ಅವರು ಕಿರೀಟ, ಆಭರಣಗಳನ್ನು ಧರಿಸಿ ಸಿಂಹಾಸನದಲ್ಲಿ ಆಸೀನರಾದರು. ನಾಲ್ಕು ವೇದಗಳ ಪಾರಾಯಣ, ಪಂಚಾಂಗ ಶ್ರವಣ, ಸಂಗೀತ ಸೇವೆ ನೆರವೇರಿತು. ಪ್ರಸಾದ ವಿನಿಯೋಗದ ಬಳಿಕ ಉತ್ತರನೀರಾಜನದೊಂದಿಗೆ ದರ್ಬಾರು ಮುಕ್ತಾಯಗೊಂಡಿತು.

ಶಾರದಾ ಮಠದ ವಿಧುಶೇಖರಭಾರತೀ ಸ್ವಾಮೀಜಿ ರಾಜ ದರ್ಬಾರ್‌ ನಡೆಸಿದರು
ಶರನ್ನವರಾತ್ರಿಯ ಪ್ರಯುಕ್ತ ಶಾರದಾ ಮಠದ ವಿಧುಶೇಖರಭಾರತೀ ಸ್ವಾಮೀಜಿಯವರು ಶಾರದಾ ಮಠದ ಎಲ್ಲಾ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.