ಚಿಕ್ಕಮಗಳೂರು: ನಗರದ ಉಪನೋಂದಣಾಧಿಕಾರಿ ಕಚೇರಿಗೆ ಮದುವೆಯಾಗಲು ಬುಧವಾರ ಬಂದಿದ್ದ ತಾಲ್ಲೂಕಿನ ಲಕ್ಷ್ಮೀಪುರದ ಮುಸ್ಲಿಂ ಯುವಕ ಮತ್ತು ಹಿಂದು ಯುವತಿಗೆ ಅಡ್ಡಿಪಡಿಸಿದ್ದಾರೆ ಎಂದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕ ಮತ್ತು ಯುವತಿ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರತ್ನಗಿರಿ ರಸ್ತೆಯ ಉಪನೋಂದಣಾಧಿಕಾರಿ ಕಚೇರಿಗೆ ಬಂದಿದ್ದರು. ಆ ಸಂದರ್ಭದಲ್ಲಿ ನಾಲ್ವರು ಯುವಕರು ಅಲ್ಲಿಗೆ ಹೋಗಿ ಮದುವೆಯಾಗದಂತೆ ತಡೆಯೊಡ್ಡಿದ್ದಾರೆ. ಆಗ ಗಲಾಟೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಯುವತಿಯನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ತಕ್ಷಣವೇ ವಿವಿಧ ಸಂಘಟನೆಗಳವರು ಅಲ್ಲಿಗೆ ಧಾವಿಸಿದ್ದಾರೆ. ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದಾರೆ. ಯವಕನನ್ನು ಅಲ್ಲಿಂದ ಗ್ರಾಮಾಂತರ ಠಾಣೆಗೆ ಕರೆದೊಯ್ದಿದ್ದಾರೆ.
‘ಕೆಲ ಸಂಘಟನೆಗಳ ನಾಲ್ವರು ಯುವಕರು ಮದುವೆಯಾಗದಂತೆ ತಡೆದು, ಹಲ್ಲೆ ಮಾಡಿದರು ಎಂದು ಯುವಕ ದೂರು ನೀಡಿದ್ದಾರೆ. ಅದರಂತೆ ಬಸವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚುತ್ತೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.
ಇದು ಮತೀಯ ಗುಂಡಾಗಿರಿಯೇ ಎಂಬ ಪ್ರಶ್ನೆಗೆ, ‘ಹಲ್ಲೆ ಮಾಡಿದವರನ್ನು ಪತ್ತೆ ಹಚ್ಚುತ್ತೇವೆ’ ಎಂದಷ್ಟೇ ಅವರು ಪ್ರತಿಕ್ರಿಯಿಸಿದರು.
‘ಪುತ್ರಿಯ ನಿರ್ಧಾರಕ್ಕೆ ಒಪ್ಪಿಗೆ’
ಯವತಿಯ ತಾಯಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಪುತ್ರಿಯ ಮದುವೆಗೆ ನನಗೆ ಒಪ್ಪಿಗೆ ಇದೆ. ಅವರಿಬ್ಬರೂ ಇಷ್ಟಪಟ್ಟಿದ್ದಾರೆ. ಇಬ್ಬರೂ ಮದುವೆಯಾಗಿ ಪುತ್ರಿ ಮತ್ತು ಅಳಿಯ ಹಾರ ಹಾಕಿಕೊಂಡು ಊರಿಗೆ ಬರಬೇಕು’ ಎಂದು ಹೇಳಿದರು.
‘ಪುತ್ರಿ ನಮ್ಮ ಮನೆಯ ಆಧಾರ ಸ್ತಂಭ. ಪುತ್ರಿಯೇ ನನಗೆ ಜೀವ. ಪುತ್ರಿ ಮತ್ತು ಅಳಿಯ ಚೆನ್ನಾಗಿ ಇದ್ದರೆ ಸಾಕು. ಯಾರು ಏನಂದುಕೊಂಡರೂ ನನಗೆ ಚಿಂತೆ ಇಲ್ಲ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.